ಗಣಿ ಲಾರಿಗೆ ಕಲ್ಲು ಹೊಡೆಯಿರಿ ಎಂದ ಗುಂಡ್ಲುಪೇಟೆ ಶಾಸಕರ ವಿರುದ್ಧ ಬಿಜೆಪಿ ಮಾಜಿ ಶಾಸಕ ಆಕ್ರೋಶ
ಚಾಮರಾಜನಗರ, ಆಗಸ್ಟ್, 03: ಗುಂಡ್ಲುಪೇಟೆಯಲ್ಲಿ ಗಣಿ ಲಾರಿಗಳಿಂದ ರಸ್ತೆ ಹಾಳಾಗುತ್ತಿದೆ ಎಂದು ಜನರು ಅಳಲು ತೋಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಗಣೇಶ್ ಪ್ರಸಾದ್ ಅವರು, ಗಣಿ ಲಾರಿಗೆ ಕಲ್ಲು ಹೊಡೆಯಿರಿ, ಬೆಂಡೆತ್ತಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಹಿರಿಕಾಟಿ ಗ್ರಾಮದ ಶಾಲೆಗೆ ಶಾಸಕರು ಭೇಟಿ ನೀಡಿದ್ದ ವೇಳೆ ಮಾರ್ಗ ಮಧ್ಯೆ ಗ್ರಾಮಸ್ಥರು ಗಣಿ ಲಾರಿಗಳಿಂದ ತೊಂದರೆಯಾಗುತ್ತಿದ್ದು, ರಸ್ತೆಗಳೆಲ್ಲಾ ಹಾಳಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ, ಶಾಸಕರು ಲಾರಿಗಳಿಗೆ ಕಲ್ಲು ಹೊಡೆಯಿರಿ, ಬೆಂಡೆತ್ತಿ, ಮುಂದೆ ಪೊಲೀಸರನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿರುವ ಪ್ರಚೋಧನಕಾರಿ ಹೇಳಿಕೆ ವೀಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆ ವಿವಾದಕ್ಕೆ ತಿರುಗುತ್ತಿದ್ದಂತೆ ಶಾಸಕ ಗಣೇಶ್ ಪ್ರಸಾದ್ ಸ್ಪಷ್ಟನೆ ಕೊಟ್ಟಿದ್ದು, ಸರ್ಕಾರದ ರಸ್ತೆಯನ್ನು ಅದ್ವಾನ ಮಾಡಿಟ್ಟಿದ್ದಾರೆ. ನಾನು ಬಾಯ್ತಪ್ಪಿನಿಂದ ಹೇಳಿದ್ದು, ಎಂದಿಗೂ ಪ್ರಚೋದನಕಾರಿ ಹೇಳಿಕೆ ಕೊಡುವುದಿಲ್ಲ. ನಾನು ಯಾರನ್ನೂ ಟಾರ್ಗೆಟ್ ಕೂಡ ಮಾಡಲ್ಲ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ವೈಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ. ಬಿಜೆಪಿಯವರು ಸೋತಿರುವ ಹತಾಶೆಯಿಂದ ವಿವಾದ ಸೃಷ್ಟಿಸುತ್ತಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ ಎಂದು ಗಣೇಶ್ ಪ್ರಸಾದ್ ಹೇಳಿದ್ದಾರೆ.
ಶಾಸಕರ ವಿರುದ್ಧ ಮಾಜಿ ಶಾಸಕ ಆಕ್ರೋಶ
ಇನ್ನು ಹಿರಿಕಾಟಿ ಗ್ರಾಮದ ಮೂಲಕ ಸಂಚರಿಸುವ ಟಿಪ್ಪರ್ ಲಾರಿಗಳಿಗೆ ಕಲ್ಲು ಹೊಡೆಯಿರಿ ಎಂದು ಗ್ರಾಮಸ್ಥರಿಗೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶಾಸಕ ಎಚ್.ಎಂ.ಗಣೇಶಪ್ರಸಾದ್ ಗುಂಡಾ ವರ್ತನೆ ತೋರಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಫೇಸ್ ಬುಕ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮಾಜಿ ಶಾಸಕ, ಎಚ್.ಎಂ.ಗಣೇಶಪ್ರಸಾದ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೀರ. ಇಂತಹ ಗೂಂಡಾ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದನ್ನು ಮೊದಲು ನಿಲ್ಲಿಸಿ. ಸಾರ್ವಜನಿಕರ ಮುಂದೆ ಮಾತನಾಡುವಾಗ ಸೌಜನ್ಯದಿಂದ ವರ್ತಿಸುವುದು ಯಾವುದೇ ಒಬ್ಬ ಜನಪ್ರತಿನಿಧಿಯ ಕರ್ತವ್ಯವಾಗಿರುತ್ತದೆ ಎಂದರು.
ಜನರಿಗೆ ತಿಳುವಳಿಕೆ ಹೇಳಬೇಕೇ ಹೊರತು ಕಲ್ಲು ಹೊಡೆಯಿರಿ ಎಂದು ಹೇಳಬಾರದು. ಸಾರ್ವಜನಿಕರ ಮುಂದೆ ಶಾಸಕರಾಗಿ ವರ್ತಿಸಬೇಕೇ ಹೊರತು ಗೂಂಡಾ ರೀತಿಯಲ್ಲಿ ವರ್ತಿಸಬಾರದು ಎಂದು ಬುದ್ಧಿವಾದ ಹೇಳಿದ್ದಾರೆ.












Click it and Unblock the Notifications