ಮರಿಗಳ ಸಾವಿಗೆ ಕಾರಣವಾದ ತಾಯಿ ಹುಲಿಗಾಗಿ ಹುಡುಕಾಟ!
ಚಾಮರಾಜನಗರ, ಮಾರ್ಚ್ 29: ಮರಿಗಳನ್ನು ಬಿಟ್ಟು ಹೋಗುವ ಮೂಲಕ ಎರಡು ಮರಿಗಳ ಸಾವಿಗೆ ಕಾರಣವಾಗಿರುವ ತಾಯಿ ಹುಲಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವನ್ಯಜೀವಿ ವಲಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ವೇಳೆ ತಾಯಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿರುವುದರಿಂದ ಅದರ ಹುಡುಕಾಟ ಮುಂದುವರೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವನ್ಯಜೀವಿ ವಲಯದಲ್ಲಿ ಭಾನುವಾರ ಮಧ್ಯಾಹ್ನ ಬೀಟ್ ನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಎರಡು ಅಸ್ವಸ್ಥಗೊಂಡ ಹುಲಿ ಮರಿಗಳು ಪತ್ತೆಯಾಗಿದ್ದವು.
ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳ ಪರಿಶೀಲನೆ ನಡೆಸಿದ ವೇಳೆ ಮತ್ತೊಂದು ಹುಲಿಮರಿ ಮೃತಪಟ್ಟಿರುವುದು ಪತ್ತೆಯಾಗಿತ್ತು. ಒಂದು ಹುಲಿ ಮರಿ ಸತ್ತು ಎರಡು ಮರಿಗಳು ಅಸ್ವಸ್ಥವಾಗಲು ತಾಯಿ ಹುಲಿ ಹಾಲುಣಿಸದಿರುವುದು ಕಾರಣ ಎಂಬುದು ಗೊತ್ತಾಗಿತ್ತು.

ಹೀಗಾಗಿ ಎರಡು ಹುಲಿ ಮರಿಗಳನ್ನು ಚಿಕಿತ್ಸೆಗಾಗಿ ಮೈಸೂರಿನ ಮೃಗಾಲಯಕ್ಕೆ ಕಳುಹಿಸಿಕೊಡಲಾಯಿತು. ಈ ಪೈಕಿ ಹೆಣ್ಣು ಮರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮತ್ತೊಂದು ಗಂಡು ಮರಿಯ ಆರೋಗ್ಯದ ಮೇಲೆ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಹಸಿವಿನಿಂದ ಮರಿಗಳು ಸಾಯಲು ಕಾರಣವಾಗಿರುವ ತಾಯಿ ಹುಲಿಗಾಗಿ ಹುಡುಕಾಟ ನಡೆಯುತ್ತಿದೆ. ಮರಿಗಳನ್ನು ಬಿಟ್ಟು ಹೋಗಲು ಕಾರಣವೇನು?. ಸದ್ಯ ತಾಯಿ ಹುಲಿ ಎಲ್ಲಿದೆ? ಎಂಬುದರ ಬಗ್ಗೆ ಶೋಧ ಕಾರ್ಯ ಆರಂಭಗೊಂಡಿದೆ. ಈಗಾಗಲೇ ತಾಯಿ ಹುಲಿಯ ಹೆಜ್ಜೆಯ ಗುರುತು ಪತ್ತೆಯಾಗಿದ್ದು, ಹೀಗಾಗಿ ಸಿಸಿ ಕ್ಯಾಮರಾ ಅಳವಡಿಸಿ ಅದನ್ನು ಪತ್ತೆ ಹಚ್ಚುವ ಕಾರ್ಯವನ್ನು ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ.

ಈ ನಡುವೆ ಮೃತ ಹುಲಿ ಮರಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಮರಿ ಹಸಿವಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಹುಲಿಮರಿಗಳು ಪತ್ತೆಯಾದ ಸ್ಥಳಕ್ಕೆ ಬಂಡೀಪುರ ಕ್ಷೇತ್ರ ನಿರ್ದೇಶಕ ಎಸ್.ಆರ್.ನಟೇಶ್, ಸುಮಿತ್ ಕುಮಾರ್, ಸುಭಾಷ್ ರಾವ್ ಪಾಟೀಲ್ ಸಹಾಯಕ ಅರಣ್ಯ ಅಧಿಕಾರಿಗಳು ಬಂಡೀಪುರ ಉಪ ವಿಭಾಗ ಮತ್ತು ಹೆಡಿಯಾಲ ವಲಯಾಧಿಕಾರಿ ಡಾ. ಹೆಚ್.ಎಂ.ಮಂಜುನಾಥ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications