ಇಟಲಿಯಿಂದ ಅಮೃತಸರಕ್ಕೆ ಬಂದ 125 ಪ್ರಯಾಣಿಕರಿಗೆ ಕೊರೊನಾ
ಅಮೃತಸರ ಜನವರಿ 6: ಪಂಜಾಬ್ನ ಅಮೃತಸರದಲ್ಲಿ ಇಟಲಿಯಿಂದ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಮಿಲನ್ನಿಂದ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಮೃತಸರದಲ್ಲಿ ಇಂದು ಮಧ್ಯಾಹ್ನ ಇಳಿದ ನಂತರ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಈ ವೇಳೆ 125 ಪ್ರಯಾಣಿಕರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿಕೆ ಸೇಠ್ ಹೇಳಿದ್ದಾರೆ.
ವಿಮಾನದಲ್ಲಿ ಒಟ್ಟು 170 ಪ್ರಯಾಣಿಕರು ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಇಟಲಿಯು ಕೊರೊನಾ ಹೆಚ್ಚರುವ ಅಪಾಯದಲ್ಲಿರುವ ದೇಶಗಳಲ್ಲಿ ಒಂದಾಗಿರುವುದರಿಂದ, ಎಲ್ಲಾ 170 ಪ್ರಯಾಣಿಕರನ್ನು COVID-19 ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಅವರಲ್ಲಿ 125 ಪ್ರಯಾಣಿಕರಿಗೆ ಕೊರೊನಾ ದೃಢಪಟ್ಟಿದೆ. ಒಟ್ಟು 170 ಪ್ರಯಾಣಿಕರಲ್ಲಿ 19 ಮಕ್ಕಳಾಗಿರುವುದರಿಂದ ಅವರಿಗೆ ಆರ್ಟಿ-ಪಿಸಿಆರ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಪಾಸಿಟಿವ್ ವರದಿ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ಗೆ ಕಳುಹಿಸಲಾಗುವುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಹೊರಡಲು ಕಾಯುತ್ತಿರುವುದನ್ನು ಮತ್ತು ಪೊಲೀಸರು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಇಟಲಿಯಿಂದ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದರೆ ಇಟಲಿಯಲ್ಲಿ ಪರೀಕ್ಷೆ ನಡೆಸಿರಲಿಲ್ಲವೇ ಎಂದು ಅನೇಕ ಪ್ರಯಾಣಿಕರು ಪ್ರಶ್ನಿಸಿದ್ದಾರೆ.
ಚಂಡಿಗಢದಲ್ಲಿ ಇಂದು 229 ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಮೇ 24 ರಿಂದ 245 ಪ್ರಕರಣಗಳು ವರದಿಗಿದೆ. ನಗರ 200ರ ಗಡಿ ದಾಟಲು 24 ದಿನಗಳನ್ನು ತೆಗೆದುಕೊಂಡಿದೆ. ನಗರದಲ್ಲಿ 675 ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 52 ಜನ ಆಸ್ಪತ್ರೆಯಲ್ಲಿದ್ದಾರೆ. ಏಳು ರೋಗಿಗಳು ವೆಂಟಿಲೇಟರ್ ಹಾಸಿಗೆಯಲ್ಲಿದ್ದಾರೆ. PGI ಯ 197 ಆರೋಗ್ಯ ಕಾರ್ಯಕರ್ತರು (HCWs) ಡಿಸೆಂಬರ್ 20 ಮತ್ತು ಜನವರಿ 4 ರ ನಡುವೆ ಕೋವಿಡ್ -19 ಒಳಗಾಗಿದ್ದಾರೆ. ಇವರಲ್ಲಿ 88 ವೈದ್ಯರು ಮತ್ತು ಅವರೆಲ್ಲರಿಗೂ ಕೋವಿಡ್ -19 ವಿರುದ್ಧ ಲಸಿಕೆ ನೀಡಲಾಗಿದೆ. ಇವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗಿಲ್ಲ ಮತ್ತು ಒಬ್ಬರಿಗೆ ಭಾಗಶಃ ಲಸಿಕೆ ನೀಡಲಾಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳ
ಈ ಮಧ್ಯೆ ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ. ದೇಶದಲ್ಲಿ ಇಂದು 90,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿಯಾಗಿವೆ. ದೆಹಲಿ, ಮುಂಬೈ ಮತ್ತು ಭಾರತದ ಇತರ ದೊಡ್ಡ ನಗರಗಳು ಕೋವಿಡ್ ಪ್ರಕರಣಗಳ ಉಲ್ಬಣವನ್ನು ಅನುಭವಿಸುತ್ತಿವೆ. ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ವರ್ಷದ ಆರಂಭದಿಂದ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ಇಂದು 90,928 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,85,401 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 19,206 ಜನ ಗುಣಮುಖರಾಗಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 325 ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಇದು ಕಳೆದ ಕೆಲವು ತಿಂಗಳುಗಳಲ್ಲಿ ಹೋಲಿಸಿದರೆ ಕೇರಳ 258 ಸಾವುಗಳನ್ನು ಒಳಗೊಂಡಿದೆ. ನಿನ್ನೆ ದೇಶದಲ್ಲಿ 58,097 ಕೊರೊನಾ ಪ್ರಕರಣಗಳು ದಾಖಲಾಗಿದ್ದವು.
ಓಮಿಕ್ರಾನ್ ಈಗ 26 ರಾಜ್ಯಗಳಲ್ಲಿದೆ. ಇಂದು ದೇಶದಲ್ಲಿ 495 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು ಈವರೆಗೆ ದೇಶದಲ್ಲಿ 2,630 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 797 ಪ್ರಕರಣಗಳು ವರದಿಯಾಗಿದ್ದು, ದೆಹಲಿಯಲ್ಲಿ 465, ರಾಜಸ್ಥಾನ 236 ಮತ್ತು ಕೇರಳ 234 ಸೋಂಕುಗಳು ವರದಿಯಾಗಿವೆ. ಪಂಜಾಬ್ ಇದುವರೆಗೆ ಎರಡು ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ರಾಜಸ್ಥಾನದಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಓಮಿಕ್ರಾನ್ಗೆ ಬಲಿಯಾದ ಮೊದಲ ಸೋಂಕಿತರಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ, ದೆಹಲಿ ಮತ್ತು ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರನ್ನು ಕೊರೊನಾ ಹರಡುವ ಪ್ರಮುಖ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದೆ. ಆದರೂ ಆರೋಗ್ಯ ಸೌಲಭ್ಯಗಳು ದುರ್ಬಲವಾಗಿರುವ ಗ್ರಾಮಾಂತರಕ್ಕೆ ರೋಗವು ಶೀಘ್ರದಲ್ಲೇ ಹರಡುತ್ತದೆ ಎಂದು ರಾಜ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.