ಚಾಮರಾಜನಗರದಲ್ಲಿ "ಕಮಲ" ಅರಳಿಸಲು ಬಿಜೆಪಿ ಶತಪ್ರಯತ್ನ, ಕ್ಷೇತ್ರದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಅಚ್ಚರಿ ಹೆಸರು ಇಲ್ಲಿದೆ
ಚಾಮರಾಜನಗರ, ಏಪ್ರಿಲ್, 04: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಬರೋಬ್ಬರಿ 2 ದಶಕದ ಬಳಿಕ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೆಕೆಂದ ಪಣತೊಟ್ಟಿದೆ. ಹಾಗೆಯೇ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡಲು ಬಿಜೆಪಿ ಪ್ಲಾನ್ ರೂಪಿಸಿದೆ. ಹಾಗಾದರೆ "ಆ" ಅಚ್ಚರಿ ಹೆಸರು ಯಾವುದು ಅಂತೀರಾ ಇಲ್ಲಿದೆ ನೋಡಿ ವಿವರ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲೇಬೇಕೆಂದು ಪಣ ತೊಟ್ಟಿರುವ ಕಮಲಪಾಳೆಯ ಅಚ್ಚರಿ ಅಭ್ಯರ್ಥಿಯಾಗಿ ಸೋಮಣ್ಣ ಬರಬಹುದೆಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಟಿಕೆಟ್ ಸಂಬಂಧ ಕೋರ್ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಸಚಿವ ವಿ.ಸೋಮಣ್ಣ ಅವರ ಹೆಸರು ಜೋರಾಗಿ ಕೇಳಿಬಂದಿದೆ.

ಗಡಿಜಿಲ್ಲೆ ರಾಜಕೀಯದಲ್ಲಿ ಹೊಸ ಟ್ವಿಸ್ಟ್
ಜೊತೆಗೆ ಟಿಕೆಟ್ಗಾಗಿ ಓಡಾಡುತ್ತಿದ್ದ ಬಿ.ವೈ.ವಿಜಯೇಂದ್ರ ಅವರ ಆಪ್ತ ರುದ್ರೇಶ್ ಹೆಸರು ಪ್ರಸ್ತಾಪ ಆಗಿಲ್ಲದಿರುವುದು ಗಡಿಜಿಲ್ಲೆ ರಾಜಕೀಯದಲ್ಲಿ ಹೊಸ ಟ್ವಿಸ್ಟ್ ಹುಟ್ಟುಹಾಕಿದೆ. ವರಿಷ್ಠರ ಸಭೆಯಲ್ಲಿ ರುದ್ರೇಶ್ ಹೆಸರು ಪ್ರಸ್ತಾಪ ಆಗದಿರುವುದರಿಂದ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಮುನ್ನೆಲೆಗೆ ಬಂದ ಹೆಸರುಗಳು
ಇನ್ನು ಸಚಿವ ವಿ.ಸೋಮಣ್ಣನವರು ಕೂಡ ಸ್ಥಳೀಯರಲ್ಲ. ಆದರೆ ಟಿಕೆಟ್ ಘೋಷಣೆ ಬಳಿಕ ಅವರು ಎಲ್ಲರನ್ನೂ ಹೇಗೆ ಸಂಭಾಳಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ವಿ.ಸೋಮಣ್ಣ ಹೆಸರಿನ ಜೊತೆಗೆ ರಾಮಚಂದ್ರು, ನಾಗಶ್ರೀ ಪ್ರತಾಪ್, ನೂರೊಂದು ಶೆಟ್ಟಿ, ಅಮ್ಮನಪುರ ಮಲ್ಲೇಶ್, ಆರ್.ಸುಂದರ್ ಹಾಗೂ ಡಾ.ಎ.ಆರ್.ಬಾಬು ಅವರ ಹೆಸರುಗಳು ಕೂಡ ಪ್ರಸ್ತಾಪ ಆಗಿವೆ.

ಹೊಸ ಜಾತಿ ಸಮೀಕರಣದ ಮೂಲಕ ತನಗೇ ಟಿಕೆಟ್ ಕೊಡಬೇಕು ಎಂದು ಸಾಕಷ್ಟು ಕಸರತ್ತು ನಡೆಸುತ್ತಿರುವ ವಾಲ್ಮೀಕಿ ಸಮುದಾಯದ ರಾಮಚಂದ್ರು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಪ್ರಬಲ ನಾಯಕ ವಿ.ಸೋಮಣ್ಣ ಹಾಗೂ ಹೊಸ ಜಾತಿ ಸಮೀಕರಣ, ಸೌಮ್ಯ ಸ್ವಭಾವದ ರಾಮಚಂದ್ರು ಇವರಿಬ್ಬರಿಗೇ ಟಿಕೆಟ್ ಸಿಗಬಹುದು. ಇಲ್ಲವೇ, ಹಳೇ ಮೈಸೂರು ಟಾರ್ಗೆಟ್ ಮಾಡಿರುವ ಬಿಜೆಪಿ ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಕೊಟ್ಟು ಬೇರೆ ಕ್ಷೇತ್ರಗಳನ್ನೂ ಗೆಲ್ಲಿಸುವ ಗುರಿ ಹೊಂದಿರಬಹುದು ಎನ್ನಲಾಗಿದೆ.
ಸಾಧಕ-ಬಾಧಕಗಳ ಚರ್ಚೆ
ವಿ.ಸೋಮಣ್ಣನವರು ಬಹಿರಂಗವಾಗಿ ತಾನು ಆಕಾಂಕ್ಷಿ ಎಂದು ಹೇಳಿದ್ದರು. ಮತ್ತೊಂದೆಡೆ ಗಡಿಜಿಲ್ಲೆಯಲ್ಲಿ ಸ್ಪರ್ಧಿಸುವ ಇಂಗಿತ ಹೊರಹಾಕದಿದ್ದರೂ ತಮ್ಮ ಆಪ್ತ ಬಳಗದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸೋಮಣ್ಣ ಸ್ಪರ್ಧೆ ಮಾಡುವ ಸಾಧಕ-ಬಾಧಕಗಳ ಚರ್ಚೆ ಮಾಡುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಬಿಜೆಪಿ ಹೈಕಮಾಂಡ್ ಇದನ್ನು ಒಪ್ಪಿಕೊಂಡು ಚಾಮರಾಜನಗರದ ಅಭ್ಯರ್ಥಿಯಾಗಿ ವಿ.ಸೋಮಣ್ಣ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.
1999ರಲ್ಲಿ ಗುರುಸ್ವಾಮಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ಬಳಿಕ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಲು ಸಾಧ್ಯ ಆಗಿಲ್ಲ. ಇದೀಗ 23 ವರ್ಷದ ಬಳಿಕ ಕ್ಷೇತ್ರದಲ್ಲಿ ಕಮಲ ಅರಳಿಸಲು ಪ್ರಬಲ ನಾಯಕ ವಿ.ಸೋಮಣ್ಣ ಅವರನ್ನೇ ಕಣಕ್ಕಿಳಿಸಲು ಮುಂದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ರುದ್ರೇಶ್ ವಿರುದ್ಧ ವಿ.ಸೋಮಣ್ಣ ವಾಗ್ದಾಳಿ
ತಮ್ಮ ಊರಿನ ದೇಗುಲಕ್ಕೆ ರಥ ನಿರ್ಮಾಣ ಹಾಗೂ ಜೀರ್ಣೋದ್ಧಾರ ಮಾಡದಿದ್ದರೇ "ಗೋ ಬ್ಯಾಕ್ ಸೋಮಣ್ಣ ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದ ಚಾಮರಾಜನಗರ ತಾಲೂಕಿನ ಚನ್ನಪ್ಪನಪುರ, ಅಮಚವಾಡಿ ಗ್ರಾಮಸ್ಥರೊಂದಿಗೆ ಇತ್ತೀಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸಭೆ ನಡೆಸಿದರು. ಸಭೆ ಆರಂಭದಿಂದಲೇ ಸಚಿವ ವಿ.ಸೊಮಣ್ಣನವರು ವಿಜಯೇಂದ್ರ ಆಪ್ತ ಹಾಗೂ ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ರೇಶ್ ಹೆಸರೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಬೆಂಗಳೂರಿನಿಂದ ಬಂದವರು ಬೋರ್ಡ್ ತಂದು ಕೊಟ್ಟರೂ ನೀವು ಹಿಡಿದುಕೊಂಡಿದ್ದೀರಿ. ಆದರೆ ಸುಳ್ಳುಗಾರ ಸೋಮಣ್ಣ ಎಂದು ಹೇಳಲು ನಿಮಗೆ ಮನಸಾದರೂ ಹೇಗೆ ಬಂತು. ಕೆಲ ಕಳ್ ನನ್ನ ಮಕ್ಕಳು, ತರ್ಲೆಗಳು ಮಾತು ಕಟ್ಟಿಕೊಂಡು ನನಗೆ ಉಗಿದಿದ್ದೀರಿ," ಎಂದು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದರು.
ದೇವರ ಹೆಸರಿನಲ್ಲಿ ಚಿಲ್ಲರೆ ರಾಜಕೀಯ ಮಾಡಬಾರದು. ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರು ಹೆಚ್ಚು ದಿನ ಉಳಿಯುವುದಿಲ್ಲ. 45 ವರ್ಷಗಳ ರಾಜಕೀಯ ಜೀವನದಲ್ಲಿ ನನಗೆ ಇಷ್ಟು ಅವಮಾನ ಆಗಿರಲಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದ್ದರು.












Click it and Unblock the Notifications