ಚಾಮರಾಜನಗರ; 25 ಮಂದಿ ನೌಕರರ ವರ್ಗಾವಣೆ, 61 ಬಸ್ ಸಂಚಾರ
ಚಾಮರಾಜನಗರ, ಏಪ್ರಿಲ್ 11; ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ನೌಕರರನ್ನು ವರ್ಗಾವಣೆ ಮಾಡುತ್ತಿದೆ. ಏಪ್ರಿಲ್ 7ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ನೌಕರರು ಮುಷ್ಕರವನ್ನು ನಡೆಸುತ್ತಿದ್ದಾರೆ.
ಸಾರಿಗೆ ನೌಕರರ ಮುಷ್ಕರದ 4ನೇ ದಿನವಾದ ಶನಿವಾರ ಚಾಮರಾಜನಗರ ವಿಭಾಗದಿಂದ 61 ಸರ್ಕಾರಿ ಸಾರಿಗೆ ಬಸ್ಗಳು ಕಾರ್ಯಾಚರಣೆ ನಡೆಸಿವೆ. 150 ಮಂದಿ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ.
ಮುಷ್ಕರಕ್ಕೆ ಕರೆ ನೀಡಿದ್ದ ಹಾಗೂ ಮುಷ್ಕರದ ನೇತೃತ್ವ ವಹಿಸಿದ್ದ ವಿಭಾಗದ 25 ಮಂದಿ ನೌಕರರನ್ನು ಪುತ್ತೂರು, ಕೋಲಾರ, ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಚಾಮರಾಜನಗರ ವಿಭಾಗದಿಂದ ಶನಿವಾರ 61 ಬಸ್ ಕಾರ್ಯಾಚರಣೆ ನಡೆಸಿವೆ. ಚಾಲಕರು, ನಿರ್ವಾಹಕರು ಸೇರಿ 150 ಮಂದಿ ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ಧಾರೆ" ಎಂದು ಹೇಳಿದ್ದಾರೆ.
ಶನಿವಾರ 61 ಕೆಎಸ್ಆರ್ಟಿಸಿ ಬಸ್ಗಳು ಮೈಸೂರು, ಗುಂಡ್ಲುಪೇಟೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲಕ್ಕೆ ಸಂಚರಿಸಿವೆ. ಸಂಜೆ ಬೆಂಗಳೂರಿಗೆ ಎರಡು ಬಸ್ಗಳು ಸಂಚರಿಸಿವೆ. ಇದರ ಜೊತೆಗೆ ಖಾಸಗಿ ಬಸ್ಗಳು ಸಹ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ವಿವಿಧೆಡೆಗೆ ಸಂಚಾರ ನಡೆಸಿವೆ.
"ಬಸ್ ಸಂಚಾರ ನಡೆಸಿದ್ದರಿಂದ ಮುಷ್ಕರದ 4ನೇ ದಿನ ಪ್ರಯಾಣಿಕರಿಗೆ ಹೆಚ್ಚಿನ ಅನಾನುಕೂಲವಾಗಲಿಲ್ಲ. ಮುಷ್ಕರ ನಡೆಸುತ್ತಿರುವ ನೌಕರರನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಭಾನುವಾರ ಇನ್ನಷ್ಟು ಮಂದಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ" ಎಂದು ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications