ಗೂಟದ ಕಾರು ನೆನಪಾಗಿದ್ದಕ್ಕೆ ಗೀತಾ ಚುನಾವಣೆಗೆ ನಿಂತಿದ್ದು: ಪ್ರತಾಪ್ ಸಿಂಹ
ಗುಂಡ್ಲುಪೇಟೆ, ಮಾರ್ಚ್ 25: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಶನಿವಾರ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬನ್ನಿತಾಳಪುರ ಗ್ರಾಮಕ್ಕೆ ಬಿಜೆಪಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಪ್ರತಾಪ್ ಸಿಂಹ, ಮಾಧ್ಯಮಗಳೊಂದಿಗೆ ಮತನಾಡುವಾಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.

ಮಾತಿನ ಲಹರಿಯಲ್ಲಿ ''ಯಾವುದೇ ರಾಜಕಾರಣಿ ಸಚಿವರಾಗಿದ್ದಾಗ ಅವರ ಪತ್ನಿಯರು ಸೌಲಭ್ಯಯುತ ಜೀವನ ನಡೆಸುತ್ತಾರೆ. ಹಾಗೆಯೇ ಗೀತಾ ಮಹದೇವ ಪ್ರಸಾದ್ ಅವರಿಗೆ ಅವರ ಪತಿ (ಮಾಜಿ ಸಚಿವ ಮಹದೇವ ಪ್ರಸಾದ್) ಮರಣ ಹೊಂದಿದ ಮರುದಿನ ಗೂಟದ ಕಾರು ನೆನಪಾಗಿದೆ. ಮಹದೇವ ಪ್ರಸಾದ್ ಅವರ ಸಮಾಧಿಗೆ ಹಾಲು ತುಪ್ಪ ಹಾಕುವಾಗಲೂ ಅವರಿಗೆ ಗೂಟದ ಕಾರು ನೆನಪಾಗಿದೆ. ಗೂಟದ ಕಾರು ಕೈ ತಪ್ಪುವುದನ್ನು ತಪ್ಪಿಸಲು ಚುನಾವಣೆಗೆ ನಿಲ್ಲುತ್ತಿರುವುದಾಗಿ ಅವರು ಹೇಳಿದ್ದಾರೆ'' ಎಂದು ಪ್ರತಾಪ್ ಸಿಂಹ್ ವಾಗ್ದಾಳಿ ನಡೆಸಿದರು.
ನಂತರ, ಮಾತು ಮುಂದುವರಿಸಿ, ''ಗೀತಾ ಮಹದೇವ ಪ್ರಸಾದ್ ಅವರಿಗೆ ಮತ ಹಾಕಿದರೆ ಕ್ಷೇತ್ರದ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟಂತೆ'' ಎಂದೂ ಟೀಕಿಸಿದರು.
23 ವರ್ಷಗಳಿಂದ ಗುಂಡ್ಲುಪೇಟೆ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ಇನ್ನೆಷ್ಟು ದಿನ ಬೇಕು ಎಂದು ಅವರು ಪ್ರಶ್ನಿಸಿದರು.












Click it and Unblock the Notifications