ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಮಾರ್ಗ ಪರಿಶೀಲನೆ
ಚಾಮರಾಜನಗರ, ಸೆಪ್ಟೆಂಬರ್ 26: ಸೆಪ್ಟೆಂಬರ್ 30ರಿಂದ ರಾಜ್ಯದಲ್ಲಿ ಆರಂಭಗೊಳ್ಳುವ ಭಾರತ್ ಜೋಡೋ ಯಾತ್ರೆಯ ಮಾರ್ಗವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ ಪರಿಶೀಲನೆ ನಡೆಸಿದರು. ಯಾತ್ರೆ ಆರಂಭಗೊಳ್ಳುವ ಗುಂಡ್ಲುಪೇಟೆಯ ಅಂಬೇಡ್ಕರ್ ಭವನ ರಸ್ತೆ, ನಂಜನಗೂಡು ರಸ್ತೆ ಮತ್ತು ಬದನವಾಳು ಖಾದಿ ಕೇಂದ್ರಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಆಪ್ತ ಸಹಾಯಕರ ತಂಡವೂ ಭೇಟಿ ನೀಡಿ ಮಾರ್ಗ ಪರಿಶೀಲನೆ ನಡೆಸಿದ್ದು, ಕಾಂಗ್ರೆಸ್ ನಾಯಕರ 4 ಸುತ್ತಿನ ಪರಿಶೀಲನೆ ಇದಾಗಿದೆ.
ಬಿಜೆಪಿ ವಿರುದ್ಧ ಗುಡುಗಿದ ಡಿ.ಕೆ.ಶಿವಕುಮಾರ್
ಮಾರ್ಗ ಪರಿಶೀಲನೆ ಬಳಿಕ ಡಿ.ಕೆ.ಶಿವಕುಮಾರ್ ಮಾತನಾಡಿ, ತಮಿಳುನಾಡಿನ ಗೂಡ್ಲೂರಿನಿಂದ ಕರ್ನಾಟಕಕ್ಕೆ ರಾಹುಲ್ ಗಾಂಧಿ ಬರಲಿದ್ದಾರೆ. ಗುಂಡ್ಲುಪೇಟೆಯಲ್ಲಿ 9 ಗಂಟೆಗೆ ಸಾರ್ವಜನಿಕ ಸಭೆ ನಡೆಸಿ ಪಾದಯಾತ್ರೆ ನಡೆಸಲಿದ್ದು, ಅಂದು ರಾಜ್ಯದ ಎಲ್ಲಾ ನಾಯಕರು ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕಲಿದ್ದಾರೆ. ಆಕ್ಸಿಜನ್ ದುರಂತದ ಸಂತ್ರಸ್ತರೊಟ್ಟಿಗೆ ಸಂವಾದ ನಡೆಸಲು ಯೋಜಿಸಲಾಗುತ್ತಿದ್ದ, ಜನರು ಪಾದಯಾತ್ರೆ ನಡೆಸಲು ಉತ್ಸುಕರಾಗಿದ್ದಾರೆ ಎಂದರು.
ರಾಹುಲ್ ಗಾಂಧಿ ಕಬ್ಬಿಣದ ಸೂಜಿ ಇದ್ದಂತೆ. ಅವರು ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದು, ಬಿಜೆಪಿಗರು ಕತ್ತರಿ ಇದ್ದಂತೆ ಎಲ್ಲರನ್ನು ಇಬ್ಭಾಗ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ 21 ದಿನಗಳ ಕಾಲ ಪಾದಯಾತ್ರೆ
ಕೇರಳದ ವೈನಾಡು ಮೂಲಕ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪುವ ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಲೋ ಮೀಟರ್ ಸಾಗಲಿದೆ. ಇದಕ್ಕಾಗಿ ಕರ್ನಾಟಕ ಕಾಂಗ್ರೆಸ್ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದು, ಕೆಲ ಸಮಿತಿಗಳನ್ನು ರಚಿಸಿದೆ. ವಿವಿಧ ಸಮಿತಿಗಳಿಗೆ ಶಾಸಕರು, ಮಾಜಿ ಶಾಸಕರನ್ನು ನೇಮಿಸಲಾಗಿದೆ. ಇದೀಗ ವಿಧಾನಪರಿಷತ್ ಸದಸ್ಯರಿಗೂ ಕೆಲ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸೂಚನೆ ಮೇರೆಗೆ ಡಿ.ಕೆ. ಶಿವಕುಮಾರ್ ಅವರು 21 ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಿಗೆ ಯಾತ್ರೆಯ ಒಂದೊಂದು ದಿನದ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.

ಪಾದಯಾತ್ರೆ ಸಾಗುವ ಮಾರ್ಗಗಳು
21 ವಿಧಾನ ಪರಿಷತ್ ಸದಸ್ಯರಿಗೆ 21 ದಿನಗಳ ಯಾತ್ರೆಯ ಒಂದೊಂದು ದಿನದ ಜವಾಬ್ದಾರಿ ನೀಡಲಾಗಿದೆ. ಜನರ ಸೇರಿಸುವಿಕೆ, ವಾಹನ ವ್ಯವಸ್ಥೆ, ಜಾಹೀರಾತು ವ್ಯವಸ್ಥೆ ಸೇರಿದಂತೆ ಉಸ್ತುವಾರಿ ನೋಡಕೊಳ್ಳುವ ಜವಾಬ್ದಾರಿ ನೋಡಿಕೊಳ್ಳಬೇಕಿದೆ. ರಾಜ್ಯದಲ್ಲಿ ಮೂರು ಹಂತಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚರಿಸಲಿದೆ. ಒಟ್ಟು 7 ಲೋಕಸಭಾ ಕ್ಷೇತ್ರಗಳು, 20 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ನಡೆಸಲಿದೆ. ಮೊದಲ ಹಂತದ ರೂಟ್ ಮ್ಯಾಪ್ ತಮಿಳುನಾಡು ರಾಜ್ಯದಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶ ಮಾಡಲಿದೆ. ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚಾರ ಮಾಡಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶ ಮಾಡಲಾಗುತ್ತದೆ.
ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ, ನಂತರ ಇಲ್ಲಿಂದ ಚಿಕ್ಕನಾಯಕನಹಳ್ಳಿ- ಹುಳಿಯಾರ್ ಮೂಲಕ ಚಿತ್ರದುರ್ಗ, ಹಿರಿಯೂರುಗೆ ಪಾದಯಾತ್ರೆ ಸಾಗಲಿದೆ. ಹಿರಿಯೂರಿನಿಂದ ಚಳ್ಳಕೇರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ಆಂಧ್ರ ಪ್ರದೇಶವನ್ನು ಪಾದಯಾತ್ರೆ ಪ್ರವೇಶಿಸಲಿದೆ. ಎರಡನೇ ಹಂತದ ರೂಟ್ ಮ್ಯಾಪ್ ಹೀರೆಹಾಳ್ನಿಂದ ಓಬಾಳಪುರ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಲಾಗುತ್ತದೆ. ಹಲಕುಂಡಿ, ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಆರಂಭಗೊಂಡು, ಅಲ್ಲಿಂದ ಅಲುರ್ ಮೂಲಕ ಆಂಧ್ರ ಪ್ರವೇಶ ಮಾಡಲಿದೆ.
ಇನ್ನು ಮೂರನೇ ಹಂತದ ರೂಟ್ ಮ್ಯಾಪ್ ಮಾಧವರಂ ಮೂಲಕ ರಾಯಚೂರಿನ ಗಿಲ್ಲೆಸೂಗೂರು ಮೂಲಕ ಪಾದಯಾತ್ರೆ ತಂಡ ಪ್ರವೇಶ ಮಾಡಲಿದೆ. ಗಿಲ್ಲೆಸೂಗೂರುನಿಂದ ಯರೇಗಾರಕ್ಕೆ ಪಾದಯಾತ್ರೆ ಸಂಚರಿಸಲಿದೆ. ಯರೇಗಾರ ಮೂಲಕ ರಾಯಚೂರು, ರಾಯಚೂರಿನಿಂದ ದೇವಸೂಗೂರುಗೆ ಭಾರತ್ ಯಾತ್ರೆ ತೆರಳಲಿದೆ. ನಂತರ ದೇವಸೂಗೂರಿನಿಂದ ವಿಕಾರಬಾದ್ ಮೂಲಕ ತೆಲಂಗಾಣಕ್ಕೆ ಪ್ರವೇಶ ಮಾಡಲಿದೆ.












Click it and Unblock the Notifications