ಗುಂಡ್ಲುಪೇಟೆ: ತಿಪ್ಪೆಗೆ ಎಸೆದ ಬೂದಿಯಲ್ಲಿದ್ದ ಕೆಂಡ ಗ್ರಾಮವನ್ನೇ ಸುಟ್ಟಿತು!
ಚಾಮರಾಜನಗರ, ಮಾರ್ಚ್ 01: ತಿಪ್ಪೆಗೆ ಎಸೆದ ಬೂದಿಯಲ್ಲಿದ್ದ ಕೆಂಡದಿಂದ ಬೆಂಕಿಹೊತ್ತಿ ಉರಿದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚಿನ ಮೆದೆಗಳು ಹಾಗೂ ಹಲವಾರು ಮನೆಗಳು ಭಸ್ಮವಾಗಿರುವ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಗ್ಗಳ ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಗ್ಗಳ ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿದ್ದು ಎಲ್ಲರೂ ಕೂಲಿ ಕೆಲಸಕ್ಕೆ ಹೋಗಿದ್ದಾಗ ಈ ದುರ್ಘಟನೆ ನಡೆದಿದ್ದು ಪರಿಣಾಮ ಬೆಂಕಿ ನಂದಿಸಲು ಜನರಿಲ್ಲದೆ ಭಾರೀ ಅನಾಹುತ ಸಂಭವಿಸಿದೆ.
ಚಾಮರಾಜನಗರದಲ್ಲಿ ಡಯಾಗ್ನಸ್ಟಿಕ್ ಗೆ ಬೆಂಕಿ: ಭಾರೀ ನಷ್ಟ
ಬೆಂಕಿಗೆ ಕುರುಚಲು ಕಾಡು, ಮೆದೆಗಳು ಹೊತ್ತಿ ಉರಿದಿದ್ದು, ಹೊಗೆಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಜತೆಗೆ ತಾವೇ ಬೆಂಕಿ ನಂದಿಸೋಣ ಎಂದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ನೀರಿಲ್ಲದ ಪರಿಣಾಮ ಅಸಹಾಯಕರಾಗಿ ಕೈಕಟ್ಟಿ ನಿಲ್ಲುವಂತಾಯಿತು.
ಮಾಹಿತಿ ನೀಡಿ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಮೆದೆಗಳು, ಸಮೀಪದ ಗಿಡಮರಗಳು ಹಾಗೂ ಮನೆಗಳಿಗೆ ಬೆಂಕಿ ವ್ಯಾಪಿಸಿತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವ ಯತ್ನ ಮಾಡಿದರಾದರೂ ವಾಹನದಲ್ಲಿ ನೀರು ಖಾಲಿಯಾಯಿತೇ ವಿನಃ ಬೆಂಕಿ ಮಾತ್ರ ನಿಯಂತ್ರಣಕ್ಕೆ ಬರಲಿಲ್ಲ. ಅಗ್ನಿಶಾಮಕ ದಳದ ವಾಹನ ಸಮೀಪದ ಕೆರೆಯಲ್ಲಿ ಹಾಗೂ ಕೃಷಿಹೊಂಡಗಳಲ್ಲಿರುವ ನೀರು ತರಲು ತೆರಳಿದ ನಂತರ ಬೇಂಕಿಯ ತೀವ್ರತೆ ಹೆಚ್ಚಿ ಇಡೀ ಗ್ರಾಮಕ್ಕೇ ಹರಡುವ ಭೀತಿ ಎದುರಾಯಿತು.
ಈ ಸಂದರ್ಭದಲ್ಲಿ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಸಿದ್ದು ಸಾರ್ವಜನಿಕರ ತೀವ್ರ ಆಕ್ರೋಶ ಎದುರಿಸಬೇಕಾಯಿತು. ಕೂಡಲೇ ಚಾಮರಾಜನಗರದಿಂದಲೂ ಅಗ್ನಿಶಾಮಕ ದಳದ ವಾಹನ ಕರೆಯಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ತೀವ್ರ ಕಾರ್ಯಾಚರಣೆ ನಂತರ ಬೆಂಕಿಯನ್ನು ನಂದಿಸಲಾಯಿತು.
ಅಗ್ನಿಅನಾಹುತದಲ್ಲಿ ಕೂಸಮ್ಮ, ಮಹದೇವಮ್ಮ, ವೆಂಕಟಮ್ಮ, ಎಂಬುವರ ಮನೆಗಳು ಭಾಗಶಃ ಬೆಂದುಹೋಗಿ ಹಿತ್ತಲಲ್ಲಿ ಸಂಗ್ರಹಿಸಿದ್ದ ಮರಮಟ್ಟುಗಳು, ತೆಂಗಿನ ಮರಗಳು, ಎತ್ತಿನ ಗಾಡಿಗಳು ಭಾಗಶಃ ಸುಟ್ಟಿದ್ದು. ಕೊಟ್ಟಿಗೆಯಲ್ಲಿದ್ದ ಜಾನುವಾರುಗಳಿಗೂ ಬೆಂಕಿಯ ತಾಪಕ್ಕೆ ಸುಟ್ಟಗಾಯಗಳಾಗಿವೆ. ಚಿಕ್ಕಬಸವಯ್ಯ, ಮಹದೇವಮ್ಮ, ದೊಡ್ಡಯ್ಯ, ವೆಂಕಟರಮಣಯ್ಯ, ವೆಂಕಟಮ್ಮ, ಸಿದ್ದಯ್ಯ, ಗುರುಸಿದ್ದಯ್ಯ ಎಂಬುವರ ಮೆದೆಗಳು ಭಸ್ಮವಾಗಿದೆ. ಮನೆ ಹಾಗೂ ಮೆದೆಗಳನ್ನು ಕಳೆದುಕೊಂಡವರ ರೋದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಅಗ್ನಿಶಾಮಕದಳದ ಕಮಾಂಡೆಂಟ್ ನವೀನ್ ಕುಮಾರ್, ತೆರಕಣಾಂಬಿ ನಾಡಕಚೇರಿಯ ಕಂದಾಯಾಧಿಕಾರಿ ನಂಜೇಗೌಡ, ಬೇಗೂರು ಕಂದಾಯಾಧಿಕಾರಿ ಮಹದೇವಪ್ಪ, ಗ್ರಾಮಲೆಕ್ಕಾಧಿಕಾರಿಗಳಾದ ರಂಗಸ್ವಾಮಿ, ವೃಷಭೇಂದ್ರಪ್ಪ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.