ರಟ್ಟಿನ ಬಾಕ್ಸಿನಲ್ಲಿ ಇದ್ದಿದ್ದು ಒಂದು ತಿಂಗಳ ಕೂಸು
ಬಾಕ್ಸಿನಲ್ಲಿ ಹೆಣ್ಣು ಮಗುವನ್ನು ಇಟ್ಟು ಸಾಗಿಸುತ್ತಿದ್ದ ಕೇರಳದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಮಗುವನ್ನು ರಕ್ಷಿಸಿದ್ದಾರೆ.
ಚಾಮರಾಜನಗರ ನವೆಂಬರ್ 5: ಬಾಕ್ಸಿನಲ್ಲಿ ಹೆಣ್ಣು ಮಗುವನ್ನು ಇಟ್ಟು ಸಾಗಿಸುತ್ತಿದ್ದ ಕೇರಳದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಮಗುವನ್ನು ರಕ್ಷಿಸಿದ್ದಾರೆ.
ಅದೂ ಪ್ರಪಂಚವೇ ಅರಿಯದ ಒಂದು ತಿಂಗಳ ಹೆಣ್ಣು ಮಗುವಾಗಿದ್ದು, ಮಗುವನ್ನು ಸಾಗಿಸುತ್ತಿದ್ದವರಲ್ಲಿ ಒಬ್ಬ ಸೆರೆ ಸಿಕ್ಕಿದ್ದಾನೆ.
ಮೈಸೂರಿನಲ್ಲಿ ಮಕ್ಕಳ ಸಾಗಾಣಿಕೆ ಜಾಲ ಪತ್ತೆಯಾದ ಬೆನ್ನಲ್ಲೇ ಈ ಪ್ರಕರಣ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಇದರ ಹಿಂದೆ ದೊಡ್ಡ ಜಾಲದ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.[ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ]
ಗುಂಡ್ಲುಪೇಟೆಯಲ್ಲಿ ಮೈಸೂರಿನಿಂದ ಬಂದ ಕೇರಳ ರಾಜ್ಯದ ತಿಸೂರು ಮೂಲದ ವ್ಯಕಿಗಳಿಬ್ಬರು ಕಾರಿನಲ್ಲಿ ಮಹಿಳೆಯೊಂದಿಗೆ ರಟ್ಟಿನ ಬಾಕ್ಸ್ ಒಂದನ್ನು ತಂದಿದ್ದಾರೆ. ಮತ್ತೊಂದು ಬಾಡಿಗೆ ಕಾರನ್ನು ಪಡೆಯುವಾಗ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರಟ್ಟಿನ ಬಾಕ್ಸಿನಲ್ಲಿ ಏನಿದೆ ಎಂದು ಕೇಳಿದ್ದು ಮಹಿಳೆಯರು ಪರಸ್ಪರ ಸನ್ನೆಯನ್ನು ಮಾಡಿದ್ದಾರೆ. ನಂತರ ರಟ್ಟಿನ ಬಾಕ್ಸನ್ನು ಪರಿಶೀಲಿಸಿದಾಗ ಒಂದು ತಿಂಗಳ ಹೆಣ್ಣು ಮಗು ಇರುವುದು ಪತ್ತೆಯಾಗಿದೆ.
ಭಯಗೊಂಡ ಅವರು ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭ ಒಬ್ಬ ಸೆರೆ ಸಿಕ್ಕರೆ, ಮತ್ತೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ. ಸೆರೆ ಸಿಕ್ಕಿರುವ ವ್ಯಕ್ತಿಯನ್ನು ಗುಂಡ್ಲುಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈತ ತ್ರಿಸೂರು ಮೂಲದವನಾಗಿದ್ದು ಫ್ರಾನ್ಸಿಸ್ ಎನ್ನಲಾಗಿದೆ.[ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಮೂವರು ಸರಗಳ್ಳರು]
ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆ ಬಂದು ಸುಲ್ತಾನ್ ಬತ್ತೇರಿ ಮೂಲಕವಾಗಿ ಕೇರಳಕ್ಕೆ ಪ್ರಯಾಣ ಬೆಳಸುವ ಯೋಜನೆಯನ್ನು ಹೊಂದಿದ್ದಾಗಿ ಬಂಧಿತ ಫಾನ್ಸಿಸ್ ಪೊಲೀಸರಿಗೆ ತಿಳಿಸಿದ್ದಾನೆ. ಮಗುವನ್ನು ಎಲ್ಲಿಂದ ತರಲಾಗಿದೆ. ಜತೆಯಲ್ಲಿದ್ದವರು ಯಾರು ಎಂಬುವುದರ ಬಗ್ಗೆ ತನಿಖೆ ನಡೆಯಬೇಕಿದೆ.
ಮೈಸೂರಿನಲ್ಲಿ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಹಾಡು ಹಗಲೇ ಹೆಣ್ಣು ಮಗುವನ್ನು ಸಾಗಿಸುತ್ತಿರುವುದು ಪತ್ತೆಯಾಗಿದ್ದು ಆ ಪ್ರಕರಣಕ್ಕೂ ಇದಕ್ಕೂ ಸಂಪರ್ಕ ವಿದೆಯೇ? ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಈ ಜಾಲದಲ್ಲಿ ಇನ್ನು ಎಷ್ಟು ಮಂದಿಯಿದ್ದಾರೆ. ಎಷ್ಟು ಹಸುಗೂಸುಗಳು ಸ್ಥಾನಪಲ್ಲಟ ನಡೆಯುತ್ತಿದೆ ಎಂಬುದು ತಿಳಿಯಬೇಕಿದೆ.