ಕಾಮಗಾರಿಗಳಿಗೆ ಲಂಚ: ಪಂಚಾಯತಿ ಮುಂದೆ ಭಿಕ್ಷಾಪಾತ್ರೆ ಹಿಡಿದು ಕುಳಿತ ಗ್ರಾಪಂ ಸದಸ್ಯ
ಚಾಮರಾಜನಗರ, ಜನವರಿ 14: ಪ್ರತಿ ಕಾಮಗಾರಿಗೂ ಪಿಡಿಒ ಲಂಚ ಕೇಳುತ್ತಿದ್ದಾರೆಂದು ಆರೋಪಿಸಿ ಗ್ರಾಮ ಪಂಚಾಯತಿ ಸದಸ್ಯ ಭಿಕ್ಷಾಪಾತ್ರೆ ಹಿಡಿದು ಕುಳಿತ ಘಟನೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ ರೋಡ್ ಗ್ರಾಮದ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಕಾಮಗಾರಿ ನಡೆಸಲು ಪಿಡಿಒ ಲಂಚ ಕೇಳುತ್ತಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ ಅರುಳಸೆಲ್ವಂ ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.
ಮಾರ್ಟಳ್ಳಿ ಜನರಿಗೆ ಸಿಗದ ಮೂಲಭೂತ ಸೌಕರ್ಯ
ಹನೂರು ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಬಿರುದು ಪಡೆದುಕೊಂಡಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ನಾಲ್ ರೋಡ್ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಚರಂಡಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯೆ ಯೋಜನೆ ಮಾಡದೇ ಇರುವುದರಿಂದ ವಾರ್ಡ್ನಲ್ಲಿ ಸಮಸ್ಯೆಗಳು ತಲೆದೋರಿದೆ. ಪಿಡಿಒರವರಿಗೆ ಹಲವು ಬಾರಿ ಮನವಿ ಮಾಡಿದರೂ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಎಲ್ಲಾ ಕಾಮಗಾರಿಗಳಿಗೂ ಲಂಚ ಕೇಳುತ್ತಾರೆ, ನಾವು ಎಲ್ಲಿಂದ ಹಣ ಕೊಡಲು ಸಾಧ್ಯ ಎಂದು ಅರುಳಸೆಲ್ವಂ, ಬಾಯಿಗೆ ಬಟ್ಟೆ ಕಟ್ಟಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾಮದ ಅಭಿವೃದ್ಧಿಗಾಗಿ ಸದಸ್ಯನ ಭಿಕ್ಷಾಟನೆ
ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಭಿಕ್ಷಾ ಪಾತ್ರೆ ಎಂಬ ಬಾಕ್ಸ್ ಇಟ್ಟುಕೊಂಡು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ತನ್ನ ವಾರ್ಡ್ನಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿಸಲು ಲಂಚ ಕೊಡಬೇಕಾಗಿರುವುದರಿಂದ ಗ್ರಾಮಸ್ಥರಿಂದ ಭಿಕ್ಷೆ ಬೇಡುತ್ತಿದ್ದೇನೆ. ಭ್ರಷ್ಟಾಚಾರ ಎಂಬುದು ಸಕ್ಕರೆ ಕಾಯಿಲೆ ಇದ್ ದಹಾಗೆ ಅದು ನಮ್ಮನ್ನು ಮತ್ತು ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ. ಬೇರೆ ದೇಶಗಳಲ್ಲಿ ಕರ್ತವ್ಯ ನೀಡಲು ಲಂಚ ನೀಡಬೇಕು. ಆದರೆ ನಮ್ಮ ದೇಶದಲ್ಲಿ ಕರ್ತವ್ಯ ಮಾಡೋದಕ್ಕೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಯುವಕರೇ, ವಯಸ್ಕರೇ ಚಿಂತಿಸಿ ಎಂಬ ಭಿತ್ತಿ ಪತ್ರ ಬರೆದುಕೊಂಡು ಗ್ರಾಮಸ್ಥರಿಂದ ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ನಮ್ಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ 15ನೇ ಹಣಕಾಸು ಹಾಗೂ ಮಹಾತ್ಮ ಗಾಂಧಿ ನರೇಗಾ ಯೋಜನೆ ಯಡಿ ನಡೆದಿರುವ ಕಾಮಗಾರಿಗಳ ತನಿಖೆ ನಡೆಯಬೇಕು. ಕುಡಿಯುವ ನೀರಿನ ಪೈಪ್ ಹಾಗೂ ವಿದ್ಯುತ್ ಬಲ್ಪ್ ಗಳು ಕಡಿಮೆ ದರದಲ್ಲಿ ಸಿಕ್ಕರೂ ಸಹ ಅಧಿಕ ಬೆಲೆ ನೀಡಿ ಲಕ್ಷಾಂತರ ಹಣ ಗುಳುಂ ಮಾಡಿದ್ದಾರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತನಿಖೆ ನಡೆಸಬೇಕೆನ್ನುವುದು ಅರುಳ ಸೆಲ್ವಂ ಒತ್ತಾಯವಾಗಿದೆ.
ಅಭಿವೃದ್ಧಿ ಕಾರ್ಯಗಳಿಗೆ ನಾವು ಸಿದ್ಧ ಎಂದ ಪಿಡಿಓ
ಗ್ರಾಮ ಪಂಚಾಯತ್ ಸದಸ್ಯ ಅರುಳಸೆಲ್ವಂ ಆರೋಪದ ಬಗ್ಗೆ ಮಾರ್ಟಳ್ಳಿ ಗ್ರಾಪಂ ಪಿಡಿಒಗಂಗಾಧರ್ ಪ್ರತಿಕ್ರಿಯಿಸಿದ್ದು, "ನಾಲ್ ರೋಡ್ ವಾರ್ಡ್ ನ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ನಾವು ಸಿದ್ಧರಿದ್ದೇವೆ. ಅವರು ಕಾಮಗಾರಿಗಳನ್ನು ಪಟ್ಟಿ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಕ್ರಿಯೆ ಯೋಜನೆ ಮಾಡಿ ಅಭಿವೃದ್ಧಿಪಡಿಸುತ್ತೇವೆ, ಲಂಚ ಕೇಳುತ್ತೇನೆ ಎನ್ನುವುದು ಸತ್ಯಕ್ಕೆ ದೂರ" ಎಂದಿದ್ದಾರೆ.