ಹನೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಮಳೆ: ಕೆರೆಯಂತಾದ ಪ್ರೌಢಶಾಲಾ ಆವರಣ
ಚಾಮರಾಜನಗರ, ಸೆಪ್ಟೆಂಬರ್.30: ಜಿಲ್ಲೆಯ ಹನೂರು ವ್ಯಾಪ್ತಿಯಲ್ಲಿ ಭಾರೀ ಗಾಳಿ-ಮಳೆ ಸುರಿದಿದ್ದು, ಪರಿಣಾಮ ಮನೆಗಳ ಗೋಡೆ ಕುಸಿದು, ಛಾವಣಿ ಹಾರಿಹೋಗಿರುವ ಘಟನೆ ಶನಿವಾರ ನಡೆದಿದೆ.
ಅಷ್ಟೇ ಅಲ್ಲ, ಹರದನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಮಳೆ ನೀರು ನಿಂತು ಕೆರೆಯಾಗಿ ಮಾರ್ಪಟ್ಟಿದ್ದರಿಂದ ಮಕ್ಕಳು ಶಾಲೆಗೆ ತೆರಳಲು ಪರದಾಡುವಂತಾಯಿತು. ಶಾಲಾ ಮೈದಾನದಲ್ಲಿ ಮಳೆಯ ನೀರು ತುಂಬಿದ್ದನ್ನು ಕಂಡ ಗ್ರಾಮಸ್ಥರು ಅಗ್ನಿಶಾಮಕ ದಳದವರನ್ನು ಕರೆಸಿ ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರ ಹಾಕಿಸಿದ ಬಳಿಕ ಶಾಲೆಗೆ ಮಕ್ಕಳು ತೆರಳಿದರು.
ದೊಡ್ಡಿಂದುವಾಡಿ ಗ್ರಾಮದಲ್ಲೂ ಸಹ ಮಳೆಯ ನೀರಿನಿಂದ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಿತ್ತು. ಇದರಿಂದ ರಸ್ತೆ ದಾಟಲು ಜನರು ಹರಸಾಹಸಪಡುವಂತಾಯಿತು.

ಬೆಳತ್ತೂರು ಗ್ರಾಮದ ನರಸಶೆಟ್ಟಿ, ಮಹದೇವ ಶೆಟ್ಟಿ, ನಂಜುಂಡಸ್ವಾಮಿ ಹಾಗೂ ಸಿದ್ದರಾಜು ಎಂಬುವವರಿಗೆ ಸೇರಿದ ಮನೆಯ ಗೋಡೆ ಮತ್ತು ಛಾವಣಿ ಕುಸಿದಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಆರ್.ನರೇಂದ್ರ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಸಂತ್ರಸ್ತರು ನಾವು ಬಡವರಾಗಿದ್ದು, ಘಟನೆಯಿಂದ ಸಂಕಷ್ಟಕ್ಕೊಳಗಾಗಿದ್ದೇವೆ. ಹೀಗಾಗಿ ಮನೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿದರು.

ಕೂಡಲೇ ಸ್ಥಳದಲ್ಲಿದ್ದ ಪಿಡಿಓ ಮಲ್ಲೇಶ್ ಅವರಿಗೆ ಈ ಬಗ್ಗೆ ವರದಿ ತಯಾರಿಸಿ ಕಂದಾಯ ಇಲಾಖೆಗೆ ಸಲ್ಲಿಸಿ ಸರ್ಕಾರದಿಂದ ಪರಿಹಾರ ಕೊಡಿಸಲು ಅಗತ್ಯ ಕ್ರಮ ವಹಿಸಬೇಕು. ಜತೆಗೆ ಗ್ರಾಪಂ ವತಿಯಿಂದ ಮನೆ ನಿರ್ಮಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.












Click it and Unblock the Notifications