ಚಾಮರಾಜನಗರ: ನಿವೃತ್ತಗೊಂಡ ಶಿಕ್ಷಕರಿಗೆ ಹಳೇ ವಿದ್ಯಾರ್ಥಿಗಳಿಂದ ಚಿನ್ನದುಂಗುರ ಉಡುಗೊರೆ
ಚಾಮರಾಜನಗರ, ಆಗಸ್ಟ್, 31: ವೃತ್ತಿ ಆರಂಭಿಸಿದ ಶಾಲೆಯಲ್ಲಿ 27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಗೊಂಡ ಶಿಕ್ಷಕರಿಗೆ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ. ಹಾಗಾದರೆ ಆ ಊರು ಯಾವುದು ಹಾಗೂ ವಿದ್ಯಾರ್ಥಿಗಳು ಕೊಟ್ಟ ಉಡುಗೊಡೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಾಮರಾಜನಗರ ತಾಲ್ಲೂಕಿನ ಹಿರೇಬೇಗೂರು ಗ್ರಾಮದ ಶಾಲೆಯ ಬಿ.ಕಾಶಿಆರಾಧ್ಯ ಎಂಬ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಳೇ ವಿದ್ಯಾರ್ಥಿಗಳು ಚಿನ್ನದುಂಗುರ ತೊಡಿಸಿ ಅಭಿಮಾನ ಮೆರೆದಿದ್ದಾರೆ.

ಇನ್ನು, ಕಾಶಿ ಆರಾಧ್ಯ ಅವರಿಂದು ತಮ್ಮ ಶಾಲೆಯ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದ ಸಮವಸ್ತ್ರ ವಿತರಿಸಿದ್ದಾರೆ. ಜೊತೆಗೆ, ಬಿಸಿಯೂಟ ತಯಾರಿಸುವ 8 ಮಹಿಳಾ ಸಿಬ್ಬಂದಿಗೆ ಸೀರೆ ವಿತರಿಸಿ ಶಾಲೆಯೊಂದಿಗಿನ ತಮ್ಮ ಬಂಧವನ್ನು ತೆರೆದಿಟ್ಟರು. ಇನ್ನು ಕಾಶಿ ಆರಾಧ್ಯ ಅವರು ಚಾಮರಾಜನಗರ ತಾಲ್ಲೂಕಿನ ಕೆಬ್ಬೇಪುರ ಗ್ರಾಮದವರಾಗಿದ್ದು, ಕೆಬ್ಬೇಪುರದಿಂದ ಹಿರೇಬೇಗೂರಿಗೆ 27 ವರ್ಷ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಬರುತ್ತಿದ್ದರು.
ಇವರ ಬಳಿ ಸೈಕಲ್, ಸ್ಕೂಟರ್ ಯಾವುದು ಇಲ್ಲ ಹಾಗೂ ಬಸ್ಗಾಗಿ ಕೂಡ ಕಾಯುತ್ತಿರಲಿಲ್ಲ. ಹೀಗೆ ವಿದ್ಯಾರ್ಥಿಗಳ ಜೊತೆ ಗ್ರಾಮಸ್ಥರ ಮನ ಗೆದ್ದಿದ್ದ ಕಾಶಿ ಆರಾಧ್ಯರಿಗೆ ಜನರು ತುಂಬು ಪ್ರೀತಿ, ಭಾರದ ಮನಸ್ಸಿನಿಂದ ಬೀಳ್ಕೊಟ್ಟಿದ್ದಾರೆ.
ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಗಾಯಕನಿಗೆ ಅವಕಾಶ: ಅಮೇರಿಕಾದಲ್ಲಿ ಅನಿವಾಸಿ ಕನ್ನಡಿಗರು ಆಯೋಜನೆ ಮಾಡುವ ಪ್ರತಿಷ್ಟಿತ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಗಡಿಜಿಲ್ಲೆ ಚಾಮರಾಜನಗರದ ಗಾಯಕನಿಗೆ ಅವಕಾಶ ಸಿಕ್ಕಿದೆ. ಹಾಗಾದರೆ ಈ ಕಾರ್ಯಕ್ರಮ ಯಾವಾಗ ಆರಂಭವಾಗಲಿದೆ ಹಾಗೂ ಸ್ಥಳದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅಮೇರಿಕಾದ ರಿಚ್ಮಂಡ್ ನಗರದಲ್ಲಿ ಆಗಸ್ಟ್ 30ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಅಕ್ಕ ಕನ್ನಡ ಸಮ್ಮೇಳನಕ್ಕೆ ಚಾಮರಾಜನಗರದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರಿಗೆ ಅವಕಾಶ ಸಿಕ್ಕಿದೆ.
ಜಾನಪದವೇ ಸತ್ಯ-ಜಾನಪದವೇ ನಿತ್ಯ ಎಂಬ ಶೀರ್ಷಿಕೆಯಡಿ ಜಾನಪದ ಸಂಸ್ಕೃತಿಯನ್ನು ನರಸಿಂಹಮೂರ್ತಿ ಅನಾವರಣ ಮಾಡಲಿದ್ದಾರೆ. ಅಂದಹಾಗೆ ಮೂರನೇ ಬಾರಿ ನರಸಿಂಹಮೂರ್ತಿ ಅವರಿಗೆ ಅಕ್ಕ ಸಮ್ಮೇಳನದಲ್ಲಿ ಭಾಗಿ ಆಗುವ ಅವಕಾಶ ಸಿಕ್ಕಿದೆ.
ಸಮ್ಮೇಳನದಲ್ಲಿ ಚಾಮರಾಜನಗರ ಜಿಲ್ಲೆಯ ಪವಾಡ ಪುರುಷರಾದ ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ ಸ್ವಾಮಿ, ಮಂಟೆಸ್ವಾಮಿ ಗೀತೆ ಹಾಡಿ ಅಮೇರಿಕಾದ ಕನ್ನಡಿಗರನ್ನು ರಂಜಿಸಲಿದ್ದಾರೆ. ಇನ್ನು ಈ ಹಿಂದೆ 2010ರಲ್ಲಿ ನ್ಯೂಜೆರ್ಸಿಯಲ್ಲಿ, 2014ರಲ್ಲಿ ನಡೆದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ನರಸಿಂಹಮೂರ್ತಿ ಭಾಗಿಯಾಗಿದ್ದರು.












Click it and Unblock the Notifications