ವನ್ಯ ಜೀವಿಗಳಿಂದ ಬೆಳೆ ಉಳಿಸಿಕೊಳ್ಳಲು ಶ್ವಾನಕ್ಕೆ ಹುಲಿ ರೂಪ ಕೊಟ್ಟ ರೈತ: ಜನ ಕಂಗಾಲು
ಚಾಮರಾಜನಗರ, ಜನವರಿ 11: ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮನುಷ್ಯನು ನಿಂತಿರುವಂತಹ ರೂಪದ ಮಾದರಿ (ಗೊಂಬೆ) ನಿರ್ಮಿಸುವುದು, ಪ್ರಾಣಿಗಳನ್ನು ಓಡಿಸುವ ರೀತಿಯಲ್ಲಿ ವಾಯ್ಸ್ ರೆಕಾರ್ಡ್ ಮೂಲಕ ಕೂಗುವುದು, ಜಮೀನಿನ ಬೇಲಿಯ ಸುತ್ತ ಪ್ಲಾಸ್ಟಿಕ್ ಹಾಗೂ ಇನ್ನಿತರೆ ಸಾಧನ ಸಲಕರಣೆಗಳಿಂದ ಶಬ್ಧ ಮಾಡುವುದನ್ನು ಸಾಮಾನ್ಯವಾಗಿರುತ್ತದೆ.
ಚಾಮರಾಜನಗರದ ಚಾಣಾಕ್ಷ ರೈತರೊಬ್ಬರು ಶ್ವಾನವೊಂದಕ್ಕೆ ಹುಲಿಯ ಬಣ್ಣವನ್ನು ಬಳಿಯುವ ಮಾರ್ಗ ಅನುಸರಿಸಿದ್ದು ಬೆಳೆಗಳನ್ನು ವನ್ಯಜೀವಿಗಳಿಂದ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ರೈತನ ಈ ಒಂದು ವಿಲಕ್ಷಣ ಉಪಾಯದಿಂದ ವನ್ಯಜೀವಿಗಳು ಹೆದರುತ್ತವೋ ಗೊತ್ತಿಲ್ಲ ಆದರೆ ಸಾರ್ವಜನಿಕರು ಭಯಭೀತರಾಗುವುದರ ಜೊತೆಗೆ ನಗೆಗಡಲಿನಲ್ಲಿ ತೇಲುವಂತ ಪ್ರಸಂಗ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಕಂಡು ಬಂದಿದೆ.
ಶ್ವಾನಕ್ಕೆ ಹುಲಿ ರೂಪದ ಬಣ್ಣ ಬಳಿದಿರುವುದರಿಂದ ಶ್ವಾನ ಸಂಚರಿಸುವ ಸಾರ್ವಜನಿಕರು ಹಾಗೂ ದಾರಿಹೋಕರು ಹುಲಿ ರೂಪದ ನಾಯಿಯನ್ನು ನೋಡಿ ಭಯ ಬೀಳುವುದರ ಜೊತೆಗೆ ವಿಚಲಿತರಾಗುತ್ತಿದ್ದಾರೆ. ಹುಲಿ..ಹುಲಿ.. ಎಂದು ಹೌಹಾರಿದ್ದಾರೆ. ಬಳಿಕ ಅದು ಶ್ವಾನವೆಂದು ತಿಳಿದು ನಿಟ್ಟುಸಿರು ಬಿಡುತ್ತಿದ್ದಾರೆ. ಇದು ಹುಲಿಯಲ್ಲ ನಾಯಿ ಎಂದು ತಿಳಿದು ನಕ್ಕಿದ್ದಾರೆ.
ರೈತ ಬೆಳೆ ಉಳಿಸಿಕೊಳ್ಳು ಈ ಉಪಾಯ ಮಾಡಿದ್ದು, ಶ್ವಾನದ ಪೋಟೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಡುಪ್ರಾಣಿಗಳಿಗಿಂತ ಮನುಷ್ಯರೇ ಕೆಲಕಾಲ ತಾನು ಹುಲಿ ನೋಡಿದೆ ಎಂದು ಭಯ ಬೀಳುವ ವಾತಾವರಣ ಸೃಷ್ಟಿಯಾಗಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಾಮೆಂಟ್ಗಳು ಹರಿದಾಡುತ್ತಿದೆ.
ವಿಪರ್ಯಾಸವೆಂದರೆ ಮನುಷ್ಯರ ಕೈಚಳಕದಿಂದ ಹುಲಿಯ ರೂಪವನ್ನು ಪಡೆದಿರುವ ಮುಗ್ಧ ಶ್ವಾನವು ತನ್ನ ನಡೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಎಂದಿನಂತೆ ಗ್ರಾಮದ ಸುತ್ತೆಲ್ಲಾ ಓಡಾಡುತ್ತಿದೆ. ಇದನ್ನು ಮೊದಲ ಬಾರಿ ನೋಡಿದ ಜನರು ಹೌಹಾರುತ್ತಿದ್ದಾರೆ.