ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ
ಚಾಮರಾಜನಗರ, ಜನವರಿ 9: ಪ್ರತ್ಯೇಕ ಪ್ರಕರಣದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಎತ್ತುಕಟ್ಟಿ ಬೆಟ್ಟದಲ್ಲಿ ನಡೆದ ಘಟನೆಯಲ್ಲಿ ಬಹಿರ್ದೆಸೆಗೆಂದು ತೆರಳುತ್ತಿದ್ದ ಯಾಣಗಳ್ಳಿ ಗ್ರಾಮದ ಮಹದೇವನಾಯ್ಕ (60) ಎಂಬುವರ ಮೇಲೆ ದಾಳಿ ಮಾಡಿದ ಕಾಡಾನೆ ತುಳಿದು ಸಾಯಿಸಿದೆ.
ಯಾಣಗಳ್ಳಿ ಸಮೀಪವಿರುವ ಎತ್ತುಕಟ್ಟಿ ಬೆಟ್ಟದ ಬಸವೇಶ್ವರ ದೇವಸ್ಥಾನದ ಹಿಂಭಾಗ ದೇಗುಲದಲ್ಲಿ ಧೂಪ ಮಾರುತ್ತಿದ್ದ ಮಹದೇವನಾಯ್ಕ ಬಹಿರ್ದೆಸೆಗೆಂದು ದೇವಸ್ಥಾನದ ಹಿಂಭಾಗಕ್ಕೆ ತೆರಳಿದಾಗ ದಾಳಿ ಮಾಡಿದ ಆನೆ ತುಳಿದು ಸಾಯಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿ, ನಂತರ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರಲ್ಲದೆ, ವೈಯಕ್ತಿಕ ಪರಿಹಾರವನ್ನು ವಿತರಿಸಿದರು.[ಕಾಡಾನೆ ತುಳಿದು ಗುಬ್ಬಿಯ ಇಬ್ಬರು ರೈತರು ಸಾವು]

ಇದೇ ವೇಳೆ, ನಾಯಕ ಕಡುಬಡವನಾಗಿದ್ದು, ಆತನಿಗೆ ಅರಣ್ಯ ಇಲಾಖೆಯಿಂದ ಶೀಘ್ರ ಪರಿಹಾರ ನೀಡಬೇಕು ಎಂದು ಸೂಚಿಸಿದರು. ಮತ್ತೊಂದು ಪ್ರಕರಣದಲ್ಲಿ ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮದ ಗೋಪಾಲಸ್ವಾಮಿಬೆಟ್ಟ ವಲಯದ ಕಾಡಂಚಿನ ಹೊಸಹಳ್ಳಿ ಕಾಲೋನಿಯ ರೈತ ಚನ್ನಬಸವಯ್ಯ (55) ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ.
ಗೋಪಾಲಪುರ ಗ್ರಾಮದಲ್ಲಿ ಜಮೀನನ್ನು ಗುತ್ತಿಗೆಗೆ ಪಡೆದು ಮುಸುಕಿನ ಜೋಳವನ್ನು ಬಿತ್ತನೆ ಮಾಡಿದ್ದರು. ಭಾನುವಾರ ರಾತ್ರಿ ಜಮೀನಿಗೆ ಬೆಳೆ ಕಾವಲಿಗೆ ತೆರಳಿದ್ದವರು ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು, ಜಮೀನಿಗೆ ಹೋಗಿ ನೋಡಿದಾಗ ಆನೆ ದಾಳಿಯಿಂದ ಚನ್ನಬಸವಯ್ಯ ಮೃತಪಟ್ಟಿರುವುದು ಗೋಚರಿಸಿದೆ. ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಒಂಟಿ ಆನೆಯು ದಾಳಿ ನಡೆಸಿ, ಬೆಳೆಗಳನ್ನು ನಾಶಮಾಡುತ್ತಿದೆ ಎಂದು ದೂರಲಾಗಿದೆ.[ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿ, ನೀರಿಗಾಗಿ ಪಂಪ್ ಕೀಳುವ ಕಾಡಾನೆಗಳು!]

ಸಾರ್ವಜನಿಕರ ಆಸ್ಪತ್ರೆ ಬಳಿ ಜಮಾಯಿಸಿದ್ದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಹಣವನ್ನು ಸರ್ಕಾರದಿಂದ ನೀಡಲಾಗುವುದು ಎಂದು ಸ್ಥಳದಲ್ಲಿ 2 ಲಕ್ಷ ಚೆಕ್ ನೀಡಿ, ಕುಟುಂಬದ ಒಬ್ಬ ಸದಸ್ಯರಿಗೆ ದಿನಗೂಲಿ ನೌಕರಿ ನೀಡುವ ಭರವಸೆ ನೀಡಿದರು. ಉಳಿದ 3 ಲಕ್ಷವನ್ನು ಮರಣೋತ್ತರ ಪರೀಕ್ಷೆ ಬಂದ ನಂತರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.











Click it and Unblock the Notifications