MUDA Scam: ಐವಾನ್ ಡಿಸೋಜಾ ಫೋಟೋ ತುಳಿದು ಬಿಜೆಪಿ ಮುಖಂಡರು, ಕಾರ್ಯಕರ್ತರ ಆಕ್ರೋಶ-ಕಾರಣ ಏನು?
ಚಾಮರಾಜನಗರ, ಆಗಸ್ಟ್, 22: ಇದೀಗ ಮೂಡಾ ಹಗರಣ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಅಲ್ಲದೆ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ ಘಟನೆ ಇಂದು (ಆಗಸ್ಟ್ 22) ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಬಿಜೆಪಿ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಧರಣಿ ಬಳಿಕ ಭುವನೇಶ್ವರಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಐವಾನ್ ಡಿಸೋಜಾ ಫೋಟೋ ತುಳಿದು ಆಕ್ರೋಶ ಹೊರಹಾಕಿದರು. ರಾಜ್ಯಪಾಲರ ಭವನಕ್ಕೆ ಬಾಂಗ್ಲಾದೇಶ ಮಾದರಿ ದಾಳಿ ಆಗಲಿದೆ ಎಂದು ಹೇಳಿಕೆ ಕೊಟ್ಟಿದ್ದಕ್ಕೆ ಡಿಸೋಜಾ ಭಾವಚಿತ್ರವನ್ನು ತುಳಿದು ಬಿಜೆಪಿ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು.
ಪೊಲೀಸರ ವಿರುದ್ಧವೂ ಕಿಡಿ: ಐವಾನ್ ಡಿಸೋಜಾ ಫೋಟೋ ತುಳಿದು ಪ್ರತಿಭಟಿಸುತ್ತಿದ್ದನ್ನು ಕಂಡ ಪೊಲೀಸರು ಫೋಟೋ ಕಿತ್ತುಕೊಳ್ಳಲು ಮುಂದಾದರು. ಈ ವೇಳೆ, ಪೊಲೀಸರ ಜೊತೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಪ್ರತಿಭಟನೆ ವೇಳೆ ರಾಜ್ಯಪಾಲರ ಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದಾಗ ಏನು ಮಾಡುತ್ತಿದ್ದಿರಿ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದೀರಾ?: ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೀರಾ ಎಂದು ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಇನ್ನು ಈ ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಇದರಿಂದ ಅರ್ಧ ತಾಸಿಗೂ ಹೆಚ್ಚು ವಾಹನ ಸವಾರರು ಪರದಾಡಿದ ಘಟನೆ ನಡೆಯಿತು.
ಪತ್ರವನ್ನ ತಿದ್ದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನ ಕೇಳಿರುವ ಮನವಿ ಪತ್ರದಲ್ಲಿರುವ ಪದಗಳಿಗೆ ವೈಟ್ನರ್ ಹಾಕಿ ದಾಖಲೆಗಳನ್ನು ತಿದ್ದಲಾಗಿದೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಬಿಂಬಿಸುವ ಕೆಲಸವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇಂದು (ಆಗಸ್ಟ್ 22) ಮೈಸೂರಿನಲ್ಲಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸಾಮಾಜಿಕ ಕಾರ್ಯಕರ್ತರೊಬ್ಬರು ಈ ಹಿಂದೆ ಪಾರ್ವತಮ್ಮ ಅವರು ಮುಡಾಗೆ ಸಲ್ಲಿಸಿದ್ದ ಅರ್ಜಿಯನ್ನು ಪ್ರದರ್ಶಿಸಿದ್ದಾರೆ. ಅಲ್ಲಿ ಎರಡು ಸಾಲಿನ ಅಕ್ಷರಗಳಿಗೆ ವೈಟ್ನರ್ ಹಾಕಿರುವುದನ್ನು ತೋರಿಸಿದ್ದಾರೆ. ದೇವನೂರು ಮೂರನೇ ಹಂತದಲ್ಲಿ ಅಥವಾ ಬೇರೆ ಕಡೆ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಿ ಎಂದು ಬರೆದಿದ್ದಾರೆ. ಇದು ತಪ್ಪಾಗಿದ್ದಕ್ಕೆ ವೈಟ್ನರ್ ಹಾಕಿದ್ದಾರೆ. ಇದನ್ನೇ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದರು.
ಆರ್ಟಿಐ ಕಾರ್ಯಕರ್ತರೆಂದು ಹೇಳಿಕೊಳ್ಳುವ ರೋಲ್ಕಾಲ್ ಗಿರಾಕಿಗಳು ಆಡುವ ಸುಳ್ಳನ್ನು ನಿಜವೆಂಬ ಭ್ರಮೆಯಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ವಿನಾಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.
ಶಾಸಕ ಶ್ರೀವತ್ಸ ಅವರು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೀಡಿರುವ ನೋಟಿಸ್ಗೆ ಪ್ರತಿಕ್ರಿಯಿಸಿ, ಮಾನನಷ್ಟ ಮೊಕದ್ದಮೆ ಬೇಕಾದರೂ ದಾಖಲಿಸಲಿ, ನನಗೇನು ಭಯವಿಲ್ಲ. ನಾವು ಕೂಡ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಅವರು ಬೈಯ್ಯುವುದನ್ನು ಕೇಳಿಕೊಂಡು ನಾವು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತದಲ್ಲಿ 63 ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ. 2007-22ರ ವರೆಗೆ ಸಿದ್ದರಾಮಯ್ಯ ಅವರ ವಿರುದ್ಧ ಇರುವ ಪ್ರಕರಣಗಳೆಂದರೆ ಮೇಕೆದಾಟು, ಪೇ ಸಿಎಂ, ರಸ್ತೆ ತಡೆ ಮುಂತಾದ ಪ್ರತಿಭಟನೆಗಳಿಗೆ ಸಂಬಂಧಿಸಿದವು. ಇದು ಪೊಲೀಸ್ ಮಹಾನಿರ್ದೇಶಕರು ನೀಡಿದ ದಾಖಲೆಗಳು ಎಂದರು.












Click it and Unblock the Notifications