ವರುಣನ ಕೃಪೆಗೆ ಚಾಮರಾಜನಗರ ದೇಗುಲದಲ್ಲಿ ಪೂಜೆ ಪುನಸ್ಕಾರ
ಚಾಮರಾಜನಗರ, ಜೂನ್ 6: ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕವಿರುವ ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಮಳೆಗಾಗಿ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆಯೊಂದಿಗೆ ಪರ್ಜನ್ಯ ಜಪ ನಡೆಯಿತು.
ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ನಡೆದರೆ, ಕೊಳ್ಳೇಗಾಲ ತಾಲ್ಲೂಕಿನ ಮಧರಂಗ, ಸೋಮೇಶ್ವರ, ಪಾರ್ವತಿ ದೇವಾಲಯ, ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ, ಗಂಗಾಧರೇಶ್ವರ, ಚಾಮರಾಜನಗರದ ಚಾಮರಾಜೇಶ್ವರ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ, ವಿಜಯನಾರಾಯಣ ಹೀಗೆ ಹಲವಾರು ದೇವಾಲಯದಲ್ಲಿ ಹೋಮ ಜಪ ನಡೆದವು.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರುಣನ ಕೃಪೆಗಾಗಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇಗುಲಗಳಲ್ಲಿ ಗುರುವಾರ ವಿಶೇಷ ಪೂಜೆ, ಹೋಮ ಹವನಗಳನ್ನ ಹಮ್ಮಿಕೊಂಡಿತ್ತು. ಇತ್ತ ಗಡಿ ಜಿಲ್ಲೆ ಚಾಮರಾಜನಗರದ ವಿವಿಧ ಮುಜಾರಾಯಿ ದೇಗುಲಗಳಲ್ಲಿಯೂ ವಿಶೇಷ ಪೂಜೆಯೊಂದಿಗೆ ಪರ್ಜನ್ಯ ಜಪ ನಡೆಯಿತು. ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಚಾಮರಾಜೇಶ್ವರನಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಿ ಪರ್ಜನ್ಯ ಜಪ ಪಠಿಸಲಾಯಿತು.
ದೇವಸ್ಥಾನದ ಮುಖ್ಯ ಅರ್ಚಕ ರಾಮಕೃಷ್ಣ ನೇತೃತ್ವದಲ್ಲಿ ಮೂವರು ಅರ್ಚಕರು ಮಂತ್ರ ಪಠಣ ಮಾಡಿ ವರುಣನ ಕೃಪೆಗಾಗಿ ಪ್ರಾರ್ಥಿಸಿದರು. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದು, ಮುನಿಸಿಕೊಂಡಿರುವ ವರುಣದೇವ ಕೃಪೆ ತೋರಲಿ, ಜನ ಜಾನುವಾರು ಪಕ್ಷಿ ಸಂಕುಲದ ಉಳಿವಿಗಾಗಿ, ರಾಜ್ಯ ಸುಭಿಕ್ಷವಾಗಿರಲಿ, ಕೆರೆ ಕಟ್ಟೆಗಳು ತುಂಬಿ ರೈತರಿಗೆ ಅನುಕೂಲವಾಗಲಿ ಎಂದು ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.












Click it and Unblock the Notifications