ತಮಿಳುನಾಡಿನಲ್ಲಿ ಲಾರಿಗೆ ಬೆಂಕಿ: ಪಾರಾಗಿ ಬಂದ ಚಾಲಕ
ಹನೂರು, ಸೆಪ್ಟೆಂಬರ್ 13: ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ನಡೆಯುತ್ತಿದ್ದರೆ, ಪ್ರತೀಕಾರವಾಗಿ ತಮಿಳುನಾಡಿನಲ್ಲಿ ಕಿಡಿಗೇಡಿಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಕಿಡಿಗೇಡಿಗಳ ಕೈಗೆ ಸಿಕ್ಕಿದ ಚಾಮರಾಜನಗರ ಜಿಲ್ಲೆಯ ಲಾರಿ ಚಾಲಕರೊಬ್ಬರು ತಪ್ಪಿಸಿಕೊಂಡು ಬಂದಿದ್ದು, ಇದೀಗ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಳ್ಳೇಗಾಲ ತಾಲೂಕಿನ ರಾಮಾಪುರದ ಗೋಪಿಶೆಟ್ಟಿಯೂರು ಗ್ರಾಮದ ನಿವಾಸಿ ಲಾರಿ ಚಾಲಕ ಮಹೇಶ್ ತಮಿಳುನಾಡಿನ ಕಿಡಿಗೇಡಿಗಳಿಂದ ಪಾರಾಗಿ ಬಂದವರು.[ಕುಂದಾಪುರದ ಚಾಲಕನ ಮೇಲೆ ರಾಮೇಶ್ವರಂನಲ್ಲಿ ಹಲ್ಲೆ]
ತಮಿಳುನಾಡಿನಿಂದ ಕರ್ನಾಟಕಕ್ಕೆ ಲಾರಿಯಲ್ಲಿ ಬರುತ್ತಿದ್ದ ಮಹೇಶ್ ಅವರನ್ನು ತಮಿಳುನಾಡಿನ ಗಡಿ ಭಾಗದ ಹಂದಿಯೂರು ಚೆಕ್ ಪೋಸ್ಟ್ ಬಳಿ ಅಡ್ಡಗಟ್ಟಿದ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಭಾಗಶಃ ಸುಟ್ಟ ಲಾರಿಯೊಂದಿಗೆ ಪ್ರಾಣ ಉಳಿಸಿಕೊಂಡು ಊರು ಸೇರಿದ ನಂತರ ವಿಷಯ ತಿಳಿದ ಗ್ರಾಮಸ್ಥರು, ಕೊಳ್ಳೇಗಾಲ ಪಟ್ಟಣದ ಜನನಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಂಟದ ಕೆಳಭಾಗದಲ್ಲಿ ಸಂಪೂರ್ಣ ಸುಟ್ಟ ಗಾಯಗಳಾಗಿವೆ.