ಕೊಳ್ಳೇಗಾಲದ ಮಾಂಬಳ್ಳಿಯಲ್ಲಿ ಸತ್ತವರಿಗೂ ಮುಕ್ತಿಯಿಲ್ಲ!
ಚಾಮರಾಜನಗರ, ಆಗಸ್ಟ್ 29: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಂಬಳ್ಳಿ ಗ್ರಾಮದಲ್ಲಿ ಯಾರಾದರೂ ಸತ್ತು ಹೋದರೆ ಅವರ ಹೆಣ ಹೂಳಲು ಜೀವವನ್ನೇ ಒತ್ತೆಯಿಟ್ಟು ನದಿದಾಟಿ ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಇಂದಿಗೂ ಜೀವಂತವಾಗಿದ್ದು, ಎದೆಮಟ್ಟ ನೀರಿದ್ದರೂ ದಾಟಿ ಅಂತ್ಯಕ್ರಿಯೆ ನಡೆಸುವುದು ಅನಿವಾರ್ಯವಾಗಿದೆ.
ಕೊಳ್ಳೇಗಾಲ ಪಟ್ಟಣದಿಂದ ಕೇವಲ 6 ಕಿ.ಮೀ ಅಂತರದಲ್ಲಿ ಮಾಂಬಳ್ಳಿ ಗ್ರಾಮವಿದೆ. ಆದರೆ ಇಲ್ಲಿನ ದಲಿತರು ಮಾತ್ರ ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ಇನ್ನೂ ಪ್ರತ್ಯೇಕ ಸ್ಮಶಾನವಿಲ್ಲದೆ ನದಿ ದಡದಲ್ಲಿ ಅಂತ್ಯಕ್ರಿಯೆ ನಡೆಸಬೇಕಾಗಿದೆ. ಆದರೆ ನದಿ ದಾಟಲು ಸೂಕ್ತ ಸೇತುವೆ ಇಲ್ಲದ ಕಾರಣದಿಂದ ಹರಿಯುವ ನೀರಿನಲ್ಲೇ ಹೆಣ ಹೊತ್ತು ನಡೆದುಕೊಂಡು ಹೋಗಬೇಕಾಗಿದೆ. ಇದು ಇಂದು ನಿನ್ನೆಯ ಕಥೆಯಲ್ಲ. ಕಳೆದ ಎಂಟು ದಶಕಗಳಿಂದಲೂ ಜನ ಸಂಕಷ್ಟ ಅನುಭವಿಸುತ್ತಾ ಬಂದಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಮಾಂಬಳ್ಳಿ ಗ್ರಾಮದವರೇ ಆಗಿದ್ದ ಶಾಸಕ ಜಯಣ್ಣ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಅವರ ಅಧಿಕಾರವಧಿಯಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಲೇ ಇಲ್ಲ.

ಇನ್ನು ಪ್ರಸಕ್ತ ಶಾಸಕರಾಗಿರುವ ಎನ್.ಮಹೇಶ್ ಅವರು ಸಚಿವರಾಗಿದ್ದ ವೇಳೆಯೂ ಇಂತಹ ಘಟನೆ ನಡೆದಿತ್ತು. ಆಗಲೂ ಮಹೇಶ್ ಅವರ ಗಮನಕ್ಕೆ ತರಲಾಗಿತ್ತು. ಆಗ ಕ್ರಮವಹಿಸುವ ಭರವಸೆ ನೀಡಿದ್ದರಷ್ಟೆ. ಆದರೆ ಅಲ್ಲಿಂದ ಇಲ್ಲಿವರೆಗೆ ಯಾವುದೇ ಬದಲಾವಣೆ ಮಾತ್ರ ಕಾಣಲಿಲ್ಲ. ಜನರು ಯಾರಾದರೂ ಸತ್ತರೆ ಪರದಾಡುವುದು ತಪ್ಪಿಲ್ಲ.

ಹಾಗೆನೋಡಿದರೆ ಗ್ರಾಮದ ಹೊರವಲಯದಲ್ಲಿ 3 ಕಿ.ಮೀ ಅಂತರದಲ್ಲಿ ಸರ್ಕಾರದ ಗೋಮಾಳವಿದ್ದು, ಅಲ್ಲಿಯೇ ಶವ ಸಂಸ್ಕಾರ ಮಾಡಲಾಗುತ್ತಿದೆ. ಆದರೆ ಅಲ್ಲಿಗೆ ತೆರಳುವುದು ಮಾತ್ರ ದುಸ್ಸಾಹಸವೇ ಸರಿ. ಏಕೆಂದರೆ ಖಾಸಗಿ ಜಮೀನಿನ ಮಧೆ ಸುವರ್ಣಾವತಿ ಹೊನ್ನಹೊಳೆ ಹರಿಯುತ್ತಿದೆ. ಇದನ್ನು ದಾಟಿ ಆಚೆ ದಡದಲ್ಲಿ ಶವಸಂಸ್ಕಾರ ಮಾಡಬೇಕು. ಬೇಸಿಗೆಯ ದಿನದಲ್ಲಾದರೆ ನದಿಯನ್ನು ದಾಟಿ ಹೋಗಬಹುದು. ಆದರೆ ಮಳೆಗಾಲದಲ್ಲಿ ನದಿ ತುಂಬಿ ಹರಿದಾಗ ಮಾತ್ರ ಜೀವ ಕೈಯಲ್ಲಿ ಹಿಡಿದುಕೊಂಡು ಹೆಣ ಹೊತ್ತು ಸಾಗಬೇಕಾಗುತ್ತದೆ.
ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications