ಹರಿದು ಬಂದ ನೀರಿನಲ್ಲಿ ಕೊಚ್ಚಿ ಹೋದ ಎಮ್ಮೆಗಳು
ಚಾಮರಾಜನಗರ, ಸೆಪ್ಟೆಂಬರ್ 15: ಜಿಲ್ಲೆಯ ಬಹುತೇಕ ಕಡೆ ಮಳೆಯಾಗುತ್ತಿದ್ದು, ಮಳೆಯ ಅಬ್ಬರದಿಂದ ಗಡಿ ಅಂಚಿನಲ್ಲಿರುವ ಹೂಗ್ಯಂ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿ ಹರಿದ ಪರಿಣಾಮ ನಾಲ್ಕು ಎಮ್ಮೆಗಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಹಳಿಯೂರು ಬಳಿ ಸಂಭವಿಸಿದೆ.
ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಭಾರೀ ಮಳೆಯಾಗಿದ್ದರಿಂದ ಅಣೆಕಟ್ಟೆಯಿಂದ ನೀರು ಬಿಡಲಾಗುತ್ತಿದೆ. ಅಲ್ಲದೆ, ಕೊಳ್ಳೇಗಾಲ ತಾಲ್ಲೂಕಿನ ಹನೂರು ಸಮೀಪದ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗಿದ್ದರಿಂದ ತೊರೆಗಳು ತುಂಬಿ ಹರಿಯುತ್ತಿವೆ.

ಹೀಗಾಗಿ ಹಳಿಯೂರು ಹಳ್ಳ ದಾಟುತ್ತಿದ್ದ ನಾಲ್ಕು ಎಮ್ಮೆ ಹಾಗೂ ಕರುಗಳು ಸಾರ್ವಜನಿಕರ ಕಣ್ಣೆದುರೇ ಭಾರೀ ಪ್ರಮಾಣದಲ್ಲಿ ಹರಿದು ಬಂದ ನೀರಿನಲ್ಲಿ ಕೊಚ್ಚಿಹೋಗಿವೆ. ಆದರೆ ಅವುಗಳನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಇದನ್ನು ಕೆಲವರು ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗಿದೆ.
ಇನ್ನೊಂದೆಡೆ ಹೂಗ್ಯಂ ಅಣೆಕಟ್ಟು ಬಳಿ ಇರುವ ಹಲವಾರು ಗ್ರಾಮಗಳಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಕೃಷಿಕರು ಹರ್ಷಚಿತ್ತರಾಗಿದ್ದಾರೆ. ಕಳೆದ ವರ್ಷ ಈ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದರು. ಇದೀಗ ಮಳೆ ಆಗುತ್ತಿರುವುದರಿಂದ ಗ್ರಾಮಗಳ ಕೆರೆಯಲ್ಲಿ ನೀರು ಸಂಗ್ರಹವಾಗಿದೆ.












Click it and Unblock the Notifications