ಬಂಡೀಪುರ ಅರಣ್ಯದಲ್ಲಿ ಇಬ್ಬರು ಪ್ರಾಣಿ ಬೇಟೆಗಾರರ ಬಂಧನ
ಚಾಮರಾಜನಗರ, ಜೂನ್ 08 : ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ಬೇಟೆಯಾಡುವಾಗ ಕೂತನೂರು ಗ್ರಾಮದ ಸಿದ್ದರಾಜು( 28) ಭೀಮನಬೀಡು ಮಹೇಶ್ (28) ಎನ್ನುವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಇವರಿಬ್ಬರು ಸೇರಿದಂತೆ ಒಟ್ಟು ಎಂಟು ಮಂದಿ ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಹೊಂಚು ಹಾಕಿ ಕುಳಿತು ಜಿಂಕೆ, ಪಕ್ಷಿಗಳನ್ನು ಬೇಟೆಯಾಡುತ್ತಿದ್ದರು ಎನ್ನಲಾಗಿದೆ.[ಗೋಪಿನಾಥಂ ಅರಣ್ಯ ವಲಯದಲ್ಲಿ ಜಿಂಕೆ ಬೇಟೆಗಾರರ ಬಂಧನ]
ಈಗಾಗಲೇ ನವಿಲು, ಕೌಜಲ ಹಕ್ಕಿ, ಕಾಡುಕೋಳಿ ಮುಂತಾದವುಗಳನ್ನು ಬೇಟೆಯಾಡಿದ್ದ ಆರೋಪಿಗಳು ಬಂಡೀಪುರ ಮುಂಟೀಪುರ ಸಸ್ಯ ಕ್ಷೇತ್ರದ ಅರಣ್ಯ ವ್ಯಾಪ್ತಿಯಲ್ಲಿ ಬೇಟೆಯಾಡಲು ಪ್ರಾಣಿಗಳು ಬರುವುದನ್ನೇ ಕಾಯುತ್ತಿದ್ದರು.
ಈ ವಿಷಯ ಅರಣ್ಯ ಇಲಾಖೆಯ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಎಸಿಎಫ್ ಪೂವಯ್ಯ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಆದೇಶಿಸಿದ್ದರು.
ಅದರಂತೆ ಆರ್ಎಫ್ಓ ಮುಕುಂದ, ಅರಣ್ಯ ರಕ್ಷಕರಾದ ದಿಲೀಪ್ಕುಮಾರ್, ರವಿಕುಮಾರ್, ಹರೀಶ್, ರಕ್ಷಿತ್, ಪುಟ್ಟರಾಜು, ಹನೀಫ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಆರು ಮಂದಿ ತಪ್ಪಿಸಿಕೊಂಡಿದ್ದು, ಸಿದ್ದರಾಜು ಮತ್ತು ಮಹೇಶ್ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ (ಕೆ.ಎ.10.ಕೆ.6307), ತಲೆ ಬ್ಯಾಟರಿ, ಬಲೆ, ಕೊಡಲಿಗಳನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.