ನಿರಂತರ ಮಳೆ; ಬಂಡೀಪುರದ ಕೆರೆಕಟ್ಟೆಗಳಲ್ಲೀಗ ಜೀವ ಕಳೆ!
ಚಾಮರಾಜನಗರ, ನವೆಂಬರ್ 23; ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದಿರುವ ಕಾರಣ ಅರಣ್ಯಕ್ಕೆ ಜೀವ ಕಳೆ ಬಂದಿದೆ. ಕೆರೆಕಟ್ಟೆಗಳು ತುಂಬಿ ಎಲ್ಲಡೆ ನೀರಾಡುತ್ತಿದೆ. ಇಡೀ ಅರಣ್ಯ ಹಸಿರಿನಿಂದ ನಳನಳಿಸುತ್ತಿದ್ದರೆ, ಅರಣ್ಯದೊಳಗೆ ಹರಿಯುವ ನದಿಗಳಲ್ಲಿ ಜೀವಕಳೆ ಎದ್ದು ಕಾಣುತ್ತಿದೆ.
ಕೆರೆಕಟ್ಟೆಗಳು ತುಂಬಿ ನೀರು ಅಲೆಯಾಡುತ್ತಿದೆ. ಇದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಹರ್ಷ ತಂದಿದೆ. ಕಳೆದ ಮೂರು ವರ್ಷಗಳಿಂದ ಬಂಡೀಪುರದಲ್ಲಿ ಮಳೆ ಸುರಿಯುತ್ತಿರುವುದರಿಂದ ಹೇರಳವಾಗಿ ಹಸಿರು ಮೇವು, ನೀರು ದೊರೆಯುತ್ತಿದ್ದು ವನ್ಯ ಪ್ರಾಣಿಗಳು ನೆಮ್ಮದಿಯಾಗಿವೆ.
ಸುಮಾರು 4 ವರ್ಷಗಳ ಹಿಂದೆ ಸರಿಯಾಗಿ ಮಳೆಯಾಗದ ಕಾರಣದಿಂದ ಬಂಡೀಪುರ ಅರಣ್ಯದಲ್ಲಿ ನೀರಿನ ಕೊರತೆಯಾಗಿದ್ದಲ್ಲದೆ, ಗಿಡಮರಗಳು ಒಣಗಿ ಕಾಡ್ಗಿಚ್ಚಿಗೆ ಅರಣ್ಯವೇ ನಾಶವಾಗಿತ್ತು. ಜತೆಗೆ ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿದು, ಕೆರೆಕಟ್ಟೆಗಳು ಒಣಗಿ ಹೋಗಿದ್ದವು. ಈ ವೇಳೆ ಅರಣ್ಯದಲ್ಲಿದ್ದ ವನ್ಯ ಪ್ರಾಣಿಗಳು ನೀರನ್ನು ಅರಸಿಕೊಂಡು ತಮಿಳುನಾಡು, ಕೇರಳ, ಕಬಿನಿ ಕಡೆಗೆ ವಲಸೆ ಹೋಗಿದ್ದವು.

ಕೆಲವು ಪ್ರಾಣಿಗಳು ಎಲ್ಲಿಗೂ ಹೋಗಲಾಗದೆ ಬತ್ತಿದ ಕೆರೆಗಳ ಸುತ್ತ ಗಿರಕಿ ಹೊಡೆಯುತ್ತಿದ್ದವು. ಈ ವೇಳೆ ಅರಣ್ಯ ಇಲಾಖೆ ಓಂಕಾರ್ ವಲಯದ ಸೌತ್ ಕೆರೆಯಲ್ಲಿ ಕೊಳವೆ ಬಾವಿಯನ್ನು 800 ಅಡಿಯಷ್ಟು ಕೊರೆದು ಸೌರಶಕ್ತಿ ಮೋಟಾರು ಅಳವಡಿಸಿ ಕೆರೆಗೆ ನೀರು ತುಂಬಿಸಲಾಗಿತ್ತು.
ಬಹುಶಃ ಅಂತಹ ಸಂಕಷ್ಟದ ದಿನಗಳು ಮತ್ತೆ ಯಾವತ್ತೂ ಬಾರದಂತೆ ಪ್ರಾರ್ಥಿಸುವಂತಾಗಿತ್ತು. 2017ರ ಬಳಿಕ ಪ್ರತಿವರ್ಷವೂ ಮಳೆ ಚೆನ್ನಾಗಿ ಸುರಿಯುತ್ತಿದೆ. ಇದರಿಂದ ಕೆರೆಕಟ್ಟೆಗಳು ತುಂಬಿ ಬೇಸಿಗೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆಗಳು ಕಂಡು ಬಾರದಿರುವುದು ಸಂತಸದ ವಿಷಯವಾಗಿದೆ.
ಬಂಡೀಪುರದಲ್ಲಿ ನೂರಾರು ಕೆರೆಗಳಿವೆ; ಇದೀಗ ಎಲ್ಲೆಡೆ ಮಳೆ ಸುರಿಯುತ್ತಿರುವುದರಿಂದ ಮುಂದಿನ ಬೇಸಿಗೆಯಲ್ಲಿಯೂ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಲಾರದು.

ಅರಣ್ಯ ಇಲಾಖೆ ಮೂಲಗಳ ಪ್ರಕಾರ ಬಂಡೀಪುರ ವಲಯದಲ್ಲಿ ಸುಮಾರು 55 ಕೆರೆಗಳಿದ್ದು, ಅವುಗಳೆಲ್ಲದರಲ್ಲಿಯೂ ನೀರು ತುಂಬಿದೆ. ಬಂಡೀಪುರ ಅಭಯಾರಣ್ಯದಲ್ಲಿರುವ ಕೆರೆಗಳ ಬಗ್ಗೆ ನೋಡುವುದಾದರೆ, ಗೋಪಾಲಸ್ವಾಮಿಬೆಟ್ಟದ ವ್ಯಾಪ್ತಿಯಲ್ಲಿ 30 ಕೆರೆಗಳಿದ್ದು ಕುಂಟಬಸಪ್ಪನಕಟ್ಟೆ, ಹೊಸಕೆರೆ, ಕಾಳೀಕಟ್ಟೆ, ದೊಡ್ಡಕೆರೆ, ಚಿಗರುಮಡುವಿನಕಟ್ಟೆಗಳು ಭರ್ತಿಯಾಗಿವೆ.
ಮೂಲೆಹೊಳೆ ವಲಯದ 30 ಕೆರೆಗಳಲ್ಲಿಯೂ ಜೀವಕಳೆ ಕಾಣಿಸುತ್ತಿದೆ. ನವಿಲುಕೆರೆ, ಮಡಕೆರೆಯೂ ತುಂಬಿದೆ. ಮೊಳೆಯೂರು ವಲಯದ 13 ಕೆರೆಗಳಲ್ಲಿ ಸೀಗೆವಾಡಿಕೆರೆ ದೊಡ್ಡದಾಸನಕಟ್ಟೆಕೆರೆ ಮುಖ್ಯವಾಗಿದ್ದು, ಯಡಿಯಾಲದ 26, ಓಂಕಾರ ವಲಯದ 33 ಕೆರೆಗಳು ನೀರು ತುಂಬಿ ಕಂಗೊಳಿಸುತ್ತಿವೆ. ಶಂಭುಕಟ್ಟೆ, ಮರಿಗೌಡನಕಟ್ಟೆ, ಅಂಕಪ್ಪನಕಟ್ಟೆ, ಶಾಂತಕಟ್ಟೆ, ಹಾಳಕಟ್ಟೆ, ಜಮ್ಮನಗಟ್ಟೆ ಕೆರೆಗಳು ಕಳೆದ ಕೆಲವು ವರ್ಷಗಳಿಂದ ಭರ್ತಿಯಾಗುತ್ತಲೇ ಬರುತ್ತಿವೆ.
ನೀರಿಗೆ ಬವಣೆ ಬಾರದು; ಕುಡಿಯಲು ನೀರು ಸೇರಿದಂತೆ ಹಸಿರು ಮೇವು ಸಿಕ್ಕಿದ್ದೇ ಆದರೆ ವನ್ಯ ಪ್ರಾಣಿಗಳು ಅರಣ್ಯದಿಂದ ನಾಡಿನತ್ತ ಬರುವುದು ತಪ್ಪಲಿದೆ. ಇದೇ ರೀತಿ ಮಳೆ ಮುಂದುವರೆದರೆ ಬಂಡೀಪುರ ಉದ್ಯಾನ ವ್ಯಾಪ್ತಿಯ ಎಲ್ಲ ಕೆರೆಕಟ್ಟೆಗಳು ಭರ್ತಿಯಾಗಿ ನೀರಿನ ಬವಣೆ ನೀಗಬಹುದು.
ಈಗ ಮಳೆ ಬಂದು ಸಮಸ್ಯೆಗಳು ನೀಗಿದ್ದರಿಂದ ಮುಂದಿನ ದಿನಗಳಲ್ಲಿ ವನ್ಯಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ಕಾಣಿಸದು ಜತೆಗೆ ನೀರನ್ನರಿಸಿಕೊಂಡು ಕೇರಳ, ತಮಿಳುನಾಡು ಕಡೆಗೆ ವನ್ಯಪ್ರಾಣಿಗಳು, ಪಕ್ಷಿಗಳು ವಲಸೆ ಹೋಗುವುದು ತಪ್ಪಲಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಹಿಂಗಾರು ಮಳೆ ಇನ್ನು ಬಿಡದೆ ಆಗಾಗ್ಗೆ ಸುರಿಯುತ್ತಿರುವುದು ಅರಣ್ಯ ಪ್ರದೇಶಗಳಿಗೆ ವರದಾನವಾಗಿದ್ದು, ಇಡೀ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಅದರೊಳಗೆ ಪ್ರಾಣಿಪಕ್ಷಿಗಳು ನೆಮ್ಮದಿಯಾಗಿ ವಿಹರಿಸುತ್ತಿರುವ ದೃಶ್ಯ ಎಲ್ಲರ ಗಮನಸೆಳೆಯುತ್ತಿದೆ.












Click it and Unblock the Notifications