ಕೊಳ್ಳೇಗಾಲದಲ್ಲಿ ಚಿಪ್ಪು ಹಂದಿ ಮಾರಾಟಕ್ಕೆ ಯತ್ನ, ಓರ್ವ ಬಂಧನ
ಚಾಮರಾಜನಗರ, ನವೆಂಬರ್.22: ಅರಣ್ಯದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ವನ್ಯ ಪ್ರಾಣಿಗಳನ್ನು ಸೆರೆ ಹಿಡಿದು ಮಾರಾಟ ಮಾಡಿ ಹಣಗಳಿಸುವ ಜಾಲಗಳು ಕಾರ್ಯಪ್ರವೃತ್ತವಾಗಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ.
ಒಂದೆಡೆ ವನ್ಯಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಮಾಡಿ ಮಾರಾಟ ಮಾಡುವವರು ಒಂದೆಡೆಯಾದರೆ ಮತ್ತೊಂದೆಡೆ ಜೀವಂತವಾಗಿ ಹಿಡಿದು ಅವುಗಳನ್ನು ಮಾರಾಟ ಮಾಡುವವರು ಕಂಡು ಬರುತ್ತಿದ್ದಾರೆ. ಎರಡು ತಲೆ ಹಾವು, ಗೂಬೆ, ಆಮೆ ಮೊದಲಾದವುಗಳನ್ನು ಮಾರಾಟ ಮಾಡುವ ವೇಳೆ ಸಿಕ್ಕಿ ಬಿದ್ದ ಪ್ರಕರಣಗಳು ಇನ್ನು ಹಸಿರಿರುವಾಗಲೇ ಇದೀಗ ನಿರುಪದ್ರವಿ ಚಿಪ್ಪು ಹಂದಿಯನ್ನು ಸೆರೆ ಹಿಡಿದು ಮಾರಾಟ ಮಾಡುವ ಜಾಲವೂ ಪತ್ತೆಯಾಗಿದೆ.
ಕೆಲವರು ಮನೆಯಲ್ಲಿ ಆಮೆ, ಹಾವು, ಗೂಬೆ ಇಟ್ಟುಕೊಂಡರೆ ಅದೃಷ್ಠ ಒಲಿಯುತ್ತೆ ಎಂದು ಜನರನ್ನು ವಂಚಿಸುವ ಘಟನೆಗಳು ನಡೆಯುತ್ತಿವೆ. ಇಂತಹ ಸುದ್ದಿಗಳು ಜನರ ಬಾಯಿಂದ ಬಾಯಿಗೆ ಹರಡುವ ಕಾರಣ ಕೆಲವರು ತಾವು ಪ್ರಾಣಿಗಳನ್ನು ಹಿಡಿದು ಮಾರಾಟ ಮಾಡಿ ಹಣ ಪಡೆಯಲು ಮುಂದಾಗುತ್ತಿದ್ದು ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದಾರೆ.

ಇದೀಗ ಚಿಪ್ಪು ಹಂದಿಯನ್ನು ಹಿಡಿದು ಮಾರಾಟ ಮಾಡುವುದಕ್ಕೆ ಜನ ಕೈ ಹಾಕಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಯಾರಿಗೂ ತೊಂದರೆ ನೀಡದೆ ಗೆದ್ದಲು, ಹುಳ ಹುಪ್ಪಟೆಗಳನ್ನು ತಿಂದು ತನ್ನ ಪಾಡಿಗೆ ತಾನು ಬದುಕುವ ಈ ಪ್ರಾಣಿ ಅಳಿವಿನ ಅಂಚಿನಲ್ಲಿದ್ದು, ಅದನ್ನು ಹಿಡಿದು ತಿನ್ನಲು ಮುಂದಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಇದರ ಮಾಂಸದಲ್ಲಿ ಕಾಮೋತ್ತೇಜಕ ಅಂಶವಿದೆ ಎಂದು ಹೇಳುತ್ತಾ ಕೆಲವರು ಇದಕ್ಕೆ ಬೇಡಿಕೆಯನ್ನು ಸೃಷ್ಠಿ ಮಾಡುತ್ತಿದ್ದಾರೆ.
ಇದೀಗ ಹುಣಸೂರು ತಾಲೂಕಿನ ಆರ್.ಎಸ್. ದೊಡ್ಡಿಯ ರಂಗಸ್ವಾಮಿ ಎಂಬಾತ ಕಾಡಿನಲ್ಲಿ ಚಿಪ್ಪುಹಂದಿಯನ್ನು ಸೆರೆಹಿಡಿದು ಬಳಿಕ ಅದನ್ನು ತಮಿಳುನಾಡು ಕಡೆಗೆ ಸಾಗಿಸಿ ಹಣ ಪಡೆಯಲು ಮುಂದಾಗಿದ್ದನು. ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಮೈಸೂರಿನ ಅರಣ್ಯ ಸಂಚಾರಿ ದಳದ ಎಸಿಎಫ್ ಪೂವಯ್ಯ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಚಿಪ್ಪು ಹಂದಿಯನ್ನು ತನ್ನ ದ್ವಿಚಕ್ರ ವಾಹನದಲ್ಲಿರಿಸಿಕೊಂಡು ಚಾಮರಾಜನಗರದ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಬಂಧಿಸಿ ಅವನ ಬಳಿಯಿದ್ದ ಚಿಪ್ಪು ಹಂದಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ.












Click it and Unblock the Notifications