ಆರ್.ಎಫ್.ಒ ಮೇಲೆ ದಾಳಿ ಮಾಡಿದ ಹುಲಿಗಾಗಿ ಹುಡುಕಾಟ
ಚಾಮರಾಜನಗರ, ಜುಲೈ 4: ಸೂರ್ಯಕಾಂತಿ ಬೆಳೆ ನಡುವೆ ಕಾಣಿಸಿಕೊಂಡು ಆರ್.ಎಫ್.ಓ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದಲ್ಲದೆ, ಜನರಲ್ಲಿ ಭಯ ಹುಟ್ಟಿಸಿರುವ ಹುಲಿಯ ಸೆರೆಗಾಗಿ ಆನೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹುಲಿಯ ಸುಳಿವು ಮಾತ್ರ ಸಿಕ್ಕಿಲ್ಲ.
ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯ ಕಳ್ಳೀಪುರ ಗ್ರಾಮದ ಬಳಿಯ ಜಮೀನಿನಲ್ಲಿ ರೈತರು ಸೂರ್ಯಕಾಂತಿ ಬೆಳೆದಿದ್ದು, ಇದರ ನಡುವೆ ಜುಲೈ 1ರಂದು ಹುಲಿ ಕಾಣಿಸಿಕೊಂಡಿತ್ತು. ಹುಲಿಯನ್ನು ನೋಡಿದ ಜನರು ಭಯಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ತನ್ನ ಸಿಬ್ಬಂದಿಯೊಂದಿಗೆ ಆರ್.ಎಫ್.ಓ ರಾಘವೇಂದ್ರ ಅಗಸೆ ಅವರು ಹುಲಿ ಕಾಣಿಸಿಕೊಂಡ ಸ್ಥಳಕ್ಕೆ ಆಗಮಿಸಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ಹುಲಿ ಜಾಡನ್ನು ಹುಡುಕುತ್ತಿದ್ದರು. ಈ ವೇಳೆ ಹುಲಿಯು ಸೂರ್ಯಕಾಂತಿ ಬೆಳೆ ನಡುವೆ ಪ್ರತ್ಯಕ್ಷವಾಗಿ ಆರ್ ಎಫ್ ಒ ರಾಘವೇಂದ್ರ ಅಗಸೆ ಅವರ ಮೇಲೆ ದಾಳಿ ಮಾಡಿ ತೊಡೆ ಹಾಗೂ ಕೈಗಳನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು. ತಕ್ಷಣ ಜತೆಗಿದ್ದ ಸಿಬ್ಬಂದಿ ಮತ್ತು ಗ್ರಾಮಸ್ಥರು ಕೂಗಾಡಿದ್ದರಿಂದ ಹೆದರಿದ ಓಡಿ ಹೋಗಿತ್ತು. ಗಾಯಗೊಂಡ ಆರ್ ಎಫ್ ಒ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಬಳಿಕ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ರೈತರು ಜಮೀನಿಗೆ ತೆರಳಲು, ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿತ್ತು. ಆದರೆ ಹುಲಿ ಮಾತ್ರ ಜನರ ಕಣ್ಣಿಗೆ ಸಿಗದೆ ಪರಾರಿಯಾಗಿತ್ತು. ಇದೀಗ ಹುಲಿಯನ್ನು ಸೆರೆಹಿಡಿಯುವ ಸಲುವಾಗಿ ಅರಣ್ಯ ಇಲಾಖೆಯು ಆನೆಗಳ ನೆರವಿನಿಂದ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಬುಧವಾರ ಬೆಳಿಗ್ಗೆ ಹುಲಿಗಾಗಿ ಕಳ್ಳೀಪುರ ಪ್ರದೇಶ ವ್ಯಾಪ್ತಿಯ ಬಾಳೆ ತೋಟ ಸೇರಿದಂತೆ ಸುತ್ತಮುತ್ತಲಿನ ಜಮೀನುಗಳಲ್ಲಿ ಅರಣ್ಯ ಇಲಾಖೆಯು ಮೂರು ಆನೆಗಳನ್ನು ಬಳಸಿಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೂ ಕೂಂಬಿಂಗ್ ನಡೆಸಲಾಯಿತಾದರೂ ಹುಲಿಯ ಸುಳಿವು ಮಾತ್ರ ಲಭ್ಯವಾಗಿಲ್ಲ. ಆದರೂ ಬಂಡೀಪುರ ಉಪವಿಭಾಗದ ಎಸಿಎಫ್ ಎಂ.ಎಸ್.ರವಿಕುಮಾರ್ ನೇತೃತ್ವದಲ್ಲಿ ಗುಂಡ್ಲುಪೇಟೆ ಬಫರ್ ವಲಯಾರಣ್ಯಾಧಿಕಾರಿ ರಾಜೇಶ್, ಪಶುವೈದ್ಯರಾದ ಡಾ.ನಾಗರಾಜು, ಡಿಆರ್ ಎಫ್ಒ ದಿನೇಶ್ ಹಾಗೂ 25 ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಹುಲಿಯನ್ನು ಸೆರೆ ಹಿಡಿಯುವ ಪಣ ತೊಟ್ಟಿದ್ದಾರೆ.

ಹುಲಿ ಸೆರೆ ಸಿಗುವ ತನಕ ಈ ವ್ಯಾಪ್ತಿಯ ಜನಕ್ಕೆ ನೆಮ್ಮದಿ ಇಲ್ಲದಂತಾಗಿದೆ. ಈ ಕುರಿತಂತೆ ಎಸಿಎಫ್ ಎಂ.ಎಸ್. ರವಿಕುಮಾರ್ ಮಾತನಾಡಿ, ಬಂಡೀಪುರ ಅಭಯಾರಣ್ಯದ ವ್ಯಾಪ್ತಿಯ ಕಳ್ಳಿಪುರದಲ್ಲಿ ಹುಲಿ ಅರಣ್ಯ ಇಲಾಖೆಯ ಆರ್ ಎಫ್ ಒ ಮೇಲೆ ದಾಳಿ ನಡೆಸಿದ್ದು, ಸಾಕಾನೆಗಳ ಮೂಲಕ ಹುಲಿಯ ಚಲನ ವಲನದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಹುಲಿಯನ್ನು ಸೆರೆ ಹಿಡಿಯುವ ಸಲುವಾಗಿ ಬೋನಿಟ್ಟು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.












Click it and Unblock the Notifications