ಕೆರೆಗಳು ತುಂಬಿವೆ... ಈಜಲು ಹೋಗುವವರೇ ಎಚ್ಚರ
ಚಾಮರಾಜನಗರ, ಡಿಸೆಂಬರ್ 26: ಈಜಲು ಕೆರೆಗಳಿಗೆ ತೆರಳುವ ವಿದ್ಯಾರ್ಥಿಗಳು ಈಜುವ ವೇಳೆ ಮುಳುಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಈಚೆಗೆ ಹೆಚ್ಚಾಗಿವೆ. ಇದಕ್ಕೆ ಕಾರಣವೂ ಇದೆ.
ಕಳೆದ ಹತ್ತಾರು ವರ್ಷಗಳಿಂದ ಮಳೆಯ ಕೊರತೆಯಿಂದ ಬರಡಾಗಿದ್ದ ತಾಲೂಕಿನ ಬಹುತೇಕ ಕೆರೆಗಳಲ್ಲಿ ರಸ್ತೆ ಕಾಮಗಾರಿ ನಡೆಸಲು ಮಣ್ಣು ಹಾಗೂ ಮರಳು ತೆಗೆಯಲಾಗಿದೆ. ಇದರಿಂದ ದೊಡ್ಡ ಪ್ರಮಾಣದ ಗುಂಡಿಗಳಾಗಿವೆ. ಕೆರೆಗಳಿಗೆ ಇತ್ತೀಚಿನ ದಿನಗಳಲ್ಲಿ ನದಿ ಮೂಲದಿಂದ ನೀರು ತುಂಬಿಸಲಾಗುತ್ತಿದ್ದು, ಕೆರೆಗಳು ತುಂಬಿರುವುದನ್ನು ನೋಡಲು ಹೆಚ್ಚಿನ ಜನರು ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಈಜಲು ಬಾರದ ವಿದ್ಯಾರ್ಥಿಗಳು ಹಾಗೂ ಯುವಕರು ನೀರಿಗಿಳಿಯಲು ಮುಂದಾಗುತ್ತಿರುವ ಪರಿಣಾಮ ಕೆರೆಯಲ್ಲಿ ಮುಳುಗಿ ಸಾವಿಗೀಡಾಗುತ್ತಿದ್ದಾರೆ.
ಸ್ನೇಹಿತರ ಜೊತೆ ಈಜಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ನೀರು ತುಂಬಿದ ಕೆರೆಯ ಏರಿಗಳು ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಇಲ್ಲವೆ ಸೂಚನಾ ಫಲಕ ಅಳವಡಿಸದಿರುವುದು ದುರಂತ ಹೆಚ್ಚಲು ಕಾರಣವಾಗಿವೆ. ತಮ್ಮಡಹಳ್ಳಿ ಹಾಗೂ ಹುತ್ತೂರು ಕೆರೆಗಳಲ್ಲಿ ಬೇರೆ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ನಿರಂತರ ನೀರು ತುಂಬಿಸಲಾಗುತ್ತಿದೆ. ಕೆಸರಿನಿಂದ ಕೂಡಿದ ಆಳವಾದ ಗುಂಡಿಗಳ ಅರಿವಿಲ್ಲದೆ ನೀರಿಗಿಳಿದವರು ಸಾವಿಗೀಡಾಗುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ನೀರು ತುಂಬಿದ ಕೆರೆಗೆ ಕಾವಲುಗಾರರ ನೇಮಕ, ಸೂಚನಾ ಫಲಕ ಅಳವಡಿಸಬೇಕು. ಜೊತೆಗೆ ಶಾಲಾ ಕಾಲೇಜುಗಳಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸುವ ಮೂಲಕ ಸರಣಿ ದುರಂತಗಳನ್ನು ತಪ್ಪಿಸಬೇಕಿದೆ.
ದಿನೇದಿನೇ ಹೆಚ್ಚುತ್ತಿದೆ ನೀರಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ
2018ರಲ್ಲಿ 6, 2019ರಲ್ಲಿ 6 ಪ್ರಕರಣಗಳು ದಾಖಲಾಗಿದ್ದು, ಒಟ್ಟು 18 ಜನರು ಮೃತರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಹುತ್ತೂರು ಕೆರೆಯೊಂದರಲ್ಲಿಯೇ ಸುಮಾರು 12ಕ್ಕೂ ಹೆಚ್ಚಿನ ಜನರು ಮುಳುಗಿ ಸಾವಿಗೀಡಾಗಿದ್ದಾರೆ. ಆದರೆ ಕೆರೆಯಲ್ಲಿ ಮುಳುಗಿದ ಒಬ್ಬರನ್ನೂ ಜೀವಂತವಾಗಿ ಉಳಿದಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ಯುವಕರು ತುಂಬಿರುವ ಕೆರೆಯತ್ತ ಈಜಲು ಹೋಗುವುದನ್ನು ತಪ್ಪಿಸಬೇಕಾಗಿದೆ.