ರಾಮ್ ರಹೀಮ್ ಜತೆ 100 ಕೋಟಿ ಡೀಲ್: ನಟ ಅಕ್ಷಯ್ ಕುಮಾರ್ ವಿಚಾರಣೆ
ಚಂಡೀಗಢ, ನವೆಂಬರ್ 21: ಜೈಲಿನಲ್ಲಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಪಂಜಾಬ್ನ ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ನಡುವೆ ಮಧ್ಯವರ್ತಿಯಾಗಿ ಡೀಲ್ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ಅಕ್ಷಯ್ ಕುಮಾರ್ ಅವರನ್ನು ಪಂಜಾಬ್ ಪೊಲೀಸರ ವಿಶೇಷ ತನಿಖಾ ದಳ (ಎಸ್ಐಟಿ) ಬುಧವಾರ ವಿಚಾರಣೆಗೆ ಒಳಪಡಿಸಿತು.
ಬೆಳಿಗ್ಗೆ 9.45 ಗಂಟೆ ಸುಮಾರಿಗೆ ಅಕ್ಷಯ್ ಅವರನ್ನು ಪ್ರಶ್ನಿಸುವ ಕಾರ್ಯ ಆರಂಭವಾಯಿತು. ವಿಚಾರಣೆಯನ್ನು ವಿಡಿಯೋದಲ್ಲಿ ದಾಖಲಿಸಿಕೊಳ್ಳಲಾಯಿತು. ಎಸ್ಐಟಿ ಕೇಂದ್ರ ಕಚೇರಿಯಲ್ಲಿ ಅವರು ಸುಮಾರು ಎರಡು ಗಂಟೆ ಇದ್ದರು.
ಮುಂಬೈನಿಂದ ಮುಂಜಾನೆ ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ ಅವರು, ಅಲ್ಲಿಂದ ನೇರವಾಗಿ ಪೊಲೀಸ್ ಕೇಂದ್ರ ಕಚೇರಿಗೆ ತೆರಳಿದರು.
ವಿಚಾರಣೆ ಬಳಿಕ ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಕಾಯುತ್ತಿದ್ದ ಮಾಧ್ಯಮದವರ ಕಣ್ಣುತಪ್ಪಿಸುವ ಸಲುವಾಗಿ ಅಕ್ಷಯ್ ಅವರನ್ನು ಆವರಣದ ಮತ್ತೊಂದು ದ್ವಾರದಿಂದ ಹೊರಗೆ ಕರೆದೊಯ್ಯಲಾಯಿತು.

ರಹೀಮ್-ಬಾದಲ್ ಜತೆ ನಂಟಿನ ವಿಚಾರಣೆ
ಗುರ್ಮೀತ್ ರಾಮ್ ರಹೀಮ್ ಮತ್ತು ಬಾದಲ್ ಅವರ ಜತೆಗಿನ ನಂಟು ಮತ್ತು ವ್ಯವಹಾರಗಳ ಕುರಿತಂತೆ ಆರೋಪದ ಕುರಿತು ಎಸ್ಐಟಿ, ಅಕ್ಷಯ್ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿತು. ಮುಂಬೈನಲ್ಲಿ ಅಕ್ಷಯ್ ವಾಸವಿರುವ ಸ್ಥಳದಲ್ಲಿಯೇ ದೇರಾ ಮುಖ್ಯಸ್ಥ ರಾಮ್ ರಹೀಮ್ ವಾಸವಿದ್ದರೇ ಎಂಬುದರ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು.
ಅಮೃತಸರದಲ್ಲಿ ವಿಚಾರಣೆಗೆ ಒಳಪಡಲು ಅಕ್ಷಯ್ಗೆ ಸೂಚಿಸಲಾಗಿತ್ತು. ಆದರೆ, ಅವರ ಮನವಿ ಮೇರೆಗೆ ಚಂಡೀಗಢದಲ್ಲಿರುವ ಎಸ್ಐಟಿ ಅಧಿಕಾರಿಗಳನ್ನು ಭೇಟಿ ಮಾಡಲು ಅನುಮತಿ ನೀಡಲಾಗಿತ್ತು.

100 ಕೋಟಿ ರೂ ಡೀಲ್
ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಶಿಕ್ಷೆಗೆ ಗುರಿಯಾಗಿರುವ ದೇರಾ ಮುಖ್ಯಸ್ಥ ಗುರ್ಮೀತ್ ಸಿಂಗ್ ರಹೀಮ್ ಸಿನಿಮಾ ಬಿಡುಗಡೆಗೂ ಮುನ್ನ ರಹೀಮ್ ಮತ್ತು ಬಾದಲ್ ಜೊತೆ 100 ಕೋಟಿ ರೂ. ಡೀಲ್ ಕುದುರಿಸಲು ಅಕ್ಷಯ್ ಕುಮಾರ್ ಮಧ್ಯಸ್ಥಿಕೆ ವಹಿಸಿದ್ದರು ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಲಾಯಿತು.

ಅಗೌರವ ತೋರಿಸಿಲ್ಲ
ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅಕ್ಷಯ್ ನಿರಾಕರಿಸಿದ್ದಾರೆ. ಈ ಆರೋಪಗಳ ಬಗ್ಗೆ ಪುರಾವೆಗಳನ್ನು ನೀಡುವಂತೆ ಅವರು ಸವಾಲೊಡ್ಡಿದ್ದು, ಸುಖಾಸುಮ್ಮನೆ ಆರೋಪ ಹೊರಿಸಬೇಡಿ ಎಂದು ಹೇಳಿರುವುದಾಗಿ ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಖ್ ಧರ್ಮೀಯರ ಬಗ್ಗೆ ಅಪಾರ ಗೌರವ ಮತ್ತು ಬಾಂಧವ್ಯ ಹೊಂದಿದ್ದು, ಅವರಿಗೆ ಅಗೌರವ ತೋರಿಸುವ ಅಥವಾ ನೋವುಂಟು ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಅಕ್ಷಯ್ ಕುಮಾರ್, ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಭೇಟಿ ಮಾಡಿಲ್ಲ- ಅಕ್ಷಯ್
ನಾನು ರಾಮ್ ರಹೀಮ್ ಅವರನ್ನು ನನ್ನ ಜೀವನದಲ್ಲಿ ಎಲ್ಲಿಯೂ ಭೇಟಿಯೇ ಮಾಡಿಲ್ಲ. ಮುಂಬೈನ ಜುಹುದಲ್ಲಿ ನನ್ನ ಮನೆ ಇರುವ ಸ್ಥಳದಲ್ಲಿಯೇ ರಾಮ್ ರಹೀಮ್ ನೆಲೆಸಿದ್ದರು ಎನ್ನುವ ಅಂಶ ಸಾಮಾಜಿಕ ಮಾಧ್ಯಮಗಳಿಂದ ಗೊತ್ತಾಗಿತ್ತು. ಆದರೆ, ನಾವು ಪರಸ್ಪರ ಭೇಟಿ ಮಾಡಿಲ್ಲ ಎಂದು ಪಂಜಾಬ್ ಪೊಲೀಸರ ಸಮನ್ಸ್ ಕೈ ಸೇರಿದ ಬಳಿಕ ಅಕ್ಷಯ್ ಟ್ವೀಟ್ ಮಾಡಿದ್ದರು.
ಪಂಜಾಬ್ನಿಂದ ಹೊರಕ್ಕೆ ಅಕ್ಷಯ್ ಕುಮಾರ್ ಅವರನ್ನು ನಾನು ಭೇಟಿ ಮಾಡಿಲ್ಲ ಎಂದು ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಸುಖಬೀರ್ ಅವರನ್ನು ಎಸ್ಐಟಿ ಸೋಮವಾರ ವಿಚಾರಣೆಗೆ ಒಳಪಡಿಸಿತ್ತು.

ಏನದು ಘಟನೆ?
2015ರಲ್ಲಿ ಪಂಜಾಬ್ನ ಫರೀದ್ಕೋಟ್ ಜಿಲ್ಲೆಯ ಹಾಲ್ ಕಲನ್ ಗ್ರಾಮದಲ್ಲಿ ಸಿಖ್ಖರ ಪವಿತ್ರ ಗ್ರಂಥ 'ಗುರು ಗ್ರಂಥ ಸಾಹಿಬ್'ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿ ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಗೋಲಿಬಾರ್ ನಡೆಸಿದ್ದು, ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು.

ಅಕ್ಷಯ್ ಹೆಸರು ತಳಕು
ಇದು ಭಾರಿ ವಿವಾದ ಸೃಷ್ಟಿಸಿತ್ತು. ಈ ಸಂಬಂಧ ರಚಿಸಲಾದ ನ್ಯಾಯಮೂರ್ತಿ ರಂಜಿತ್ ಸಿಂಗ್ ಆಯೋಗ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ಅದರಲ್ಲಿ ನಟ ಅಕ್ಷಯ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಮುಂಬೈನಲ್ಲಿರುವ ಅಕ್ಷಯ್ ಕುಮಾರ್ ಅವರ ಫ್ಲಾಟ್ನಲ್ಲಿ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಜತೆ ಎಂಎಂಜಿ ಸಿನಿಮಾ ಬಿಡುಗಡೆ ಸಂಬಂಧ ಚರ್ಚೆ ನಡೆಸಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು.
ಎಂಎಂಜಿ ಸಿನಿಮಾದಲ್ಲಿ ರಾಮ್ ರಹೀಮ್ ಸಿಖ್ಖರ ಪವಿತ್ರ ಗ್ರಂಥವನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಧರ್ಮ ನಿಂದನೆ ಆರೋಪದಲ್ಲಿ ಅವರಿಗೆ ಕ್ಷಮಾದಾನ ಸಿಗುವ ಮುನ್ನವೇ ಅಕ್ಷಯ್ ಮನೆಯಲ್ಲಿ ಸಭೆ ನಡೆದಿತ್ತು. ಹೀಗಾಗಿ ಅಕ್ಷಯ್ ಅವರ ಹೆಸರು ಇದರಲ್ಲಿ ತಳಕು ಹಾಕಿಕೊಂಡಿತ್ತು.

ಶಿಕ್ಷೆಗೆ ಒಳಗಾಗಿರುವ ರಹೀಮ್
ಎಂಎಂಜಿ ಸಿನಿಮಾ ಭಾರಿ ವಿವಾದ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಸ್ವಯಂ ಘೋಷಿತ ಆಧ್ಯಾತ್ಮಿಕ ಗುರು ರಾಮ್ ರಹೀಮ್ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿತ್ತು. 2002ರಲ್ಲಿ ಇಬ್ಬರು ಮಹಿಳೆಯರ ಮೇಲೆ ಅವರು ಅತ್ಯಾಚಾರ ಎಸಗಿರುವುದು ಸಾಬೀತಾಗಿತ್ತು. ಅವರಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications