ಚಾಮರಾಜನಗರ: ಸಿಡಿಲು ಬಡಿದು ಮೂವರಿಗೆ ಗಂಭೀರ ಗಾಯ
ಚಾಮರಾಜನಗರ, ಅಕ್ಟೋಬರ್, 30: ಗಾರೆ ಕೆಲಸ ಮಾಡಿ ವಾಪಸ್ ತೆರಳುತ್ತಿದ್ದ ವೇಳೆ ಮೂವರಿಗೆ ಸಿಡಿಲು ಹೊಡೆದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡು ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹನೂರಿನ ತಾಲೂಕಿನ ಚಿಂಚಳ್ಳಿ ಗ್ರಾಮದಲ್ಲಿ ಜರುಗಿದೆ.
ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಗುರು ( 33) ಮಂಜು (33) ಗುರುಸ್ವಾಮಿ (44) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರು. ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಜಮೀನೊಂದರಲ್ಲಿ ಗಾರೆ ಕೆಲಸ ಮುಗಿಸಿ ಸೋಮವಾರ ಸಂಜೆ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮಳೆ ಬಂದಿದೆ. ಈ ಸಂದರ್ಭದಲ್ಲಿ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆ ಸಮೀಪದ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಹೊಡೆದಿದೆ.

ಸಿಡಿಲು ಹೊಡೆದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡ ತಕ್ಷಣ ಇದನ್ನು ನೋಡಿದ ಸ್ಥಳೀಯರು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗುರು ಎನ್ನುವವರಿಗೆ ಕಾಲು, ಬೆರಳುಗಳಿಗೆ ಗಾಯಗಳಾಗಿದೆ. ಇನ್ನುಳಿದ ಇಬ್ಬರಿಗೆ ಶಾಕ್ ಆಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ. ಒಂದು ದಿನ ಚಿಕಿತ್ಸೆ ನೀಡಿದ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೋಲಿ ಕ್ರಾಸ್ ವೈದ್ಯಾಧಿಕಾರಿ ಡಾ.ಭಾರ್ಗವಿ ತಿಳಿಸಿದ್ದಾರೆ.
ಭಾರೀ ಮಳೆ, ಸಂಚಾರ ಅಸ್ತವ್ಯಸ್ತ
ಸತತವಾಗಿ ಎರಡು ತಿಂಗಳುಗಳಿಂದ ಬಿಸಿಲಿನ ಬೇಗೆಗೆ ಸೊರಗಿದ್ದ ಧಾರವಾಡ ಜನತೆಗೆ ಇಂದು ಸಂಜೆ ಮಳೆರಾಯ ತಂಪೆರೆದಿದ್ದಾನೆ. ಇಂದು ಸಂಜೆಯಾಗುತ್ತಿದ್ದಂತೆ ಧಾರವಾಡದಲ್ಲಿ ಸತತ ಅರ್ಧ ಗಂಟೆಗಳ ಕಾಲ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಪರಿಣಾಮ ನಗರದ ಹಲವೆಡೆ ವಿದ್ಯುತ್ ಕಡಿತವಾಗಿದ್ದಲ್ಲದೆ, ರಸ್ತೆಗಳಲ್ಲಿ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನು ಧಾರವಾಡ ನಗರ ಸೇರಿ ಅಕ್ಕಪಕ್ಕದ ಹಳ್ಳಿಗಳಲ್ಲೂ ಭಾರೀ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೇ ಇಂದು (ಸೋಮವಾರ) ಸಂಜೆ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಮಳೆರಾಯ ಆರ್ಭಟಿಸಿದ್ದಾರೆ. ನಗರದಲ್ಲಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಮಳೆರಾಯ ಇಂದು ಸಂಜೆ ದಿಢೀರನೇ ಆರ್ಭಟಿಸಿದ್ದಾರೆ. ಪರಿಣಾಮ ಹಲವೆಡೆ ರಸ್ತೆಗಳು ಚರಂಡಿಯಂತೆ ಮಾರ್ಪಟ್ಟಿದ್ದು, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.












Click it and Unblock the Notifications