ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಕೆ
ಚಾಮರಾಜನಗರ, ಮಾರ್ಚ್ 03: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ ಬಳಿಕ ಇತ್ತ ಆಗಮಿಸುವ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಬಂಡೀಪುರದಲ್ಲಿ ಸಫಾರಿಯನ್ನು ಆರಂಭಿಸಲಾಗಿದ್ದರೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ.
ಇದಕ್ಕೆ ಬಂಡೀಪುರ ಉದ್ಯಾನ ಹೊತ್ತಿ ಉರಿದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಮಕ್ಕಳಿಗೆ ಪರೀಕ್ಷಾ ಕಾಲವಾಗಿರುವುದು ಕಾರಣವಾಗಿರ ಬಹುದು. ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಪ್ರತಿ ದಿನವೂ ಸಾವಿರಾರು ಪ್ರವಾಸಿಗರು ಆಗಮಿಸಿ ಸಫಾರಿಗೆ ತೆರಳುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಉದ್ಯಾನದ ಕುಂದಕೆರೆ, ಗೋಪಾಲಸ್ವಾಮಿಬೆಟ್ಟ, ಬಂಡೀಪುರ, ಮದ್ದೂರು, ಮೂಲೆಹೊಳೆ ವಲಯಗಳಲ್ಲಿ ಹಾಗೂ ಸಫಾರಿ ವಲಯದಲ್ಲಿಯೂ ಬೆಂಕಿ ಹರಡಿದ್ದರಿಂದ ಕೆಲವು ದಿನಗಳ ಕಾಲ ಸಫಾರಿ ನಿಲ್ಲಿಸಲಾಗಿತ್ತು. ಇದೀಗ ಸಫಾರಿಯನ್ನು ಮತ್ತೆ ಆರಂಭಿಸಿದ್ದರೂ ದಿನಕ್ಕೆ ನೂರಾರು ಮಂದಿ ಮಾತ್ರ ಪ್ರವಾಸಿಗರು ಆಗಮಿಸುತ್ತಿರುವುದು ಕಂಡು ಬರುತ್ತಿದೆ.

ಇದೀಗ ನೂತನವಾಗಿ ಆಗಮಿಸಿರುವ ಸಿಎಫ್ ಟಿ.ಬಾಲಚಂದ್ರ ಅವರು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದು, ಮತ್ತೆ ಇಂತಹ ದುರಂತ ಘಟನೆ ನಡೆಯದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಆಲೋಚಿಸುತ್ತಿದ್ದು, ಪ್ರತಿ ದಿನವೂ ಮೂರ್ನಾಲ್ಕು ವಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಇನ್ನು ಪ್ರತಿ ದಿನವೂ ಪ್ರವಾಸಿಗರು ಮತ್ತು ಭಕ್ತರಿಂದ ತುಂಬಿ ತುಳುಕುತ್ತಿದ್ದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರದೇಶಕ್ಕೂ ಬೆಂಕಿ ಬಿದ್ದು ಸಾವಿರಾರು ಎಕರೆ ಅರಣ್ಯ ಭಸ್ಮವಾದ ಹಿನ್ನೆಲೆಯಲ್ಲಿ ಭೇಟಿಕೊಡುವ ಜನರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ಒಟ್ಟಾರೆ ಬಂಡೀಪುರ ಅರಣ್ಯಕ್ಕೆ ಬೆಂಕಿ ತಗುಲಿದ ಬಳಿಕ ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದು, ಆದಾಯದಲ್ಲಿಯೂ ಇಳಿಕೆಯಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications