ಚಾಮರಾಜನಗರದ ಹೊನ್ನೇಗೌಡನಹುಂಡಿ ಶಾಲೆಗೆ ಇಬ್ಬರೇ ವಿದ್ಯಾರ್ಥಿಗಳು..!
ಚಾಮರಾಜನಗರ, ಫೆಬ್ರವರಿ 11: ಒಬಿರಾಯನ ಕಾಲದ ಕಟ್ಟಡಗಳು, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲತೆ, ಸರ್ಕಾರದ ನಿರ್ಲಕ್ಷ್ಯ, ಖಾಸಗಿ ಶಾಲೆಗಳತ್ತ ಪೋಷಕರ ಆಕರ್ಷಣೆ...ಹೀಗೆ ಹತ್ತಾರು ಕಾರಣಗಳಿಂದಾಗಿ ಒಂದು ಕಾಲದಲ್ಲಿ ಕೊಠಡಿ ತುಂಬಾ ತುಂಬಿಕೊಂಡಿದ್ದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಗೊಳ್ಳುತ್ತಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ.
ಸರ್ಕಾರ ಸರಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದ್ದರೂ ಅದ್ಯಾವುದೂ ಪ್ರಯೋಜನಕ್ಕೆ ಬಾರದಂತಾಗಿದೆ. ಬಹಳಷ್ಟು ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲೆಗಳನ್ನು ಬಿಟ್ಟು ಪೇಟೆ, ಪಟ್ಟಣಗಳ ಖಾಸಗಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಜೊತೆಗೆ ಆಂಗ್ಲ ಮಾಧ್ಯಮದ ವ್ಯಾಮೋಹವೂ ಕೂಡ ಸರ್ಕಾರಿ ಶಾಲೆಯನ್ನು ತೊರೆಯುವಂತೆ ಮಾಡುತ್ತಿದೆ.
ಶಾಲೆ ಬಿಟ್ಟವರು ಬೆಂಗಳೂರು ದಕ್ಷಿಣದಲ್ಲೇ ಹೆಚ್ಚು
ಹಲವು ದಶಕಗಳ ಹಿಂದೆ ಹೋಬಳಿ, ಗ್ರಾಮಮಟ್ಟದಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗಿತ್ತು. ಈ ಶಾಲೆಗಳಲ್ಲಿ ಆಯಾ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಬಂದು ಪಾಠ ಕಲಿಯುತ್ತಿದ್ದರು. ಆದರೆ ಈಗ ಹಾಗಿಲ್ಲ. ವಾಹನ ಸೌಲಭ್ಯವಿರುವ ಕಾರಣ ಪೇಟೆಗಳ ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗುವಂತಾಗಿದೆ.
ಪರಿಣಾಮ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಕಿರಿಯ ಪ್ರಾಥಮಿಕ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 2 ಕ್ಕೆ ಬಂದು ನಿಂತಿದೆ ಎಂದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಏನಾಗಬಹುದು ಎಂಬ ಪ್ರಶ್ನೆಯೂ ನಮ್ಮನ್ನು ಕಾಡದಿರದು.
ಹಳ್ಳಿ ಬಿಟ್ಟು ಪಟ್ಟಣಕ್ಕೆ
ಈಗಾಗಲೇ ಹಲವು ಸರ್ಕಾರಿ ಶಾಲೆಗಳು ಮುಚ್ಚಿವೆ. ಮತ್ತೆ ಕೆಲವು ಶಾಲೆಗಳನ್ನು ವಿಲೀನಗೊಳಿಸಲಾಗಿದೆ. ಖಾಸಗಿ ಶಾಲೆಗಳು ಕೆಲವು ದಶಕಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾದ ಪರಿಣಾಮ ಮತ್ತು ಪೋಷಕರಿಗೂ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆನ್ನುವ ಮನೋಭಾವ ಬಂದಿರುವ ಕಾರಣದಿಂದಾಗಿ ಮಕ್ಕಳ ಶಿಕ್ಷಣಕ್ಕಾಗಿಯೇ ಪೋಷಕರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಉದಾಹರಣೆಗಳಿವೆ. ಹೀಗಿರುವಾಗ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವುದಾದರೂ ಹೇಗೆ?
ಒರ್ವ ಶಿಕ್ಷಕರಿಂದ ಪಾಠ
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ ಎಂಬುದಕ್ಕೆ ಚಾಮರಾಜನಗರ ತಾಲೂಕಿನ ಹೊನ್ನೇಗೌಡನಹುಂಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿಯಾಗಿದೆ. ಏಕೆಂದರೆ ಇಲ್ಲಿ ಒಂದರಿಂದ ಐದನೇ ತರಗತಿವರೆಗೆ ತರಗತಿಗಳಿದ್ದರೂ ಸದ್ಯ ಶಾಲೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಮಾತ್ರ ಇಬ್ಬರೇ. ಅದು ಕೂಡ ಒಂದರಿಂದ ನಾಲ್ಕನೇ ತರಗತಿ ತನಕ ಒಂದೇ ಒಂದು ವಿದ್ಯಾರ್ಥಿಯಿಲ್ಲ. ಐದನೇ ತರಗತಿಯಲ್ಲಿ ಮಾತ್ರ ಇಬ್ಬರು ವಿದ್ಯಾರ್ಥಿನಿಯರಿದ್ದಾರೆ. ಇವರಿಗೆ ಒಬ್ಬ ಶಿಕ್ಷಕರು ಪಾಠ ಮಾಡುತ್ತಾರೆ.
ಸರ್ಕಾರಿ ಶಾಲೆ ಇರುವ ಕಡೆ ಖಾಸಗಿ ಆರ್ಟಿಇ ಸೀಟು ಇಲ್ಲ
ಆರಂಭದಲ್ಲಿ ಏರುಮುಖ
ಹೊನ್ನೇಗೌಡನಹುಂಡಿ ಗ್ರಾಮದಲ್ಲಿ 1967ನೇ ಸಾಲಿನಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಒಂದೇ ಕೊಠಡಿಯಲ್ಲಿ 1 ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಆರಂಭಿಸಲಾಯಿತು. ಆರಂಭದಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಏರುಮುಖವಾಗಿತ್ತು. ಆದರೆ, ಕಳೆದ 4 ವರ್ಷದಿಂದ ಮಕ್ಕಳನ್ನು ಇಲ್ಲಿಗೆ ದಾಖಲಿಸುವವರೇ ಇಲ್ಲದಾಗಿದೆ.
ಬೀಗ ಹಾಕುವುದು ಅನಿವಾರ್ಯ
ಹಾಗೆ ನೋಡಿದರೆ ಹೊನ್ನೇಗೌಡನಹುಂಡಿ ಗ್ರಾಮದಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳು ತಮ್ಮ ಮಕ್ಕಳನ್ನು ಸ್ಥಳೀಯ ಶಾಲೆಗೆ ಸೇರಿಸುತ್ತಿದ್ದರಿಂದ ಸುಮಾರು 20 ರಿಂದ 25 ಮಕ್ಕಳು ದಾಖಲಾಗುತ್ತಿದ್ದರು. ಆದರೆ ಕಳೆದೊಂದು ದಶಕದಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕ್ಷೀಣಿಸುವ ಮೂಲಕ ಇದೀಗ 2ಕ್ಕೆ ಬಂದು ನಿಂತಿದೆ.
ಮುಂದಿನ ವರ್ಷ ಈ ಮಕ್ಕಳು ಉತ್ತೀರ್ಣರಾಗಿ ಹೋದರೆ ಮತ್ತೆ ಒಂದನೇ ತರಗತಿಗೆ ಮಕ್ಕಳು ದಾಖಲಾದರೆ ಮಾತ್ರ ಶಾಲೆ ನಡೆಯಲಿದೆ. ಇಲ್ಲದೆ ಹೋದರೆ ಇದಕ್ಕೆ ಬೀಗ ಹಾಕುವುದು ಅನಿವಾರ್ಯವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿ ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಭವಿಷ್ಯವೇನು ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.
ರಾಜ್ಯದಲ್ಲಿ ಬರೋಬ್ಬರಿ 82 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ! ಇದೇನಿದು?