ಹಾಲಿ ಶಾಸಕರಿಗಿಲ್ಲ ಟಿಕೆಟ್, ಕೊಳ್ಳೇಗಾಲದ ‘ಕೈ’ನಲ್ಲಿ ಭಿನ್ನಮತ ಶುರು
ಚಾಮರಾಜನಗರ, ಏಪ್ರಿಲ್ 16: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕೆಲವೇ ದಿನಗಳಲ್ಲಿ ಎ.ಆರ್.ಕೃಷ್ಣಮೂರ್ತಿಯವರಿಗೆ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿರುವುದು ಕೈಪಾಳಯದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಇದುವರೆಗೆ ಪಕ್ಷಕ್ಕಾಗಿ ದುಡಿದ ಮತ್ತು ಆಕಾಂಕ್ಷಿಯೂ ಆಗಿದ್ದ ಕಿನಕಹಳ್ಳಿ ರಾಚಯ್ಯ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದು ಬರೀ ಸೋಲನ್ನೇ ಅನುಭವಿಸಿ ಗೆಲುವಿಗಾಗಿ ಕಾಂಗ್ರೆಸ್ಗೆ ಬಂದು ಟಿಕೆಟ್ ಪಡೆದಿರುವ ಎ.ಆರ್.ಕೃಷ್ಣಮೂರ್ತಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಎ.ಆರ್. ಕೃಷ್ಣಮೂರ್ತಿಯನ್ನು ಬೆಂಬಲಿಸುತ್ತಾರಾ ಕಾಂಗ್ರೆಸ್ಸಿಗರು?
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್.ಜಯಣ್ಣಗೆ ಜನರ ವಿಶ್ವಾಸವಿಲ್ಲ ಎಂಬ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಹಾಗೂ ಅನಾರೋಗ್ಯ ನೆಪವೊಡ್ಡಿ ಅವರಿಗೆ ಟಿಕೆಟ್ ನೀಡಲು ಹಿಂದೇಟು ಹಾಕಲಾಗಿದೆಯಂತೆ. ಉಳಿದಂತೆ ಮಾಜಿ ಶಾಸಕ ಎಸ್.ಬಾಲರಾಜು ಹಾಗೂ ಲೋಕಸಭೆಯ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಬಂಧಿ ಡಿ.ಎನ್.ನಟರಾಜು ಅವರಿಗೂ ಟಿಕೆಟ್ ನೀಡಿಲ್ಲ.
12 ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ರಣತಂತ್ರ ಹೂಡಿದ ಕಾಂಗ್ರೆಸ್
ನಿನ್ನೆ ಮೊನ್ನೆ ಬಂದವರಿಗೆ ಟಿಕೆಟೆ
ಇವರು ಎಲ್ಲರ ಬದಲು ನಿನ್ನೆ ಮೊನ್ನೆ ಬಂದ ಎ.ಆರ್. ಕೃಷ್ಣಮೂರ್ತಿಯವರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿಯೂ ಜಟಾಪಟಿ ಶುರುವಾಗಿದ್ದು, ಮಾಜಿ ಶಾಸಕ ಕೃಷ್ಣಮೂರ್ತಿ ಅವರನ್ನು ಸೋಲಿಸಬೇಕೆಂದು ಸಂದೇಶಗಳನ್ನು ರವಾನಿಸುತ್ತಿರುವುದು ಕಂಡು ಬರುತ್ತಿದೆ.
ಬಂಡಾಯ ಸ್ಪರ್ಧೆ
ಇದೆಲ್ಲದರ ನಡುವೆ ಮುಖಂಡ ಕಿನಕಹಳ್ಳಿ ರಾಚಯ್ಯ ಮಾತ್ರ ಬಂಡಾಯವಾಗಿ ಸ್ಪರ್ಧೆ ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆ ಕರೆದು ಕ್ಷೇತ್ರ ವ್ಯಾಪ್ತಿ ಪ್ರವಾಸ ಮಾಡಿ , ಕಾಂಗ್ರೆಸ್ ಟಿಕೆಟ್ ವಂಚಿತ ಆಕಾಂಕ್ಷಿಗಳ ಸಹಕಾರ ಪಡೆದು ಬಂಡಾಯವಾಗಿ ಸ್ಪರ್ಧೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಇವರಿಗೆ ಮತ್ತೊಬ್ಬ ಆಕಾಂಕ್ಷಿ ಡಿ.ಎನ್.ನಟರಾಜು ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.
ಏಕೆ ಬಂಡಾಯ ಅಭ್ಯರ್ಥಿ?
ತಾನೇಕೆ ಬಂಡಾಯವಾಗಿ ಸ್ಪರ್ಧಿಸಬೇಕು ಎಂಬ ಬಗ್ಗೆ ಕಂದಹಳ್ಳಿ ಮಹದೇಶ್ವರ ದೇವಾಲಯದ ಹಿಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆ ಕರೆದು ವಿವರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ಸೇರಿದಂತೆ ಸಾಮಾಜಿಕ ಕಾರ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕ್ಷೇತ್ರದ ಜನರಲ್ಲಿ ವಿಶ್ವಾಸಗಳಿಸಿದ್ದೇನೆ. ಆದರೆ ಅನ್ಯಪಕ್ಷದಿಂದ ಬಂದ ಎ.ಆರ್. ಕೃಷ್ಣಮೂರ್ತಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ವರಿಷ್ಠರು ಮಣೆಹಾಕಿ ಪಕ್ಷ ಸಂಘಟನೆ ಮಾಡದ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆ ಎಂದು ದೂರಿದ್ದಾರೆ.
ಎಸ್.ಜಯಣ್ಣಗೂ ಟಿಕೆಟ್ ಇಲ್ಲ
2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ನನಗೆ ಪಕ್ಷ 'ಬಿ ಫಾರಂ' ನೀಡಲಿಲ್ಲ. ಇದರಿಂದ ಎಸ್. ಜಯಣ್ಣರವರ ಪರವಾಗಿ ಕೆಲಸ ಮಾಡಿದೆ. ಆಗ 2018ರಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು.
ಆದರೆ ಇತ್ತೀಚಿಗೆ ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದವರಿಗೆ ನೀಡಿರುವುದು ಬೇಸರ ತಂದಿದೆ. ಆದ್ದರಿಂದ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸುವ ತೀರ್ಮಾನ ಕೈಗೊಂಡಿದ್ದೇಬೆ ಎಂದು ಅವರು ಹೇಳಿದ್ದಾರೆ.
ಅತ್ತ ಹಾಲಿ ಶಾಸಕ ಎಸ್. ಜಯಣ್ಣ ಅವರಿಗೂ ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ. ಬದಲು ಬಿ. ರಾಚಯ್ಯ ಪುತ್ರ ಈ ಹಿಂದಿನ ಸಂತೇಮರಹಳ್ಳಿಯ ಎರಡು ಬಾರಿಯ ಶಾಸಕ ಕೃಷ್ಣಮೂರ್ತಿಯವರಿಗೆ ಟಿಕೆಟ್ ನೀಡಲಾಗಿದೆ.
(ಚಿತ್ರ: ಎಸ್ ಜಯಣ್ಣ)