"ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಹೊಣೆ"
ಚಾಮರಾಜನಗರ, ಜೂನ್ 06: ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನೂ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೂಲಕ ಅಧಿಕಾರಿಗಳ ನಡುವಿನ ತಿಕ್ಕಾಟಕ್ಕೆ ಅಂತ್ಯ ಹಾಡಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ.
ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನೇರ ಹೊಣೆ ಎಂದು ಬಿಜೆಪಿ ನಾಯಕ ಅಮ್ಮನಪುರ ಮಲ್ಲೇಶ್ ವಾಗ್ದಾಳಿ ನಡೆಸಿದ್ದಾರೆ. ಆಮ್ಲಜನಕ ಪೂರೈಕೆ ಮಾಡದ ರೀತಿಯಲ್ಲಿ ನೀಡಿರುವ ಆದೇಶಗಳ ಸಾಕ್ಷ್ಯ ನನ್ನ ಬಳಿಯಿದೆ ಎಂದು ಹೇಳಿದ್ದಾರೆ.
"ರಾಜ್ಯ ಸರ್ಕಾರವು ರೋಹಿಣಿ ಸಿಂಧೂರಿ ವಿರುದ್ಧ ಕೊಲೆ ಮೊಕದ್ದಮೆ ಹೂಡಬೇಕು ಹಾಗೂ ಹುದ್ದೆಯಿಂದ ಅಮಾನತುಗೊಳಿಸಬೇಕು. ಆಕ್ಸಿಜನ್ ಏಜೆನ್ಸಿ ಮತ್ತು ಟ್ರಕ್ ನಿರ್ದೇಶಕರಿಗೆ ಬೆದರಿಕೆ ಹಾಕಿರುವ ಬಗ್ಗೆ ಸಾಕ್ಷ್ಯವಿದೆ. ಜಿಲ್ಲೆಯ ಜನತೆ ಪರವಾಗಿ ನಾನು ಹೈಕೋರ್ಟ್ ಮೊರೆ ಹೋಗುತ್ತೇನೆ. ಇದರ ಜೊತೆಗೆ ಮಾನವ ಹಕ್ಕು ಆಯೋಗಕ್ಕೂ ದೂರು ನೀಡುತ್ತೇವೆ. ಆಕೆ ವಿರುದ್ಧ ಮೊಕದ್ದಮೆ ಹೂಡದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ" ಎಂದು ಬಿಜೆಪಿ ನಾಯಕ ಅಮ್ಮನಪುರ್ ಮಲ್ಲೇಶ್ ಎಚ್ಚರಿಕೆ ನೀಡಿದ್ದಾರೆ.

ಸುಂದರವಾಗಿದ್ರೆ, ಸೌಂದರ್ಯ ಸ್ಪರ್ಧೆಗೆ ಹೋಗಲಿ:
ರೋಹಿಣಿ ಸಿಂಧೂರಿ ಒಬ್ಬ ವಿಕೃತ ಮನಸ್ಥಿತಿಯನ್ನು ಹೊಂದಿರುವ ಅಧಿಕಾರಿಯಾಗಿದ್ದಾರೆ. ನೋಡೋದಕ್ಕೆ ಅವರು ಸುಂದರವಾಗಿದ್ದರೆ, ಸೌಂದರ್ಯ ಸ್ಪರ್ಧೆಗೆ ಹೋಗಿ ಭಾಗವಹಿಸಲಿ. ಆದರೆ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಅಮ್ಮನಪುರ್ ಮಲ್ಲೇಶ್ ದೂಷಿಸಿದ್ದಾರೆ.
ಏನಿದು ಚಾಮರಾಜನಗರ ಘಟನೆ?:
ಕಳೆದ ಮೆ 3ರ ರಾತ್ರಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ರಾತ್ರಿ 10.30ರಿಂದ ಸುಮಾರು 4 ಗಂಟೆಗಳ ಕಾಲ ಆಕ್ಸಿಜನ್ ಇರಲಿಲ್ಲ. ವೈದ್ಯಕೀಯ ಆಮ್ಲಜನಕ ಕೊರತೆಯಿಂದಾಗಿ 24ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದರು. ಈ ಘಟನೆಗೆ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಮತ್ತು ಜಿಲ್ಲಾಧಿಕಾರಿಗಳು ಹೊಣೆ ಎಂದು ವರದಿ ಬಂದಿತ್ತು.












Click it and Unblock the Notifications