ನೀರಿಲ್ಲ, ಬಸ್ಸಿಲ್ಲ, ಕಣಿಯನಪುರ ಜನರ ಬವಣೆಗೆ ಕೊನೆಯಿಲ್ಲ!
ಗ್ರಾಮದಲ್ಲಿದ್ದ ಕೊಳವೆ ಬಾವಿ ಬತ್ತಿದ್ದರಿಂದ ಗ್ರಾಪಂ ಸರಬರಾಜು ಮಾಡುವ ಟ್ಯಾಂಕರ್ ನೀರನ್ನು ಜಾನುವಾರು ತೊಟ್ಟಿಗಳಲ್ಲಿ ಸಂಗ್ರಹಿಸಬೇಕಾದ ದುರಾವಸ್ಥೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಕಣಿಯನಪುರ ಕಾಲೋನಿಗಳ ಜನರ ಬವಣೆ.
ಗುಂಡ್ಲುಪೇಟೆ, ಮೇ 9: ಬಸ್ಸಿಲ್ಲದೆ ಮೂರ್ನಾಲ್ಕು ಕಿ.ಮೀ. ನಡೆಯಬೇಕಾದ ಅನಿವಾರ್ಯತೆ, ಅನಾರೋಗ್ಯವಾದರೆ ಎತ್ತಿಕೊಂಡೋ ಅಥವಾ ಬೈಕ್ ನಲ್ಲೋ ಕರೆದೊಯ್ಯಬೇಕಾದ ದುಃಸ್ಥಿತಿ. ಗ್ರಾಮದಲ್ಲಿದ್ದ ಕೊಳವೆ ಬಾವಿ ಬತ್ತಿದ್ದರಿಂದ ಗ್ರಾಪಂ ಸರಬರಾಜು ಮಾಡುವ ಟ್ಯಾಂಕರ್ ನೀರನ್ನು ಜಾನುವಾರು ತೊಟ್ಟಿಗಳಲ್ಲಿ ಸಂಗ್ರಹಿಸಬೇಕಾದ ದುರಾವಸ್ಥೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಕಣಿಯನಪುರ ಕಾಲೋನಿಗಳ ಜನರ ಬವಣೆ.
ಕಣಿಯನಪುರಕ್ಕೆ ಕಳೆದ 30 ವರ್ಷಗಳಿಂದ ಬಸ್ ಬರುತ್ತಿತ್ತಾದರೂ ರಸ್ತೆ ಸರಿಯಿಲ್ಲದ ಕಾರಣ ನಿಲ್ಲಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಮೂರ್ನಾಲ್ಕು ಕಿ.ಮೀ. ನಡೆಯಬೇಕಾಗಿದೆ. ಆಟೋಗಳ ವ್ಯವಸ್ಥೆ ಕೂಡ ಇಲ್ಲ.[ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸಿಡಿಲು ಬಡಿದು ಮನೆ ಭಸ್ಮ]
ಗ್ರಾಮದಲ್ಲಿ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣದಿಂದಾಗಿ ಜನ ಕಷ್ಟದಲ್ಲೇ ಬದುಕು ಸಾಗಿಸುವಂತಾಗಿದೆ. ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಅಂತರ್ಜಲ ಕುಸಿತಗೊಂಡು ಇರುವ ಬೋರ್ವೆಲ್ ಗಳಲ್ಲಿ ನೀರು ಬಾರದಂತಾಗಿದೆ.[ಚಾಮರಾಜನಗರ: ಮದುವೆಗೆಂದು ಹೊರಟ ಮೂವರು ಮಸಣ ಸೇರಿದರು]
ಹೀಗಾಗಿ ಗ್ರಾಮಪಂಚಾಯಿತಿಯು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಇದರಿಂದ ನೀರನ್ನು ಸಂಗ್ರಹಿಸಿಡಲು ವ್ಯವಸ್ಥೆಗಳಿಲ್ಲದೆ ದೊರಕುವ ಅಲ್ಪಸ್ವಲ್ಪ ನೀರನ್ನು ಜಾನುವಾರು ತೊಟ್ಟಿಗಳಲ್ಲಿ ತುಂಬಿಸಿಟ್ಟು ಬಳಿಕ ಬಳಸಿಕೊಳ್ಳುತ್ತಿದ್ದಾರೆ..
ಅಂಗನವಾಡಿ ಕೇಂದ್ರಗಳಿಗೂ ನೀರಿನ ಸರಾಬರಾಜಿಲ್ಲದ ಪರಿಣಾಮ ಪ್ಲಾಸ್ಟಿಕ್ ಡ್ರಂನಲ್ಲಿ ಟ್ಯಾಂಕರ್ ನೀರನ್ನು ಸಂಗ್ರಹಿಸಿದ್ದು ಅಡುಗೆ ಹಾಗೂ ಶೌಚಾಲಯಕ್ಕೂ ಇದನ್ನೇ ಬಳಸಬೇಕಾಗಿದೆ. ಮಳೆಯ ಕೊರತೆ ಹಾಗೂ ಅಂತರ್ಜಲ ಇಳಿಕೆಯಿಂದ ವ್ಯವಸಾಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗಿದ್ದು ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ.[ಗುಂಡ್ಲುಪೇಟೆಯಲ್ಲಿ ಮಳೆ ಅವಾಂತರ: ಇಬ್ಬರು ಬಲಿ]
ನರೇಗಾ ಯೋಜನೆಯಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ನೀಡಬೇಕು, ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು ಹಾಗೂ ಜಾನುವಾರುಗಳಿಗೆ ರಿಯಾಯಿತಿ ದರದಲ್ಲಿ ಮೇವು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯ ಗ್ರಾಮಸ್ಥರ ಬೇಡಿಕೆಯಾಗಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಿಡಿಓ ರವಿ ಅವರು ಈ ಗ್ರಾಮಗಳ ಬಳಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ದೊರಕದೆ ವಿಫಲವಾಗಿದ್ದರಿಂದ ಗ್ರಾಮಪಂಚಾಯಿತಿಯು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಒಡೆದುಹೋಗಿದ್ದ ಪೈಪ್ ಲೈನ್ ದುರಸ್ತಿಗೊಳಿಸಲಾಗುತ್ತಿದೆ. ದೂರದ ಬುಡಗಾಡುಹುಂಡಿ ಸಮೀಪ ಕೊರೆಸಿದ ಕೊಳವೆ ಬಾವಿಯಲ್ಲಿ ಉತ್ತಮ ನೀರು ದೊರಕಿದ್ದು ಅಲ್ಲಿಂದ ಪೈಪ್ ಲೈನ್ ಮಾಡಿ ನೀರು ಸರಬರಾಜು ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದಿದ್ದಾರೆ. ಆದರೆ ಅದು ಸದ್ಯಕ್ಕಂತೂ ಆಗದ ಕೆಲಸವಾಗಿರುವುದರಿಂದ ಕಣಿಯನಪುರದ ಜನರ ಬವಣೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.