ವೈಕುಂಠ ಏಕಾದಶಿ 2023: ಚಾಮರಾಜನಗರ ಜಿಲ್ಲೆಯ ಬಿಆರ್ ಹಿಲ್ಸ್ಗೆ ಕೇಂದ್ರ ಅರಣ್ಯ ಸಚಿವ ಭೇಟಿ
ಚಾಮರಾಜನಗರ, ಜನವರಿ, 02: ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಸೋಮವಾರ (ಜನವರಿ 02) ಯಳಂದೂರು ತಾಲೂಕಿನ ಬಿಳಿಗಿರಿರಂಗನನಾಥ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು.
ವೈಕುಂಠ ಏಕಾದಶಿ ಹಿನ್ನೆಲೆ ವಿಷ್ಣು ದೇವಾಲಯವಾದ ಬಿಳಿಗಿರಿಬನಕ್ಕೆ ಭೇಟಿ ಕೊಟ್ಟು ರಂಗನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇನ್ನು, ಇದಕ್ಕೂ ಮೊದಲು ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಅರಣ್ಯ ಸಚಿವರು ಸಫಾರಿ ನಡೆಸಿದ್ದಾರೆ. ಹಾಗೆಯೇ ಮಂಗಳವಾರ ಬಂಡೀಪುರದಲ್ಲಿ ನಡೆಯುವ ಎನ್ಟಿಸಿಎ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕ್ಕಿಕ್ಕಿರಿದು ಸೇರಿದ್ದ ಪ್ರವಾಸಿಗರ ದಂಡು
ದೇವಾಲಯಕ್ಕೆ ಹರಿದುಬಂದ ಭಕ್ತ ಸಾಗರ
ಚಾಮರಾಜನಗರ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದ್ದು, ಚಾಮರಾಜನಗರದ ಕಾಡು ನಾರಾಯಣಸ್ವಾಮಿ ದೇವಾಲಯ, ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನಾಥನ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಚಾಮರಾಜನಗರದಲ್ಲಿನ ಕಾಡು ನಾರಾಯಣಸ್ವಾಮಿ ದೇವಾಲಯದಲ್ಲಿ ಸಪ್ತದ್ವಾರಗಳನ್ನು ನಿರ್ಮಾಣ ಮಾಡಲಾಗಿದ್ದು, ದ್ವಾರಗಳನ್ನು ದಾಟಿ ದೇವರ ದರ್ಶನ ಪಡೆಯಲು ಭಕ್ತಸಾಗರವೇ ಹರಿದುಬಂದಿತ್ತು. ಭಕ್ತರು ವೈಕಂಠ ದ್ವಾರದ ಮೂಲಕ ಶ್ರೀದೇವಿ, ಭೂದೇವಿ ಸಮೇತ ನಾರಾಯಣಸ್ವಾಮಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸುತ್ತಲೇ ಇದ್ದಾರೆ. ಹಾಗೆಯೇ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪ್ರಮುಖ ತಾಣಗಳಲ್ಲಿ ಪ್ರವಾಸಿಗರದೇ ದರ್ಬಾರ್
2023ರ ವರ್ಷ ಕಾಲಿಟ್ಟ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾದ್ಯಂತ ಸಂಭ್ರಮಾಚರಣೆಗಳು ಜೋರಾಗಿ ನಡೆದಿದ್ದು, ಪ್ರವಾಸಿ ತಾಣಗಳು ಇನ್ನು ತುಂಬಿ ತುಳುಕುತ್ತಿವೆ. ವರ್ಷಾರಂಭ ಭಾನುವಾರವೇ ಬಂದ ಹಿನ್ನೆಲೆಯಲ್ಲಿ ರಜೆ ಜೊತೆಗೆ, ಹೊಸವರ್ಷದ ಸಂಭ್ರಮಾಚರಣೆಗೆ ಹೊಸ ಕಳೆ ಬಂದಂತಿತ್ತು. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನನಾಥ ದೇವಾಲಯ, ಚಾಮರಾಜನಗರ ತಾಲೂಕಿನ ಕೆ.ಗುಡಿ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಜನಸಾಗರವೇ ಹರಿದುಬಂದಿದೆ.
ವರ್ಷದ ಕೊನೆಯ ದಿನವಾದ ಶನಿವಾರ ಮಲೆಮಹದೇಶ್ವರ ಬೆಟ್ಟದಲ್ಲಿ ನೂರಾರು ಭಕ್ತರು ಚಿನ್ನದ ರಥ ಎಳೆದು ಪುನೀತರಾಗಿದ್ದು, ನೂತನ ವರ್ಷಕ್ಕೆ ವಿವಿಧ ಪ್ರಾರ್ಥನೆಗಳನ್ನು ಸಲ್ಲಿಸಿ ಮಲೆ ಮಹದೇಶ್ವರನಿಗೆ ಮಧ್ಯರಾತ್ರಿ ಜೈಕಾರ ಹಾಕಿದ್ದರು. ಇನ್ನು, ಬಿಳಿಗಿರಿರಂಗನನಾಥ ದೇವಾಲಯ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕಂತೂ ಬೈಕ್ ರೈಡರ್ಗಳು, ಕುಟುಂಬ ಹಾಗೂ ಸ್ನೇಹಿತರ ಗುಂಪುಗಳೇ ಸೇರಿ ನೂತನ ವರ್ಷವನ್ನು ಪ್ರಕೃತಿ ಮಡಿಲಲ್ಲಿ ಕಳೆಯುತ್ತಿದ್ದಾರೆ. ಹಾಗೆಯೇ ಕೆ.ಗುಡಿಗೂ ಸಹ ಪ್ರವಾಸಿಗರು ಇನ್ನು ಹರಿದು ಬರುತ್ತಲೇ ಇದ್ದಾರೆ.