ಬಂಡೀಪುರದಲ್ಲೀಗ ಸೂತಕದ ಛಾಯೆ, ಮಳೆಗಾಗಿ ಗೋಪಾಲಸ್ವಾಮಿಗೆ ಮೊರೆ

ಚಾಮರಾಜನಗರ, ಫೆಬ್ರವರಿ 28: ಸದಾ ಹಸಿರಿನಿಂದ ಕಂಗೊಳಿಸುತ್ತಾ ನಿಸರ್ಗ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಾ ಹುಲಿ, ಆನೆ, ಜಿಂಕೆಗಳು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ್ದ ಬಂಡೀಪುರದ ಅರಣ್ಯದಲ್ಲೀಗ ಸೂತಕದ ಛಾಯೆ ಆವರಿಸಿದೆ. ಮತ್ತೊಂದೆಡೆ ಮಳೆಗಾಗಿ ಹಿಮವದ್ ಗೋಪಾಲಸ್ವಾಮಿ ದೇಗುಲದಲ್ಲಿ ಅರ್ಚಕರು ಪಾರ್ಥಿಸಿ ಪೂಜೆಸಲ್ಲಿಸುತ್ತಿದ್ದಾರೆ.

ಎಲ್ಲಿ ನೋಡಿದರಲ್ಲಿ ಸುಟ್ಟು ಬೂದಿಯಾದ ಕುರುಚಲು ಕಾಡು, ಮರ ಗಿಡಗಳು, ಬೆಂಕಿಯ ಕೆನ್ನಾಲಿಗೆಗೆ ಬೆಂದು ಬೋಳಾಗಿ ನಿಂತ ಹೆಮ್ಮರಗಳು, ಕರಕರಲಾದ ಹುಲ್ಲಿನಿಂದ ಕಂಗೊಳಿಸುವ ಖಾಲಿ ಪ್ರದೇಶಗಳು, ಬೆಂಕಿ ಆರದೆ ಹೊಗೆಯಾಡುತ್ತಿರುವ ಒಣ ಮರಗಳು, ಮೂಗಿಗೆ ಬಡಿಯುತ್ತಿರುವ ಸುಟ್ಟು ಬೂದಿಯ ವಾಸನೆ... ಇದು ಬಂಡೀಪುರದ ಈಗಿನ ದೃಶ್ಯಗಳು.

ಬಹುಶಃ ಈ ಹಿಂದೆ ಅರಣ್ಯದಲ್ಲಿ ಅಡ್ಡಾಡಿ ಹೋದವರು ಮತ್ತೆ ಬಂದರೆ ಇಲ್ಲಿನ ಕರಾಳ ದೃಶ್ಯಗಳನ್ನು ನೋಡಿ ಮಮ್ಮಲ ಮರಗದಿರಲಾರರು. ಬೆಂಕಿಯ ರಭಸಕ್ಕೆ ಕೆಲವು ಸಣ್ಣಪುಟ್ಟ ಪ್ರಾಣಿಗಳು, ಜೀವ ಜಂತುಗಳು ಸುಟ್ಟು ಬೂದಿಯಾಗಿ ಹೋಗಿದ್ದರೆ, ಅಳಿದುಳಿದ ಕೆಲವು ಪ್ರಾಣಿಗಳು ಓಡಿ ಹೋಗಿ ನೀರಿನಾಸರೆಯಿರುವ ಕೆರೆಕಟ್ಟೆಗಳಂಚಿನ ಪ್ರದೇಶಗಳಲ್ಲಿ ಆಸರೆ ಪಡೆದು ಕೊಂಡು ಬದುಕಿ ಉಳಿದಿವೆ. ಕೆಲವು ಜಿಂಕೆಗಳ ಹಿಂಡು ಕೆರೆಗಳ ಬದಿಯಲ್ಲಿ ಬೀಡು ಬಿಟ್ಟಿವೆ. ಆದರೆ ಅವುಗಳನ್ನಾವರಿಸಿದ ಭಯ ಮಾತ್ರ ಇನ್ನೂ ಮರೆಯಾಗಿಲ್ಲ.

 ಉದ್ದೇಶಪೂರ್ವಕವಾಗಿ ಬೆಂಕಿಯಿಡುತ್ತಿದ್ದಾರೆ

ಉದ್ದೇಶಪೂರ್ವಕವಾಗಿ ಬೆಂಕಿಯಿಡುತ್ತಿದ್ದಾರೆ

ಹಾಗೆನೋಡಿದರೆ ಬಂಡೀಪುರಕ್ಕೆ ಕಾಡ್ಗಿಚ್ಚು ತಗಲುವುದು ಹೊಸತೇನಲ್ಲ. ಈ ಹಿಂದೆಯೂ ಹಲವು ಬಾರಿ ಬಿದ್ದಿದೆ. ಆದರೆ ಒಂದೊಂದು ವಲಯದಲ್ಲಿ ಘಟನೆಗಳು ನಡೆಯುತ್ತಿತ್ತು. ತಕ್ಷಣ ಸಿಬ್ಬಂದಿಗಳು ಬೆಂಕಿಯನ್ನು ಆರಿಸುತ್ತಿದ್ದರು. ಒಂದಷ್ಟು ಮಟ್ಟಿಗೆ ಅರಣ್ಯಕ್ಕೆ ಹಾನಿಯಾಗುತ್ತಿತ್ತಾದರೂ ಮಳೆ ಬಿದ್ದ ಬಳಿಕ ಎಲ್ಲವೂ ಸರಿಹೋಗುತ್ತಿದ್ದವು. ಅದನ್ನು ನಾವು ನಿಸರ್ಗ ನಿಯಮ ಎಂದು ಸುಮ್ಮನಾಗಿ ಬಿಡುತ್ತಿದ್ದೆವು. ಆದರೆ ಕಳೆದ ಕೆಲವು ವರ್ಷಗಳಿಂದ ಬಂಡೀಪುರ ಅರಣ್ಯಕ್ಕೆ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿಯಿಡುವ ಚಾಳಿ ಆರಂಭಿಸಿದ್ದಾರೆ. ಆ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಗಮನ ಅತ್ತ ಕಡೆ ಸೆಳೆದು ಇತ್ತ ಅರಣ್ಯ ಉತ್ಪನ್ನಗಳ ಕಳ್ಳತನ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

 ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶ

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶ

ಇದು ಮಾತ್ರವಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲಿನ ದ್ವೇಷದಿಂದಲೂ ಅರಣ್ಯಕ್ಕೆ ಬೆಂಕಿಯಿಟ್ಟ ಘಟನೆಗಳು ನಡೆದಿವೆ. ಹೀಗಾಗಿ ಅರಣ್ಯ ಇಲಾಖೆ ಎಷ್ಟೇ ನಿಗಾ ವಹಿಸಿದರೂ ಉದ್ದೇಶಪೂರ್ವಕವಾಗಿಯೇ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿಯಿಡುತ್ತಿರುವುದರಿಂದ ಅರಣ್ಯ ಪ್ರತಿವರ್ಷವೂ ಬೆಂಕಿಯ ಕೆನ್ನಾಲಿಗೆಗಿ ಸಿಲುಕಿ ನಾಶವಾಗುತ್ತಲೇ ಇದೆ. ಈ ಬಾರಿಯೂ ಕೂಡ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಆಕಸ್ಮಿಕವಲ್ಲ. ಕಿಡಿಗೇಡಿಗಳ ಕೃತ್ಯ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ.

 ಸಾರ್ವಜನಿಕರು ಸಹಕಾರ ನೀಡಬೇಕಿದೆ

ಸಾರ್ವಜನಿಕರು ಸಹಕಾರ ನೀಡಬೇಕಿದೆ

ಬಂಡೀಪುರದ ಅರಣ್ಯದ ಸುತ್ತಲೂ ಕಳ್ಳರು, ಬೇಟೆಗಾರರು ಹೀಗೆ ಹಲವು ರೀತಿಯ ಕಿಡಿಗೇಡಿಗಳು ಹುಟ್ಟಿಕೊಂಡಿರುವುದರಿಂದಾಗಿ ಅರಣ್ಯ ಇಲಾಖೆ ಎಷ್ಟೇ ಎಚ್ಚರವಾಗಿದ್ದರೂ ಬೆಂಕಿಯಿಡುವ ಕೃತ್ಯಗಳು ನಡೆಯುತ್ತಲೇ ಇವೆ. ಇದನ್ನು ತಡೆಯಲು ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕಿದೆ. ಕಿಡಿಗೇಡಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಶಿಕ್ಷೆ ನೀಡಬೇಕಾಗಿದೆ. ಸದ್ಯ ಸುಮಾರು 4500 ಎಕರೆ ಪ್ರದೇಶ ಅಗ್ನಿಯ ನರ್ತನಕ್ಕೆ ಸುಟ್ಟು ಕರಕಲಾಗಿದೆ. ಇಲ್ಲಿನ ಮರಗಿಡಗಳು ಬೆಂಕಿಯ ಜ್ವಾಲೆಯಲ್ಲಿ ಬೆಂದಿರುವುದರಿಂದ ಇಡೀ ಪ್ರದೇಶ ಬೆಂಕಿಯ ಕಾವುನಲ್ಲಿ ಸುಡುತ್ತಿದೆ.

 ಅರಣ್ಯ ಪುನಶ್ವೇತನಕ್ಕಾಗಿ ಜಪ ತಪ ಪೂಜೆ

ಅರಣ್ಯ ಪುನಶ್ವೇತನಕ್ಕಾಗಿ ಜಪ ತಪ ಪೂಜೆ

ಇದೀಗ ಮಳೆ ಬಂದರೆ ಮಾತ್ರ ಅಳಿದುಳಿದ ಮರಗಿಡಗಳು ಬದುಕಲು ಸಾಧ್ಯ. ಒಂದು ವೇಳೆ ಮಳೆ ಬಂದು ವಾತಾವರಣ ತಂಪಾಗದೆ ಹೋದರೆ ಈಗಿರುವ ಮರಗಿಡಗಳು ಒಣಗಿ ಸಾಯುವ ಸಾಧ್ಯತೆಯಿದೆ. ಜತೆಗೆ ಅರಣ್ಯದಲ್ಲಿ ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರಿಗೂ ತೊಂದರೆಯಾದರೂ ಅಚ್ಚರಿ ಪಡುವಂತಿಲ್ಲ. ಹೀಗಾಗಿಯೇ ಮಳೆಗಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅರ್ಚಕರು ನಿತ್ಯವೂ ಮಳೆ ಹಾಗೂ ಅರಣ್ಯ ಪುನಶ್ವೇತನಕ್ಕಾಗಿ ಜಪ ತಪ ಪೂಜೆಗಳನ್ನು ಮಾಡುತ್ತಿದ್ದಾರೆ. ಆ ದೇವರು ಕಣ್ಣು ತೆರೆದು ಮಳೆಬಂದರೆ ಮಾತ್ರ ಬಂಡೀಪುರ ಅರಣ್ಯ ಮತ್ತು ಅಲ್ಲಿರುವ ಜೀವ ಸಂಕುಲಗಳು ಉಸಿರಾಡಲು ಸಾಧ್ಯವಾಗಲಿದೆ.

ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+