ಹುಲಿ ಗಣತಿ : ಬಂಡೀಪುರದಲ್ಲಿ 20ಕ್ಕೂ ಹೆಚ್ಚು ಹುಲಿ ಪತ್ತೆ!
ಗುಂಡ್ಲುಪೇಟೆ, ಜನವರಿ 14 : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಣತಿ ನಡೆಸಿದ ಗಣತಿದಾರರಿಗೆ ಸುಮಾರು 20 ಹುಲಿಗಳಿರುವುದು ಪತ್ತೆಯಾಗಿದೆ. ಆ ಮೂಲಕ ಕಳೆದೊಂದು ವಾರದಿಂದ ನಡೆಯುತ್ತಿದ್ದ ಹುಲಿ ಗಣತಿಗೆ ತೆರೆಬಿದ್ದಂತಾಗಿದೆ.
2014ರ ಹುಲಿ ಗಣತಿಯಲ್ಲಿ ಬಂಡೀಪುರದಲ್ಲಿ 139 ಹುಲಿಗಳು ಇರುವುದಾಗಿ ಅಂಕಿ ಅಂಶಗಳಲ್ಲಿ ದಾಖಲಾಗಿತ್ತು. ಆದರೆ, ಈ ಬಾರಿ ಗಣತಿ ನಡೆಸಿದ ತಂಡಕ್ಕೆ ಕೇವಲ 20 ಹುಲಿಗಳು ಮಾತ್ರ ಗೋಚರಿಸಿವೆ.
ನಾಗರಹೊಳೆಯಲ್ಲಿ ಹುಲಿಗಣತಿ: ಮೊದಲ ದಿನವೇ ಕಂಡವು 3 ಹುಲಿ!
ಕಳೆದ ವರ್ಷ ನಡೆದ ಕಾಡ್ಗಿಚ್ಚು ಅನಾಹುತ ಮತ್ತು ನೀರಿನ ಸಮಸ್ಯೆ ಇದೆಲ್ಲದರಿಂದ ಬೇರೆಡೆಗೆ ಪಲಾಯನಗೈದಿರುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಸಫಾರಿಗೆ ತೆರಳುವವರಿಗೆ, ಅರಣ್ಯ ಹೆದ್ದಾರಿಯಲ್ಲಿ ಸಾಗುವವರಿಗೆ ಹುಲಿಗಳು ದರ್ಶನ ನೀಡುವುದನ್ನು ನೋಡಿದರೆ ಬಂಡೀಪುರದಲ್ಲಿ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ಬಾರಿ ಬಂಡೀಪುರದ 12 ವಲಯದ 112 ಗಸ್ತಿನಲ್ಲಿ ಸುಮಾರು 66 ಸ್ವಯಂಸೇವಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಗಣತಿಯನ್ನು ನಡೆಸಿದ್ದರು. ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ನಡೆದ ಗಣತಿಯಲ್ಲಿ ಒಂದೊಂದು ತಂಡವು ಕಾಲುನಡಿಗೆಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಗಣತಿ ನಡೆಸಿತ್ತು.
ಫೋಟೋ ಕ್ಲಿಕ್: ಬಂಡೀಪುರದ ರಸ್ತೆ ಬದಿಯಲ್ಲೇ ಕಾಣುತ್ತಿವೆ ಹುಲಿಗಳು
ಜತೆಗೆ ಮೂರು ದಿನ ಟ್ರಾನ್ಸಕ್ಷನ್ ಲೈನ್ನಲ್ಲಿ ಗಣತಿ ಮಾಡಲಾಗಿತ್ತು. ಈ ವೇಳೆ ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು ಅವುಗಳ ಆವಾಸ ಸ್ಥಾನದ ವ್ಯಾಪ್ತಿ ಪತ್ತೆ ಮಾಡಲಾಯಿತು. ಹೆಜ್ಜೆಯ ಉದ್ದ-ಅಗಲವನ್ನು ಕೂಡ ಅಳತೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಹುಲಿಗಳು ಗಣತಿದಾರರ ಕಣ್ಣಿಗೆ ಕಂಡಿವೆ. ಬಂಡೀಪುರ, ಹೆಡಿಯಾಲ, ಮೂಲೆಹೊಳೆಯಲ್ಲಿ ತಲಾ ಎರಡು ಹುಲಿಗಳು, ಎನ್. ಬೇಗೂರಿನಲ್ಲಿ 6 ಹುಲಿಗಳು, ಕುಂದಕೆರೆ ಹಾಗೂ ಗುಂಡ್ರೆಯಲ್ಲಿ ತಲಾ 3 ಹುಲಿ, ಮದ್ದೂರು ಹಾಗೂ ಮೊಳೆಯೂರು ತಲಾ 1 ಹುಲಿಗಳು ಗಣತಿದಾರರ ಕಣ್ಣಿಗೆ ಬಿದ್ದಿದ್ದವು.
ಬಂಡೀಪುರದಲ್ಲಿ ಹುಲಿಗಳನ್ನು ಕಂಡು ಪ್ರವಾಸಿಗರು ಫುಲ್ ಖುಷ್
ಇನ್ನು ಹುಲಿ ಗಣತಿಗೆ ತೆರಳಿದ ವೇಳೆ ಆನೆ, ಚಿರತೆ, ಕಾಡೆಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬಂದಿದ್ದು, ಆ ಪೈಕಿ ವಿವಿಧ ವಲಯದಲ್ಲಿ 5 ಚಿರತೆ, 43 ಸೀಳು ನಾಯಿಗಳು, 176 ಆನೆಗಳು, 38 ಕಾಡೆಮ್ಮೆಗಳನ್ನು ಗಣತಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಅವರು, 'ಹುಲಿ ಗಣತಿ ವೇಳೆ ಸ್ವಯಂ ಸೇವಕರು ಬಹಳ ಪ್ರೀತಿ ಪೂರಕವಾಗಿ, ಬದ್ಧತೆಯಿಂದ ಕಾಡಿನ ನಿಯಮಕ್ಕೆ ಯಾವುದೇ ತೊಂದರೆ ನೀಡದೆ ಗಣತಿ ನಡೆಸಿದ್ದು ಅವರಿಗೆ ತುಂಬಾ ಅಬಾರಿಯಾಗಿರುವುದಾಗಿ ಹೇಳಿದ್ದಾರೆ'.
ಪ್ರತಿನಿತ್ಯ ಸಫಾರಿಗೆ ತೆರಳುವವರಿಗೆ ಹುಲಿಗಳು ಹೆಚ್ಚಾಗಿ ದರ್ಶನ ಕೊಡುತ್ತಿವೆ. ಅಲ್ಲದೆ ಗಣತಿದಾರರಿಗೂ ನೇರ ದರ್ಶನ ನೀಡಿವೆ. ಮತ್ತೆ ಮೊದಲ ಸ್ಥಾನ ನಮಗೆ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.