ಬರ ಬಂದ ಊರಿಂದ ಬಸ್ ಹತ್ತಿ ಹೊರಟ ಕಾರ್ಮಿಕರು!
ಚಾಮರಾಜನಗರದಲ್ಲಿ ಹಳ್ಳಿಗಳು ನಿಧಾನವಾಗಿ ಖಾಲಿಯಾಗುತ್ತಿವೆ. ಅಲ್ಲಿಂದ ಹೊರಡುವ ಬಸ್ ಗಳಲ್ಲಿ ಜನರು ಮೈಸೂರು, ಕೇರಳದತ್ತ ಗುಳೆ ಹೊರಟಿದ್ದಾರೆ. ಇದು ಬರದ ಕೊಡುಗೆ. ಬಸ್ ನವರಿಗೆ ಆದಾಯ. ಹಳ್ಳಿ ಬಿಟ್ಟು ಹೊರಟವರನ್ನು ಕಂಡು ವೃದ್ಧರ ಕಣ್ಣಂಚಲ್ಲಿ ನೀರು
ಚಾಮರಾಜನಗರ, ಡಿಸೆಂಬರ್ 19: ಬರಗಾಲದ ಹಿನ್ನೆಲೆಯಲ್ಲಿ ಕೂಲಿ ಸಿಗದ ಕಾರ್ಮಿಕರು ಜಿಲ್ಲೆಯಿಂದ ಹೊರ ಹೋಗಲು ಆರಂಭಿಸಿದ್ದಾರೆ. ಈಗಾಗಲೇ ಕೇರಳ, ಕೊಡಗು, ಮೈಸೂರಿನತ್ತ ಕೆಲಸ ಹುಡುಕಿಕೊಂಡು ಸಾವಿರಾರು ಮಂದಿ ಹೊರಡುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ, ಮಂಗಲ, ಕಗ್ಗಳ, ಕಗ್ಗಳದಹುಂಡಿ ಹೀಗೆ ಹಲವಾರು ಗ್ರಾಮಗಳಿಂದ ಸಾವಿರಾರು ಮಂದಿ ಗಂಟು ಮೂಟೆ ಕಟ್ಟಿಕೊಂಡು ಕೇರಳದ ಕಡೆಗೆ ಬಸ್ ಹತ್ತುತ್ತಿದ್ದಾರೆ. ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುವ ಎಲ್ಲ ಬಸ್ ಗಳಲ್ಲಿ ಚಾಮರಾಜನಗರ ಜಿಲ್ಲೆಯ ಕೂಲಿ ಕಾರ್ಮಿಕರು ಕಂಡು ಬರುತ್ತಾರೆ. ಜಿಲ್ಲೆಯಲ್ಲಿ ಮಳೆಯಿಲ್ಲದೆ, ಬೆಳೆಯಿಲ್ಲದೆ, ಕೈಯಲ್ಲಿ ಕೆಲಸವಿಲ್ಲದೆ, ಜೀವನ ನಡೆಸುವುದೇ ಕಷ್ಟವಾಗಿದೆ.[ಬರ ಪರಿಶೀಲನಾ ಸಭೆ: ಟ್ಯಾಂಕರ್ ನೀರಿಗೆ ಕಾಗೋಡು ಸಲಹೆ]
ಈ ನಡುವೆ ಕಗ್ಗಳದಹುಂಡಿ ಗ್ರಾಮದ ಸಮೀಪ ಚೀನಾ ಮೂಲಕ ಚೆಂಡು ಹೂ ಸಂಸ್ಕರಣ ಘಟಕ ಸ್ಥಾಪನೆಯಾದರೆ ಪರಿಸರ ಕಲುಷಿತವಾಗಿ ರೈತರ ಬಾಳು ಹೀನಾಯ ಸ್ಥಿತಿಗೆ ಬರಲಿದೆ ಎನ್ನುವ ಕಾರಣಕ್ಕೆ ಈ ಭಾಗದ ರೈತರು ತಮ್ಮ ಕುಟುಂಬಗಳ ನಿರ್ವಹಣೆಗೆ ಕೇರಳದತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ.[ಸಚಿವರಿಂದ ರಾಜ್ಯ ಬರ ಅಧ್ಯಯನ ಪ್ರವಾಸ]
ಈಗಾಗಲೇ ಕೆಲವು ರೈತರು ಜಾನುವಾರು ಸಹಿತ ಎಚ್.ಡಿ.ಕೋಟೆಯತ್ತ ಹೊರಟಿದ್ದಾರೆ. ಕೆಲವು ಬಡ ರೈತರು ಕೃಷಿ ಮಾಡಲಾಗದೆ, ಮೇವುಗಳನ್ನು ಜಾನುವಾರಿಗೆ ಒದಗಿಸಲಾಗದೆ ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದರೆ, ಮತ್ತೆ ಕೆಲವರು ತಮ್ಮೊಂದಿಗೆ ಅವುಗಳನ್ನು ಕರೆದೊಯ್ಯುತ್ತಿದ್ದಾರೆ. ಒಟ್ಟಾರೆ ಈ ಬಾರಿಯ ಬರ ಜಿಲ್ಲೆಯ ಜನರನ್ನು ಕಂಗೆಡಿಸಿರುವುದಂತೂ ಸತ್ಯ.