ಗುಂಡ್ಲುಪೇಟೆಯಲ್ಲಿ ಅತ್ತೆ ಪರವಾಗಿ ಮತ ಯಾಚಿಸುತ್ತಿರುವ ಸೊಸೆ
ಬಿಸಿಲಿನ ತಾಪಕ್ಕಿಂತ ಗುಂಡ್ಲುಪೇಟೆ ಉಪಚುನಾವಣೆಯ ಬಿಸಿ ಜೋರಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಪರವಾಗಿ ಅವರ ಸೊಸೆ ವಿದ್ಯಾಶ್ರೀ ಮತಯಾಚನೆ ಮಾಡುತ್ತಿದ್ದಾರೆ.
ಗುಂಡ್ಲುಪೇಟೆ, ಏಪ್ರಿಲ್ 1: ಗುಂಡ್ಲುಪೇಟೆ ಉಪಚುನಾವಣೆ ಬೇಸಿಗೆಗಿಂತ ಹೆಚ್ಚು ಪ್ರಖರವಾಗಿ ದಿನದಿನಕ್ಕೂ ಕಾವೇರುತ್ತಿದೆ. ಎಚ್.ಎಸ್.ಮಹದೇವ ಪ್ರಸಾದ್ ನಿಧನರಾಗಿದ್ದರಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅವರ ಪತ್ನಿ ಗೀತಾ ಅವರೇ ಸ್ಪರ್ಧಿಸಿದ್ದರೂ ಅನುಕಂಪದ ಮತಗಳು ಕೈ ಹಿಡಿಯುತ್ತವೆ ಎಂಬ ನಂಬಿಕೆ ಇದ್ದರೂ ಕೈ ಪಕ್ಷದ ನಾಯಕರೀಗ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ರಾಜಕಾರಣಕ್ಕೆ ಹೊಸಬರಾದ ಗೀತಾ ಅವರ ಪಾಲಿಗೆ ಈ ಚುನಾವಣೆ ಗೌರವದ ಪ್ರಶ್ನೆ. ಅನುಕಂಪ, ಜಾತಿ ಏನೇ ಅವರ ಪರವಾಗಿದ್ದರೂ ಬಿಜೆಪಿಯ ಪ್ರಚಾರದ ರೀತಿ ಗೀತಾ ಅವರಿಗೆ ಒಂದಿಷ್ಟು ಮುಜುಗರ ಹಾಗೂ ಆತಂಕ ತಂದಿದೆ ಎಂಬುದಂತೂ ಅವರ ಮಾತಿನಲ್ಲೇ ಗೊತ್ತಾಗುತ್ತದೆ.[ಉಪಚುನಾವಣೆ - ಚಿರ ಯುವಕರಂತಾದ ಯಡಿಯೂರಪ್ಪ]

ಆ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಅವರು ಈಗಾಗಲೇ ಕ್ಷೇತ್ರದ ನೂರಾರು ಗ್ರಾಮಗಳಿಗೆ ಭೇಟಿ ನೀಡಿ, ಮತ ಯಾಚಿಸಿದ್ದಾರೆ. ವೃದ್ಧರು, ಮಹಿಳೆಯರ ಕೈಹಿಡಿದು ಮಾತನಾಡಿಸುತ್ತಿದ್ದಾರೆ. ರೋಡ್ ಶೋ ನಡೆಸಿ, ಮನೆಮನೆಗೆ ಭೇಟಿ ನೀಡಿ ಮತ ಕೇಳುತ್ತಿದ್ದಾರೆ. ಇನ್ನು ಅವರಿಗೆ ಕೆಲ ಮಹಿಳೆಯರು ಸಾಥ್ ನೀಡುತ್ತಿದ್ದಾರೆ.

ಸ್ವತಃ ಮುಖ್ಯಮಂತ್ರಿಯಾದಿಯಾಗಿ, ಸಚಿವರು ಸಹ ಕ್ಷೇತ್ರಕ್ಕೆ ಬಂದು, ಗೀತಾ ಅವರ ಪರ ಪ್ರಚಾರ ನಡೆಸುತ್ತಿರುವುದರಿಂದ ಬಲ ಬಂದಂತಾಗಿದೆ. ಈ ಮಧ್ಯೆ ತಮ್ಮದೇ ಮಹಿಳಾ ಪಡೆಯನ್ನು ಕಟ್ಟಿಕೊಂಡಿರುವ ಗೀತಾ ಅವರ ಸೊಸೆ ವಿದ್ಯಾಶ್ರೀ ಅವರು ಅತ್ತೆ ಪರವಾಗಿ ಮತ ಯಾಚಿಸುತ್ತಿದ್ದಾರೆ.[ಉಪಚುನಾವಣೆ: ಗೀತಾ ಮಹದೇವಪ್ರಸಾದ್ ಕಣ್ಣೀರು!]
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಮಹಿಳೆಯರ ಮನವೊಲಿಸಿ ಮತ ಕೇಳುತ್ತಿದ್ದಾರೆ. ನನ್ನ ಮಾವ ಎಚ್.ಎಸ್.ಮಹದೇವಪ್ರಸಾದ್ ಪ್ರಮುಖ ವಾಣಿಜ್ಯಕೇಂದ್ರವಾದ ತೆರಕಣಾಂಬಿಯ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದ್ದರು ಎಂದು ಹೇಳುತ್ತಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ನಿರ್ಮಾಣ, ಸರಕು ಸಾಮಗ್ರಿಗಳ ಸಂಗ್ರಹಕ್ಕೆ ದೊಡ್ಡ ಗೋದಾಮುಗಳು, ವಿದ್ಯಾರ್ಥಿಗಳ ಕಲಿಕೆಗೆ ಸರ್ಕಾರಿ ಪದವಿ ಹಾಗೂ ಐಟಿಐ ಕಾಲೇಜು ಸ್ಥಾಪನೆ, ಸುಸಜ್ಜಿತ ಬಸ್ ನಿಲ್ದಾಣ, ಹೆದ್ದಾರಿ ಅಭಿವೃದ್ದಿ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ ಎಂದು ನೆನಪಿಸುತ್ತಿದ್ದಾರೆ.[ಗುಂಡ್ಲುಪೇಟೆ: ಸಚಿವ ಯು.ಟಿ.ಖಾದರ್ ವಿರುದ್ಧ ಎಫ್ಐಆರ್]

ಜತೆಗೆ ಭೂಮಿಪೂಜೆ ನೆರವೇರಿಸಿದ್ದ ಹಲವು ಕಾರ್ಯಕ್ರಮಗಳು ನನೆಗುದಿಗೆ ಬಿದ್ದಿವೆ. ಆದ್ದರಿಂದ ಅವುಗಳ ಮುಂದುವರಿಕೆಗೆ ಅನುಕೂಲವಾಗುವಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನ್ನ ಅತ್ತೆ ಗೀತಾ ಮಹದೇವಪ್ರಸಾದ್ ಅವರಿಗೆ ಮತ ನೀಡಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ ಈ ಎಲ್ಲರ ಮನವಿಗೆ ಮತದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ತಿಳಿಯಲು ಏಪ್ರಿಲ್ 13ರಂದು ಬರುವ ಫಲಿತಾಂಶದವರೆಗೆ ಕಾಯಬೇಕಾಗಿದೆ.












Click it and Unblock the Notifications