ಹನೂರು: ಕಿಟಕಿಯಿಂದ ಬಸ್ ಹತ್ತಿದ ಪುರುಷರು, ಮತ್ತೊಂದೆಡೆ ಡ್ರೈವರ್ ಸೀಟ್ ಆವರಿಸಿದ ನಾರಿಯರು
ಚಾಮರಾಜನಗರ, ಜುಲೈ, 31: ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸೀಟ್ಗಾಗಿ ಹರಸಾಹಸ ಪಡುವಂತಾಗಿದೆ. ಅದೇ ರೀತಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಬಸ್ ಸೀಟ್ಗಾಗಿ ಸಾಹಸವನ್ನೇ ಮಾಡಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಮುಗಿಸಿ ಹಿಂತಿರುಗುವಾಗ ಕೊಳ್ಳೇಗಾಲದ ಬಸ್ಗೆ ಪ್ರಯಾಣಿಕರು ಮುತ್ತಿಗೆ ಹಾಕಿದ್ದು, ಈ ವೇಳೆ ನಾರಿಯರು ಚಾಲಕನ ಸೀಟ್ ಮೂಲಕ ಬಸ್ ಹತ್ತಿದರೇ, ಪುರುಷರು ಕಿಟಕಿ ಮೂಲಕ ಬಸ್ ಹತ್ತುವ ಸಾಹಸ ಮಾಡಿದ್ದಾರೆ. ಇನ್ನು, ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಲು ಯಳಂದೂರಲ್ಲಿ ನೂಕು ನುಗ್ಗಲು ಉಂಟಾಗಿ ಬಸ್ ಬಾಗಿಲೇ ಕಿತ್ತುಬಂದ ಘಟನೆ ಭಾನುವಾರ ನಡೆದಿತದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದು, ಬಸ್ಗಳ ಸಂಖ್ಯೆಯೂ ಕಡಿಮೆ ಇರುವುದರಿಂದ ಪ್ರಯಾಣಿಕರು ಸೀಟ್ಗಾಗಿ ಸಾಹಸ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಯಾತ್ರಸ್ಥಳಗಳಲ್ಲಿಯೇ ತುಸು ಹೆಚ್ಚಾಗಿ ಕಂಡುಬರುತ್ತಿವೆ.
ಶಕ್ತಿ ಯೋಜನೆಯ ಪರಿಣಾಮ ಹೀಗಿದೆ
ಮತ್ತೊಂದೆಡೆ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು, ಇದರಿಂದ ದೇವಸ್ಥಾನಗಳ ಹುಂಡಿಯ ಮೊತ್ತವೂ ಏರಿಕೆಯಾಗುತ್ತಲೇ ಇದೆ ಎಂದು ತಿಳಿದುಬರುತ್ತಿದೆ. ಹಾಗೆಯೇ ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಾದಪ್ಪನ ಹುಂಡಿಯಲ್ಲಿ 1.56 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿತ್ತು.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಪ್ರಾಧಿಕಾರ ಕಾರ್ಯದರ್ಶಿ ಗೀತಾ ಹುಡೇದಾ ಹಾಗೂ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಈ ವೇಳೆ ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಭಾಗಿಯಾಗಿದ್ದರು.
ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಬೆಳಗ್ಗೆ 8 ರಿಂದ ಸಂಜೆಯವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 1,56,28,122 ರೂಪಾಯಿ ನಗದು, 30 ಗ್ರಾಂ ಚಿನ್ನ ಹಾಗೂ 1 ಕೆ.ಜಿ 26 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಅದರಲ್ಲೂ ಈ ಬಾರಿ ಉಚಿತ ಬಸ್ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಲೆಮಹದೇಶ್ವ ಬೆಟ್ಟಕ್ಕೆ ಭೇಟಿ ನಿಡಿದ್ದಾರೆ.
ಜೊತೆಗೆ ಹುಣ್ಣಿಮೆ, ಭೀಮನ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಿಂದ ಭಕ್ತ ಸಾಗರರವೇ ಹರಿದು ಬಂದಿದ್ದು, ಈ ವೇಳೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯ ರೂಪದಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಇದರಿಂದ ಹುಂಡಿಯಲ್ಲಿ ಇಷ್ಟು ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ.












Click it and Unblock the Notifications