Sudeep Road Show: ಚಾಮರಾಜನಗರದಲ್ಲಿ ವಿ.ಸೋಮಣ್ಣ ಪರ ನಟ ಕಿಚ್ಚ ಸುದೀಪ್ ರೋಡ್ ಶೋ: ಕಿಕ್ಕಿರಿದು ಸೇರಿದ ಅಭಿಮಾನಿಗಳು
ಚಾಮರಾಜನಗರ, ಮೇ, 05: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ರಾಜಕೀಯ ನಾಯಕರ ಪರ ಸ್ಯಾಂಡಲ್ವುಡ್ ಬಳಗವೇ ಪ್ರಚಾರಕ್ಕಿಳಿದಿದೆ. ಅದೆ ರೀತಿ ಕಿಚ್ಚ ಸುದೀಪ್ ಅವರು ಇಂದು ಸೋಮಣ್ಣ ಅವರ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ಅಭಿಮಾನಿಯೊಬ್ಬರು ಸುದೀಪ್ ಮುಟ್ಟಲು ಹೋಗಿ ಕೈತಪ್ಪಿ ಸೋಮಣ್ಣ ಅವರನ್ನು ಎಳೆದಿದ್ದಾರೆ. ಪರಿಣಾಮ ಸುದೀಪ್ ಜೊತೆ ರೋಡ್ ಶೋನಲ್ಲಿ ಭಾಗವಹಿಸಿದ್ದ ವಿ.ಸೋಮಣ್ಣ ಅವರು ವಾಹನದಿಂದ ಜಾರಿಬಿದ್ದ ಘಟನೆ ನಡೆದಿದೆ.
ಚಾಮರಾಜನಗರದ ಸಂತೇಮರಳ್ಳಿಯಲ್ಲಿ ರ್ಯಾಲಿ ನಡೆಸುವಾಗ ಅಭಿಮಾನಿಯೊಬ್ಬರು ಸುದೀಪ್ ಮುಟ್ಟಲು ಹೋಗಿ ಮಿಸ್ ಆಗಿ ಸೋಮಣ್ಣ ಅವರನ್ನು ಎಳೆದಿದ್ದು, ಪರಿಣಾಮ ವಿ.ಸೋಮಣ್ಣ ಬಿದ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಸುದೀಪ್ ನೋಡಲು ಅಭಿಮಾನಿಗಳು ಕಿಕ್ಕಿರಿದ ವೇಳೆ ನಡೆದಿದೆ.

ಅಲ್ಲದೆ ವಾಹನದಿಂದ ಜಾರಿ ಬೀಳುತ್ತಿದ್ದ ಸೋಮಣ್ಣ ಅವರನ್ನು ಕಿಚ್ಚ ಸುದೀಪ್ ಹಿಡಿದುಕೊಂಡು ಅವರನ್ನು ರಕ್ಷಣೆ ಮಾಡಿದ್ದಾರೆ. ನಂತರ ಸುದೀಪ್ ಅಭಿಮಾನಿಗಳನ್ನು ಹತೋಟಿಗೆ ತರಲು ಪೊಲೀಸರು ಕೂಡ ಹರಸಾಹಸಪಟ್ಟರು. ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರಿಂದ ಮುದೆ ತೆರಳು ಆಗದೇ ಸುದೀಪ್ ತಂಡ ನಿಂತಲೇ ನಿಂತಿಬಿಟ್ಟಿತು.
ಇಷ್ಟಕ್ಕೂ ಸುಮ್ಮನಿರದ ಅಭಿಮಾನಿಗಳು ಕ್ರೇನ್ ಮೂಲಕ ಸುದೀಪ್ಗೆ ಭಾರಿ ಗಾತ್ರದ ಹಾರಗಳನ್ನು ಹಾಕಿ, ಹೂ ಮಳೆ ಸುರಿಸಿ ಸ್ವಾಗತ ಮಾಡಿದರು. ಮತ್ತೊಂದೆಡೆ ಪೊಲೀಸರು ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರವನ್ನು ನಡೆಸಿದರು. ನಿರೀಕ್ಷೆಗೂ ಮೀರಿ ಸೇರಿದ ಜನಸ್ತೋಮವನ್ನು ಕಂಡು ಪೊಲೀಸರೇ ತಬ್ಬಿಬ್ಬಾಗಿದ್ದಾರೆ.
ಬೆಳ್ಳಂಬೆಳಗ್ಗೆಯೇ ರೋಡ್ ಶೋ ಆರಂಭ
ಚಾಮರಾಜನಗರ ಜಿಲ್ಲೆಯಲ್ಲಿ ಕಿಚ್ಚ ಸುದೀಪ್ ಅವರು ಬೆಳ್ಳಂಬೆಳಗ್ಗೆ ವಿ.ಸೋಮಣ್ಣ ಅವರ ಪರ ಪ್ರಚಾರ ಆರಂಭಿಸಿದ್ದರು. ಅಲ್ಲದೆ ಗುಂಡ್ಲುಪೇಟೆಯಲ್ಲಿಯೂ ರೋಡ್ ಶೋ ನಡೆಸಿ, ನಟ ಸುದೀಪ್ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಅಬ್ಬರದ ಪ್ರಚಾರ ಮಾಡಿದರು. ಪಟ್ಟಣದ ಮಡಹಳ್ಳಿ ವೃತ್ತದ ಬಳಿ ಆಗಮಿಸಿದ ಕಿಚ್ಚ ಸುದೀಪ್ ಅವರನ್ನು ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್ ಮತ್ತು ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಸ್ವಾಗತಿಸಿ ಬರಮಾಡಿಕೊಂಡರು.
ನಟ ಸುದೀಪ್ ಹೇಳಿದ್ದೇನು?
ಸುದೀಪ್ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣ ಸ್ವಾಮಿ ಅವರೊಟ್ಟಿಗೆ ತೆರೆದ ವಾಹನದಲ್ಲಿ ಪ್ರಚಾರ ವಾಹನ ಏರುತ್ತಿದ್ದಂತೆ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಸುದೀಪ್, "ಗೆದ್ದೇ ಗೆಲ್ಲೆವೆವು ನಾವು ಒಂದು ದಿನ- ಗೆಲ್ಲಲೇಬೇಕು ಒಳ್ಳೆತನ ಎಂದು ಹೇಳುವ ಮೂಲಕ ಸತತವಾಗಿ ಸೋತರೂ ಗೆದ್ದ ನಿರಂಜನಕುಮಾರ್ ಅವರನ್ನು ಈ ಬಾರಿಯೂ ಗೆಲ್ಲಿಸಿಕೊಡ ಬೇಕು" ಎಂದು ಮನವಿ ಮಾಡಿದರು.
ಅಲ್ಲದೆ ನಾನು ಚಿತ್ರರಂಗದಲ್ಲಿ ಇವತ್ತು ಸಹ ಬಣ್ಣ ಹಚ್ಚಲು ನಿಮ್ಮ ಈ ಪ್ರೀತಿ, ಅಭಿಮಾನವೇ ಕಾರಣ. ನಿಮ್ಮ ಈ ಋಣವನ್ನು ನಾನೆಂದಿಗೂ ತೀರಿಸಲು ಸಾಧ್ಯವಿಲ್ಲ. ನಿಮ್ಮ ಈ ಜಯಘೋಷಗಳನ್ನು ಸಹೋದರ ನಿರಂಜನ್ ಗೆಲುವಿನಲ್ಲಿ ಕೇಳಲು ಬಯಸುತ್ತೇನೆ ಎಂದರು.
ರೋಡ್ ಶೋ ವೇಳೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಕಿಚ್ಚ ಕಿಚ್ಚ ಎನ್ನುವ ಘೋಷಣೆ ಕೂಗಿ ಗಮನ ಸೆಳೆದರು. ಅಲ್ಲದೆ ಸುದೀಪ್ ಕೂಡ ವೀರ ಮದಕರಿ ಚಿತ್ರದ ಸಿನಿಮಾ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿಸಿದರು. ಮಡಹಳ್ಳಿ ವೃತ್ತದಿಂದ ಆರಂಭವಾದ ರೋಡ್ ಶೋ ಹಳೇ ಬಸ್ ನಿಲ್ದಾಣದಲ್ಲಿ ಅಂತ್ಯಗೊಂಡಿತು. ನಂತರ ವಾಹನದಿಂದ ನಟ ಸುದೀಪ್ ಕೆಳಗಿಳಿಯುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು.












Click it and Unblock the Notifications