ಗುಂಡ್ಲುಪೇಟೆಯ ಗ್ರಾಪಂಗಳಿಗೆ ಚುರುಕು ಮುಟ್ಟಿಸಿದ ಇಓ ಬಿಂದ್ಯಾ!
ಚಾಮರಾಜನಗರ, ಸೆಪ್ಟೆಂಬರ್ 7: ಇತ್ತೀಚೆಗೆಯಷ್ಟೆ ಗುಂಡ್ಲುಪೇಟೆ ತಾಪಂ ಇಓ(ಕಾರ್ಯನಿರ್ವಾಹಕ ಅಧಿಕಾರಿ) ಆಗಿ ಜವಬ್ದಾರಿ ವಹಿಸಿಕೊಂಡಿರುವ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಎಸ್.ಬಿಂದ್ಯಾ ಅವರು ಜಡ್ಡುಗಟ್ಟಿದ ಗ್ರಾಪಂಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತಿರುವುದರಿಂದ ಸಾಮಾನ್ಯ ಜನಕ್ಕೆ ಸಮಾಧಾನ ತಂದಿದೆ.
ಗುಂಡ್ಲುಪೇಟೆಯಲ್ಲಿ ಮನೆ ನಿರ್ಮಾಣಕ್ಕೂ ಸಿಗುತ್ತಿಲ್ಲ ಲೈಸನ್ಸ್!
ಶೌಚಾಲಯ ನಿರ್ಮಾಣದ ಗುರಿ ಸಾಧಿಸದ ಗ್ರಾಪಂಗಳಿಗೆ ಚುರುಕು ಮುಟ್ಟಿಸಿದ್ದಾರೆ. ಹೀಗಾಗಿ ರಜಾ ದಿನಗಳಲ್ಲಿಯೂ ಗ್ರಾಪಂ ಪಿಡಿಓಗಳು ಕರ್ತವ್ಯಕ್ಕೆ ಹಾಜರಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಮಾಡದ ಜನರ ಮನವೊಲಿಸಿ ಅವರು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮಾಡುತ್ತಿರುವುದು ಕಂಡುಬರುತ್ತಿದೆ.
ಕೆಲವು ಗ್ರಾಮಗಳಿಗೆ ತಾವೇ ಖುದ್ದಾಗಿ ಅಧಿಕಾರಿಗಳೊಂದಿಗೆ ತೆರಳಿ ಶೌಚಾಲಯದ ನಿರ್ಮಿಸಲು ಅಶಕ್ತರಾದ ಕುಟುಂಬಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತು ಬಗ್ಗೆ ಮಾಹಿತಿ ನೀಡಿ, ಸಹಾಯಧನ ನೀಡುವ ಮೂಲಕ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಇಓ ಬಿಂದ್ಯಾ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಶೌಚಾಲಯ ನಿರ್ಮಾಣ ಹಾಗೂ ನರೇಗಾ ಯೋಜನೆಯು ನಿರೀಕ್ಷಿತ ಗುರಿ ಸಾಧಿಸಿರಲಿಲ್ಲ ಈ ಕಾರಣದಿಂದಾಗಿ ಕೂಡಲೇ ಗುರಿ ಸಾಧಿಸುವಂತೆ ಸೂಚನೆ ನೀಡಿದ ಕಾರಣ ಅಧಿಕಾರಿಗಳು ಚುರುಕಾಗಿರುವುದು ಇದೀಗ ಕಂಡುಬರುತ್ತಿದೆ.
ತಾಲೂಕಿನಲ್ಲಿ ಇದುವರೆಗೆ ಮರಳಿನ ಅಭಾವ ಹಾಗೂ ಶೌಚಾಲಯ ನಿರ್ಮಿಸಿಕೊಂಡರೂ ಸ್ಥಳೀಯ ಗ್ರಾಮಪಂಚಾಯಿತಿಗಳಿಂದ ಸಹಾಯಧನ ದೊರಕದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸವಲತ್ತು ಬಳಕೆಗೆ ಹಿಂದೇಟು ಹಾಕುತ್ತಿದ್ದರು. ತಾಲೂಕಿನ 35 ಗ್ರಾಪಂಗಳಿಗೆ ಕೇವಲ 16 ಪಿಡಿಒ ಗಳಿದ್ದು ಬಹುತೇಕರು ಎರೆಡೆರಡು ಗ್ರಾಪಂ ಹೊಣೆ ಹೊತ್ತಿದ್ದು ಸಕಾಲದಲ್ಲಿ ಕಚೇರಿಗಳಿಗೆ ತೆರಳದ ಕಾರಣದಿಂದ ಸಾರ್ವಜನಿಕರು ಪರದಾಡುವಂತಾಗಿತ್ತು.
ಈಗ ಎಲ್ಲ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಸಭೆಯನ್ನು ಬೆಳಗ್ಗೆ 8ಕ್ಕೆ ಆರಂಭಿಸಿ ಸಭೆಯಲ್ಲಿ ಪ್ರತಿ ಗ್ರಾಪಂಗಳ ಗುರಿ ಹಾಗೂ ಸಾಧನೆಯ ಪರಿಶೀಲನೆ ನಡೆಸಿ ಪ್ರತಿ ದಿನವೂ ಮೂರು ಗ್ರಾಪಂಗಳಿಗೆ ಭೇಟಿ ನೀಡುವುದು ಒಂದೆಡೆಯಾದರೆ, ಮತ್ತೊಂದೆಡೆ ಸಭೆ ಮುಗಿದ ನಂತರ ಎಲ್ಲ ಗ್ರಾಪಂ ಅಧಿಕಾರಿಗಳು 10 ಗಂಟೆಗೆ ತಮ್ಮ ಕಚೇರಿಗೆ ತಲುಪಿ ಅಲ್ಲಿಂದಲೇ ವಾಟ್ಸಪ್ ಮೂಲಕ ತಮ್ಮ ಹಾಜರಾತಿ ಖಚಿತಪಡಿಸುವಂತೆ ಮಾಡಿದ್ದಾರೆ. ಇದರಿಂದಾಗಿ ಎಲ್ಲ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಗೆ ಕಚೇರಿ ಸಮಯದಲ್ಲಿ ಅಧಿಕಾರಿಗಳು ದೊರಕುವಂತಾಗಿದೆ. ಜತೆಗೆ ಸ್ಥಗಿತಗೊಂಡಿದ್ದ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುತ್ತಿದೆ.
ಜತೆಗೆ ರಜಾದಿನಗಳಲ್ಲಿಯೂ ಗ್ರಾಪಂ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಮನೆಮನೆಗೆ ತೆರಳಿ ಶೌಚಾಲಯ ನಿರ್ಮಿಸಿಕೊಂಡರೆ ದೊರಕುವ ಸವಲತ್ತುಗಳು ಹಾಗೂ ಮಹಿಳೆಯರ ಗೌರವ ಹೆಚ್ಚಳವಾಗುವ ಬಗ್ಗೆ ಮನವರಿಕೆ ಮಾಡುವ ಜೊತೆಗೆ ಕೆಲವರಿಗೆ ಜೆಸಿಬಿ ನೆರವಿನಿಂದ ಗುಂಡಿಗಳನ್ನು ತೆಗೆಸುವ ಮೂಲಕ ಒಂದೇ ತಿಂಗಳಿನಲ್ಲಿ 400 ಶೌಚಾಲಯಗಳ ನಿರ್ಮಾಣ ಮಾಡಿಸುವಲ್ಲಿಯೂ ತಾಪಂ ಇಓ ಬಿಂದ್ಯಾ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆಗಳು ವ್ಯಕ್ತವಾಗತೊಡಗಿದ್ದು, ಇನ್ನೊಂದು ತಿಂಗಳಿನೊಳಗೆ ಬಹುತೇಕ ಗ್ರಾಮಗಳು ಬಯಲು ಶೌಚ ಮುಕ್ತವಾಗುವ ಲಕ್ಷಣಗಳು ಕಂಡು ಬಂದಿದೆ.