ಗುಂಡ್ಲುಪೇಟೆ ಹೈಟೆಕ್ ಬಸ್ ನಿಲ್ದಾಣದಲ್ಲಿ ಕಿರಿಕಿರಿ, ಸಮಸ್ಯೆ ಥರಾವರಿ!
ಗುಂಡ್ಲುಪೇಟೆ ಬಸ್ ನಿಲ್ದಾಣಕ್ಕೆ ಹೈಟೆಕ್ ಎಂಬ ಕೋಡು. ಆದರೆ ಇಲ್ಲಿರುವ ಅವ್ಯವಸ್ಥೆ ಆ ಮಹದೇಶ್ವರನಿಗೆ ಪ್ರೀತಿ. ಎಷ್ಟೆಲ್ಲ ಸಮಸ್ಯೆ ಹೊತ್ತಿರುವ ಈ ನಿಲ್ದಾಣಕ್ಕೆ ಆ ಕಾರಣಕ್ಕೆ ಪ್ರಶಸ್ತಿ ಕೊಡಬೇಕು
ಗುಂಡ್ಲುಪೇಟೆ, ಫೆಬ್ರವರಿ 3: ಪ್ರಯಾಣಿಕರ ಅನುಕೂಲಕ್ಕಾಗಿ ಸರಕಾರವು ಪಟ್ಟಣದಲ್ಲಿ ಕೆ ಎಸ್ ಆರ್ ಟಿಸಿಯ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿ, ಸಾರ್ವಜನಿಕರ ಸೇವೆಗೆ ಅರ್ಪಿಸಿದೆ. ಆದರೂ ಇಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಕಿರಿಕಿರಿ ಮಾಡುತ್ತಿವೆ.
ಕುಳಿತುಕೊಳ್ಳಲು ಸಮರ್ಪಕ ಆಸನವಿಲ್ಲ, ಪಾಸ್ ಹೊಂದಿದ ವಿದ್ಯಾರ್ಥಿಗಳ ಕಡೆಗಣನೆ, ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತ, ವಾಹನಗಳ ನಿಲುಗಡೆಗೆ ಹೆಚ್ಚಿನ ಹಣ ವಸೂಲಿ, ಸ್ವಚ್ಛತೆ ಕೊರತೆ... ಹೀಗೆ ಹಲವು ಸಮಸ್ಯೆಗಳು ಬಸ್ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರನ್ನು ಕಾಡುತ್ತಿವೆ.[ಪ್ರಯಾಣಕ್ಕೆ ಅವಕಾಶ ನೀಡದ ಕೆಎಸ್ ಆರ್ ಟಿಸಿಗೆ 10 ಸಾವಿರ ದಂಡ]
ಮೂರು ವರ್ಷದ ಹಿಂದೆ ಪಟ್ಟಣದ ಸಾರಿಗೆ ಸಂಸ್ಥೆಯ ನಿಲ್ದಾಣವನ್ನು ಹೈಟೆಕ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಿದಾಗ ಸಾರ್ವಜನಿಕರು ಖುಷಿ ಪಟ್ಟಿದ್ದರು. ಆದರೆ ಇಲ್ಲಿನ ಅವ್ಯವಸ್ಥೆಯನ್ನು ಕಣ್ಣಾರೆ ನೋಡಿದ ಬಳಿಕ ಹಿಡಿಶಾಪ ಹಾಕುತ್ತಿದ್ದಾರೆ. ಗುಂಡ್ಲುಪೇಟೆ ಡಿಪೋದಲ್ಲಿ ಹೆಚ್ಚಿನ ಬಸ್ ಗಳಿದ್ದರೂ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಸೇವೆ ನೀಡುತ್ತಿಲ್ಲ ಎಂಬುದು ಪ್ರಯಾಣಿಕರ ಮತ್ತೊಂದು ಆರೋಪವಾಗಿದೆ.
ಕೊಯಮತ್ತೂರು ಕಡೆಗೆ ಹೆಚ್ಚಿನ ಬಸ್ ಗಳನ್ನು ಈ ಹಿಂದೆ ಓಡಿಸುತ್ತಿದ್ದರಾದರೂ ನಷ್ಟದ ನೆಪ ಮಾಡಿ ಬಸ್ ಸಂಪರ್ಕ ನಿಲ್ಲಿಸಲಾಗಿದೆ ಎಂಬುದು ಪ್ರಯಾಣಿಕರ ದೂರು. ವ್ಯಾಪಾರ ಉದ್ದೇಶಗಳಿಗೆ ಆಗಾಗ ಕೊಯಮತ್ತೂರಿಗೆ ತೆರಳುವವರಿದ್ದು, ಈಗ ಬಸ್ ಸಂಪರ್ಕವನ್ನು ನಿಲ್ಲಿಸಿರುವುದು ಅವರಿಗೆ ತೊಂದರೆಯಾಗಿ ಪರಿಣಮಿಸಿದೆ.[ಬೈಂದೂರಿನ ಗೋಪಾಲ ಪೂಜಾರಿಗೆ ಕೆಎಸ್ಆರ್ ಟಿಸಿ ಅಧ್ಯಕ್ಷ ಪಟ್ಟ]
ಮಹದೇಶ್ವರ ಬೆಟ್ಟ ಸೇರಿದಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳ ಕಡೆಗೂ ಬಸ್ ಸಂಚಾರ ನಿಲ್ಲಿಸಿರುವುದು ಈ ಭಾಗದ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಸ್ ನಿಲ್ದಾಣದಲ್ಲಿ ಹಲವು ಪ್ಲಾಟ್ ಫಾರಂಗಳಿದ್ದರೂ ಬಸ್ ಗಾಗಿ ಕಾಯುವ ಪ್ರಯಾಣಿಕರಿಗಾಗಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಇನ್ನು ಸಮೀಪದ ಮೋರಿಯಲ್ಲಿ ಹರಿಯುವ ಕೊಳಚೆ ನೀರಿನಿಂದ ಬರುವ ದುರ್ವಾಸನೆಯಿಂದ ಮೂಗು ಮುಚ್ಚಿ ಕುಳಿತುಕೊಳ್ಳಬೇಕಾದ ಕರ್ಮ ಪ್ರಯಾಣಿಕರದ್ದಾಗಿದೆ.[ಇಲ್ಲೊಬ್ಬ ಟಿಸಿ ಅವ್ನೇ, ಅವ್ನಿಗೆ ಕರ್ನಾಟಕದ ಗಾಡಿ ಕಂಡ್ರೆ ಆಗಲ್ಲಾ]
ಈ ನಡುವೆ ಪಾಸ್ ಹೊಂದಿದ ವಿದ್ಯಾರ್ಥಿಗಳನ್ನು ಕಂಡರೆ ಸಾರಿಗೆ ಸಿಬ್ಬಂದಿ ಬಸ್ ನಿಲ್ಲಿಸದೆ ಸಾಗುತ್ತಾರೆ ಎಂಬ ಆರೋಪ ಇದೆ. ಪಟ್ಟಣದ ಪದವಿ ಕಾಲೇಜು, ಹಂಗಳ ರಸ್ತೆಯಲ್ಲಿನ ಐಟಿಐ ಕಾಲೇಜು, ಬೇಗೂರಿನ ಐಟಿಐ ಕಾಲೇಜು, ಚಿಕ್ಕತುಪ್ಪೂರಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ, ನಂಜನಗೂಡಿನಿಂದ ಪಟ್ಟಣಕ್ಕೆ ಬರುವ ಹುಲ್ಲಹಳ್ಳಿ ಸರ್ಕಲ್ ಬಳಿ ವಿದ್ಯಾರ್ಥಿಗಳು ಕಾಯುತ್ತಾ ನಿಂತರೂ ಈ ಸ್ಥಳಗಳಲ್ಲಿ ಬಸ್ ನಿಲ್ಲಿಸದೆ ಬರುತ್ತಾರೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.
ಎರಡು ಸಾವಿರ ಚದರಡಿ ವಿಸ್ತೀರ್ಣದಲ್ಲಿ ವಾಹನ ನಿಲುಗಡೆಯ ಶುಲ್ಕದ ಟೆಂಡರ್ ಪಡೆದ ಗುತ್ತಿಗೆದಾರರು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.