ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಶವ ಹೂಳುವುದೇ ಕಷ್ಟ!
ಚಾಮರಾಜನಗರ, ಸೆಪ್ಟೆಂಬರ್ 07 : ಗ್ರಾಮಕ್ಕೊಂದು ಸ್ಮಶಾನವಿಲ್ಲದ ಕಾರಣ ಗ್ರಾಮಸ್ಥರು ಶವವನ್ನು ತುಂಬಿ ಹರಿಯುವ ನದಿಯಲ್ಲೇ ಹೊತ್ತೊಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮಾಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮವು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಿಂದುಳಿದ ವರ್ಗಗಳು ಮತ್ತು ದಲಿತರೇ ವಾಸ ಮಾಡುವ ಈ ಗ್ರಾಮಕ್ಕೊಂದು ಸ್ಮಶಾನವಿಲ್ಲ. ಆದ್ದರಿಂದ, ಇಂದು ತುಂಬಿದ ನದಿಯಲ್ಲೇ ಹೆಣ ಹೊತ್ತುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಚಾಮರಾಜನಗರ: ದುಗ್ಗಹಟ್ಟಿಯಲ್ಲಿ ಶವಸಂಸ್ಕಾರ ಮಾಡೋದು ಬಲು ಕಷ್ಟ!
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸುವರ್ಣಾವತಿ ನದಿಯಲ್ಲಿ ಹೆಚ್ಚು ನೀರು ಹರಿಯುತ್ತಿದೆ. ಶುಕ್ರವಾರ ಶವವನ್ನು ಕುಟುಂಬಸ್ಥರು ಹರಿಯುವ ನದಿಯಲ್ಲೇ ಹೊತ್ತುಕೊಂಡು ಸುಮಾರು 3 ಕಿ.ಮೀ. ದೂರ ಸಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೋದಿ ಮಾದರಿ ಅನುಸರಿಸಿದ ಸಚಿವ, ಬಿಎಸ್ ಪಿ ರಾಜ್ಯಾಧ್ಯಕ್ಷ ಮಹೇಶ್!
ಗ್ರಾಮದಲ್ಲಿ ಹಲವಾರು ವರ್ಷಗಳಿಂದ ರುದ್ರಭೂಮಿಗಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇನ್ನು ಮಾಂಬಳ್ಳಿ ಗ್ರಾಮದವರೇ ಆದ ಜಯಣ್ಣರವರು ಎರಡು ಬಾರಿ ಶಾಸಕರಾಗಿದ್ದರೂ ಅವರಿಗೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ.
ಇದೀಗ ಕೊಳ್ಳೇಗಾಲ ಕ್ಷೇತ್ರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಆರಿಸಿ ಬಂದಿದ್ದು ಅವರ ಗಮನಕ್ಕೆ ಈ ವಿಚಾರ ಬಂದಿದೆಯೋ ಗೊತ್ತಿಲ್ಲ. ಆದರೆ, ಇದೀಗ ನದಿಯಲ್ಲಿ ಹೆಣಹೊತ್ತು ಸಾಗುತ್ತಿರುವ ದೃಶ್ಯಗಳು ವೈರಲ್ ಆಗಿದ್ದು ಇನ್ನು ಮುಂದೆಯಾದರೂ ಗ್ರಾಮಕ್ಕೊಂದು ಸ್ಮಶಾನವನ್ನು ಒದಗಿಸಿಕೊಟ್ಟು ನದಿಯಲ್ಲಿ ಹೆಣಹೊತ್ತು ಸಾಗುವ ಸಂಕಷ್ಟಕ್ಕೆ ಇತಿಶ್ರೀ ಹಾಡಬೇಕಾಗಿದೆ.