ಬಂಡೀಪುರ ಅರಣ್ಯದಂಚಿನ ಬೇಟೆಗಾರರ ಸಂಚಿಗೆ ಸಾಕುಪ್ರಾಣಿಗಳು ಬಲಿ
ಚಾಮರಾಜನಗರ, ಜುಲೈ 10: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಬೇಟೆ ಮಿತಿಮೀರಿದೆ. ಪ್ರಾಣಿಗಳ ಬೇಟೆಯಾಡುವ ಸಲುವಾಗಿ ದುಷ್ಕರ್ಮಿಗಳು ಆಹಾರದೊಂದಿಗೆ ಸಿಡಿಮದ್ದುಗಳನ್ನಿಡುತ್ತಿದ್ದು, ಸಾಕು ಪ್ರಾಣಿಗಳಿಗೆ ಕಂಟಕವಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳನ್ನು ಬೇಟೆಯಾಡುವ ಬೇಟೆಗಾರರ ಸಂಖ್ಯೆ ಹೆಚ್ಚಾಗಿದ್ದು, ಕಾರ್ಯಾಚರಣೆ ವೇಳೆ ಕೆಲವರಷ್ಟೆ ಸಿಕ್ಕಿ ಬೀಳುತ್ತಿದ್ದಾರೆಯಾದರೂ ಹೆಚ್ಚಿನವರು ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬೇಟೆ ಯಾವುದೇ ತೊಂದರೆಯಿಲ್ಲದೆ ನಡೆಯುತ್ತಲೇ ಸಾಗಿದೆ.

ಕೆಲವರು ಬಂದೂಕು ಬಳಸಿ ಬೇಟೆಯಾಡುತ್ತಿದ್ದರೆ, ಮತ್ತೆ ಕೆಲವರು ಬಲೆ, ಉರುಳು ಹಾಕಿ ಅಥವಾ ಸಿಡಿಮದ್ದು ಇರಿಸಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಇದು ನಿರಂತರವಾಗಿ ನಡೆದರೂ ಆಗೊಮ್ಮೆ ಈಗೊಮ್ಮೆ ಮಾತ್ರ ಬೆಳಕಿಗೆ ಬರುತ್ತಿದೆ.
ಆಹಾರದೊಂದಿಗೆ ಸಿಡಿಮದ್ದನ್ನು ಇಡುತ್ತಿರುವುದರಿಂದ ಸಾಕು ಪ್ರಾಣಿಗಳು ಸೇರಿದಂತೆ ಅಮಾಯಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಇದೇ ಸಿಡಿಮದ್ದು ಪ್ರಿನ್ಸ್ ಹುಲಿಯ ಸಾವಿಗೂ ಕಾರಣವಾಗಿತ್ತು ಎನ್ನಲಾಗುತ್ತಿದೆ. ಇದೀಗ ಯಾರೋ ದುಷ್ಕರ್ಮಿಳು ಇಟ್ಟಿದ್ದ ಸಿಡಿ ಮದ್ದು ಹಸುವೊಂದರ ಬಾಯಿಯನ್ನು ಛಿದ್ರಮಾಡಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮವಾದ ಕುಂದಕೆರೆ ಗ್ರಾಮದ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ವನ್ಯಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ಆಹಾರದಲ್ಲಿ ಸಿಡಿಮದ್ದನಿಟ್ಟಿದ್ದರು. ಇದನ್ನು ಅರಿಯದೆ ಮೇಯಲು ಬಿಟ್ಟಿದ್ದ ಗ್ರಾಮದ ನಾಗಪ್ಪ ಎಂಬುವರ ಹಸು ಅವನ್ನು ಆಹಾರ ಎಂದು ಭಾವಿಸಿ ತಿನ್ನಲು ಮುಂದಾಗಿದ್ದು ಪರಿಣಾಮ ಸ್ಪೋಟಗೊಂಡು ದವಡೆ ಭಾಗ ಛಿದ್ರವಾಗಿದೆ. ಇದರಿಂದ ಆಹಾರ ಸೇವಿಸಲಾಗದಂತಾಗಿದೆ.
ಈ ಹಿಂದೆ ಕೂಡ ಇದೇ ಗ್ರಾಮದ ಚಿಕ್ಕಬಸಪ್ಪ ಎಂಬುವರಿಗೆ ಸೇರಿದ ಹಸು ಕೂಡ ಇದೇ ರೀತಿಯಾಗಿ ಸಾವನ್ನಪ್ಪಿದೆ ಎನ್ನಲಾಗಿದೆ. ಗ್ರಾಮದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಸಾಕುಪ್ರಾಣಿಗಳನ್ನು ಮೇಯಲು ಬಿಡುವುದೇ ಕಷ್ಟವಾಗಿದೆ ಎಂಬುದು ಗ್ರಾಮಸ್ಥರು ಅಳಲು.












Click it and Unblock the Notifications