ಸೋಲಿಗರಿಗೆ ನೆರವಿನ ಹಸ್ತ ಚಾಚಿದ ಟಿಬೇಟಿಯನ್ನರು
ಚಾಮರಾಜನಗರ, ಮೇ 31: ಸಾವಿರಾರು ಕಿಲೋಮೀಟರ್ ದೂರದಿಂದ ಭಾರತಕ್ಕೆ ನಿರಾಶ್ರಿತರಾಗಿ ಬಂದ ಟಿಬೇಟಿಯನ್ನರು ಇಂದು ಇಲ್ಲಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಕಷ್ಟಜೀವಿಗಳಾದ ಇವರು ತಮಗೆ ನೀಡಿರುವ ಜಮೀನುಗಳಲ್ಲಿ ಹೆಚ್ಚಿನ ಉತ್ಪಾದನೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿ ದೇಶದ ಆರ್ಥಿಕತೆಗೂ ಕೊಡುಗೆ ನೀಡುತ್ತಿದ್ದಾರೆ.
ಇದೀಗ ಟಿಬೇಟಿಯನ್ನರು ಚಾಮರಾಜನಗರ ಜಿಲ್ಲೆಯ ಸೋಲಿಗ ಸಮುದಾಯದ ನೆರವಿಗೂ ಸಹಾಯಹಸ್ತ ಚಾಚಿದ್ದು, ಹೃದಯ ವೈಶಾಲ್ಯತೆ ಪ್ರದರ್ಶಿಸಿದ್ದಾರೆ. ಭಾನುವಾರ ಹನೂರು ತಾಲ್ಲೂಕಿನ ಒಡೆಯರಪಾಳ್ಯದ ಬಳಿ ಇರುವ ಟಿಬೇಟಿಯನ್ ನಿರಾಶ್ರಿತರು ತಾವೇ ಕಷ್ಟದಲ್ಲಿದ್ದರೂ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬುಡಕಟ್ಟು ಸೋಲಿಗರ ಸಹಾಯಕ್ಕೆ ಧಾವಿಸಿದ್ದಾರೆ.
ಪಿ.ಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಕಲಕಿಂಡಿ, ಹಾವಿನಮೂಲೆ, ಮಾವತ್ತೂರು, ಯರಗಬಾಳು, ಉದ್ದಟ್ಟಿ, ನೆಲ್ಲಿಕತ್ರಿ, ಕೆರೆದಿಂಬ, ಗೊಂಬೆಗಲ್ಲು, ಜೀರಿಗೆ ಗದ್ದೆ ಮೊದಲಾದ ಗಿರಿಜನ ಹಾಡಿಗಳ ಒಂದಲ್ಲ, ಎರಡಲ್ಲ 450ಕ್ಕೂ ಹೆಚ್ಚು ಬುಡಕಟ್ಟು ಸೋಲಿಗ ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಕಿಟ್ ವಿತರಿಸಿದ್ದಾರೆ.

ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುವ ಬುಡಕಟ್ಟು ಸೋಲಿಗರು ಬಿಳಿಗಿರಿರಂಗನ ಬೆಟ್ಟದಲ್ಲಿರುವ ಬೇಡಗುಳಿ, ಅತ್ತಿಖಾನೆ ಮೊದಲಾದ ಕಾಫಿ ಎಸ್ಟೇಟ್ಗಳಿಗೆ ಹೋಗುತ್ತಿದ್ದರು. ಆದರೆ ಕಳೆದ ಲಾಕ್ಡೌನ್ ಪರಿಣಾಮ ಎಲ್ಲಿಯೂ ಹೋಗಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗಂಡ ಒಡೆಯರಪಾಳ್ಯ ನಿರಾಶ್ರಿತರ ವಸಾಹತು ಶಿಬಿರದ ಟಿಬೇಟಿಯನ್ನರು ಸೋಲಿಗರ ನೆರವಿಗೆ ಮುಂದಾಗಿದ್ದಾರೆ.
ಜೀವನೋಪಾಯಕ್ಕೆ ಕೃಷಿ ಹಾಗೂ ಸ್ವೆಟರ್ ಮಾರಾಟ ಅವಲಂಬಿಸಿರುವ ಈ ಟಿಬೇಟಿಯನ್ ನಿರಾಶ್ರಿತರು ಲಾಕ್ಡೌನ್ನಿಂದ ಸ್ವತಃ ಸಂಕಷ್ಟದಲ್ಲಿದ್ದಾರೆ. ಆದರೂ ತಾವು ಕೂಡಿಟ್ಟ ಹಣದಲ್ಲಿ ತಾನಾ ಚಾರಿಟಬಲ್ ಟ್ರಸ್ಟ್ ಮೂಲಕ ಸೋಲಿಗರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
Recommended Video
"ಟಿಬೆಟಿಯನ್ ನಿರಾಶ್ರಿತರ ಶಿಬಿರದ ಸುತ್ತಮುತ್ತ ಹಾಡಿಗಳಲ್ಲಿರುವ ಸೋಲಿಗರ ಸ್ಥಿತಿಗತಿ ಅರಿತ ಟಿಬೆಟಿಯನ್ರು ತಮ್ಮ ಇತಿಮಿತಿಯಲ್ಲಿ ಸಹಾಯಕ್ಕೆ ಧಾವಿಸಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ದೇಶ ಬಿಟ್ಟು ಬಂದಿರುವ ಟಿಬೆಟಿಯನ್ರು ಇಲ್ಲಿನ ಬಡವರ ಕಷ್ಟ ಅರ್ಥಮಾಡಿಕೊಂಡಿದ್ದಾರೆ. ತಾವೇ ಕಷ್ಟದಲ್ಲಿದ್ದರೂ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಅವರ ಗುಣ ಇತರರಿಗೆ ಮಾದರಿಯಾಗಿದೆ'' ಎನ್ನುತ್ತಾರೆ ಪಿ.ಜಿ ಪಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣಮೂರ್ತಿ ಅವರು.












Click it and Unblock the Notifications