ಹಣ ಬಿಡುಗಡೆ ಮಾಡದ ಸರ್ಕಾರ: ಚಾಮರಾಜನಗರದ 3 ಇಂದಿರಾ ಕ್ಯಾಂಟೀನ್ಗಳಿಗೆ ಬೀಗ
ಚಾಮರಾಜನಗರ, ನವೆಂಬರ್ 23: ಸಿಬ್ಬಂದಿ ವೇತನ ಬಾಕಿ ಹಾಗೂ ಟೆಂಡರ್ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ 3 ಇಂದಿರಾ ಕ್ಯಾಂಟೀನ್ಗಳ ಬಾಗಿಲು ಮುಚ್ಚಲಾಗಿದೆ.
ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಮತ್ತು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದ್ದ ಜಿಲ್ಲೆಯ ಯಳಂದೂರು, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಲ್ಲಿನ ಇಂದಿರಾ ಕ್ಯಾಂಟೀನ್ಗಳಿಗೆ ಕಳೆದ 4 ದಿನಗಳಿಂದ ಬಾಗಿಲು ಹಾಕಲಾಗಿದೆ. ಇದರಿಂದ ಪ್ರತಿದಿನ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿದ್ದ ಫಲನುಭವಿಗಳು ಹೆಚ್ಚಿನ ಹಣ ಕೊಟ್ಟು ಇತರ ಹೋಟೆಲ್ಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್ನಲ್ಲಿ ಪ್ರತಿನಿತ್ಯ ಬೆಳಗ್ಗೆ 400, ಮಧ್ಯಾಹ್ನ 350 ಮತ್ತು ಸಾಯಂಕಾಲ 150 ಮಂದಿಗೆ ಊಟ ತಿಂಡಿ ನೀಡಲಾಗುತ್ತಿತ್ತು. ಯಳಂದೂರು ಹಾಗೂ ಕೊಳ್ಳೇಗಾಲದಲ್ಲಿ ಇದರ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚಾಮರಾಜನಗರದಲ್ಲಿ 3 ಇಂದಿರಾ ಕ್ಯಾಂಟೀನ್ಗಳ ಬಾಗಿಲಿಗೆ ಬೀಗ
ಇಂದಿರಾ ಕ್ಯಾಂಟೀನ್ ವಹಿಸಿಕೊಂಡ ಏಜೆನ್ಸಿಗೆ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ ಎಂದು ಗುಂಡ್ಲುಪೇಟೆ ಕ್ಯಾಂಟೀನ್ನಲ್ಲಿ ಅಡುಗೆ ಕೆಲಸ ನಿರ್ವಹಿಸುವ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಎಂಬ ಕಾರಣದಿಂದ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಇಂದಿರಾ ಕ್ಯಾಂಟೀನ್ಗೆ ಬಂದು ಊಟ ಮಾಡುತ್ತಿದ್ದರು. ಆದರೆ ಕಳೆದ 4 ದಿನಗಳಿಂದ ಇಂದಿರಾ ಕ್ಯಾಂಟೀನ್ಗೆ ಬಾಗಿಲು ಮುಚ್ಚಿರುವ ಹಿನ್ನೆಲೆಯಲ್ಲಿ ಜನರು ಕ್ಯಾಂಟೀನ್ ಬಳಿ ಬಂದು ಬಾಗಿಲು ಹಾಕಿರುವುದನ್ನು ಕಂಡು ಸರ್ಕಾರ ಹಾಗೂ ಏಜೆನ್ಸಿಗಳಿಗೆ ಹಿಡಿಶಾಪ ಹಾಕಿ ವಾಪಸ್ ತೆರಳುತ್ತಿದ್ದಾರೆ.

ಹಳ್ಳ ಹಿಡಿಯಿತೇ ಕಾಂಗ್ರೆಸ್ ಮಹಾತ್ವಾಕಾಂಕ್ಷೆಯ ಯೋಜನೆ..?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕಾಂಗ್ರೆಸ್ ಸರ್ಕಾರ ಬಡ ಜನರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಹಾಗೂ ಕಡಿಮೆ ಬೆಲೆಯಲ್ಲಿ ಜನರ ಹೊಟ್ಟೆ ತುಂಬಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಆದರೆ ಇದೀಗ ಸರ್ಕಾರ ಸಿಬ್ಬಂದಿಗೆ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ. ಕಾಂಗ್ರೆಸ್ ಮಹಾತ್ವಾಕಾಂಕ್ಷೆಯ ಯೋಜನೆ ಬಿಜೆಪಿ ಅವಧಿಯಲ್ಲಿ ಹಳ್ಳ ಹಿಡಿದಿದೆ. ಇದರಿಂದ ಅನೇಕರಿಗೆ ಅನಾನೂಕೂಲವಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕಳೆದ ಒಂದು ವರ್ಷದಿಂದ ಅನುದಾನ ನೀಡದ ಸರ್ಕಾರ
2022ರ ಜನವರಿ ತಿಂಗಳಿನಿಂದ ಇಲ್ಲಿಯ ತನಕ ಒಟ್ಟು 11 ತಿಂಗಳು ಕಳೆಯುತ್ತಿದ್ದರೂ ಸಹ ಸರ್ಕಾರ ಇಂದಿರಾ ಕ್ಯಾಂಟೀನ್ಗೆ ಹಣ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಈ ಮಧ್ಯೆ 'ಚೀಫ್ತಾಕ್' ಎಂಬ ಏಜೆನ್ಸಿಯವರು ಹೇಗೋ ಸರಿದೂಗಿಸಿಕೊಂಡು ಸಿಬ್ಬಂದಿಗೆ 6 ತಿಂಗಳ ಸಂಬಳದ ಹಣ ನೀಡಿ ಕ್ಯಾಂಟೀನ್ ನಡೆಸಿದ್ದಾರೆ. ಆದರೆ ಇನ್ನೂ 5 ತಿಂಗಳ ಸಂಬಳ ಸಿಬ್ಬಂದಿಗೆ ಬಾಕಿ ಇರುವ ಕಾರಣ ಸಿಬ್ಬಂದಿ ಕೆಲಸಕ್ಕೆ ಬಂದಿಲ್ಲ. ಈ ಕಾರಣದಿಂದ ಬಾಗಿಲು ಮುಚ್ಚಲಾಗಿದೆ ಎಂದು ಚಾಮರಾಜನಗರ ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ಸಂತೋಷ್ ತಿಳಿಸಿದ್ದಾರೆ.

ಶೀಘ್ರ ಕ್ಯಾಂಟೀನ್ ತೆರೆಯುವ ವ್ಯವಸ್ಥೆ ಮಾಡಲಿ ಎಂದು ಜನರ ಒತ್ತಾಯ
ಇನ್ನು ಚಾಮರಾಜನಗರದಲ್ಲಿ ಏಕಾಏಕಿ ನಾಲ್ಕು ಇಂದಿರಾ ಕ್ಯಾಂಟೀನ್ಗಳು ಬಾಗಿಲು ಮುಚ್ಚಿರುವ ಬಗ್ಗೆ ಗುಂಡ್ಲುಪೇಟೆ ತಾಲೂಕಿನ ಹೊಸೂರು ಗ್ರಾಮದ ಮಾದಪ್ಪ ಎನ್ನುವವರು ಮಾತನಾಡಿದ್ದಾರೆ. " ನಮ್ಮದು ಬಡ ಕುಟುಂಬವಾಗಿದ್ದು, ಪ್ರತಿನಿತ್ಯ ಗಾರೆ ಕೆಲಸಕ್ಕೆ ಹೋಗುವ ವೇಳೆ ಇಂದಿರಾ ಕ್ಯಾಂಟೀನ್ನಲ್ಲಿ 5 ರೂಪಾಯಿ ಕೊಟ್ಟು ಬೆಳಗಿನ ತಿಂಡಿ ತಿನ್ನುತ್ತಿದ್ದೆವು. ಆದರೆ ಎರಡು ದಿನದಿಂದ ಬಾಗಿಲು ಮುಚ್ಚಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್ ಹತ್ತಿರ ಬಂದು ವಾಪಸ್ ತೆರಳುತ್ತಿದ್ದೇನೆ. ಏನೇ ಸಮಸ್ಯೆ ಇದ್ದರೂ ಸರ್ಕಾರ ಶೀಘ್ರ ಬಗೆಹರಿಸಿ ಕ್ಯಾಂಟೀನ್ ತೆರೆಯುವ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.












Click it and Unblock the Notifications