ಗುಂಡ್ಲುಪೇಟೆಯಲ್ಲಿ ಮನೆಯೊಳಗೇ ಅಡಗಿ ಕುಳಿತಿದ್ದ ಚಿರತೆ!
ಚಾಮರಾಜನಗರ, ಜೂನ್ 09: ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಮನೆಯೊಳಗೆ ನುಗ್ಗಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯಲ್ಲಿ ನಿನ್ನೆ ನಡೆದಿದ್ದು, ಆ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಬಂಡೀಪುರ ಅರಣ್ಯದಂಚಿನ ಗ್ರಾಮವಾದ ಬರಗಿ ಕಾಲೋನಿಯಲ್ಲಿದ್ದ ಸಾಕು ನಾಯಿಯನ್ನು ರಾತ್ರಿ ವೇಳೆ ಚಿರತೆಯೊಂದು ಅಟ್ಟಿಸಿಕೊಂಡು ಬಂದಿದೆ. ಇದರಿಂದ ಹೆದರಿದ ನಾಯಿ ಮಹದೇವು ಎಂಬುವರ ಮನೆ ಬಳಿ ತಪ್ಪಿಸಿಕೊಂಡಿದ್ದು ಈ ಸಂದರ್ಭ ದಾರಿ ತಪ್ಪಿದ ಚಿರತೆ ನೇರವಾಗಿ ಅವರ ಮನೆಗೆ ನುಗ್ಗಿದೆ.
ಕತ್ತಲೆಯಾಗಿದ್ದರಿಂದ ಚಿರತೆ ಮನೆಯೊಳಗೆ ನುಗ್ಗಿರುವುದು ಮನೆಯಲ್ಲಿದ್ದವರ ಅರಿವಿಗೆ ಬಂದಿರಲಿಲ್ಲ. ಇದ್ದಕ್ಕಿದ್ದಂತೆ ಮನೆಯಲ್ಲಿ ಶಬ್ದ ಬಂದಿದ್ದರಿಂದ ಮನೆಯವರು ಎಚ್ಚರಗೊಂಡಿದ್ದು, ಮನೆಯೊಳಗೆ ಯಾವುದೋ ಪ್ರಾಣಿ ಸೇರಿಕೊಂಡಿರುವ ಸೂಕ್ಷ್ಮ ಅರಿತ ಅವರು ಮನೆಯಿಂದ ಹೊರಗೆ ಓಡಿ ಬಳಿಕ ಬಾಗಿಲನ್ನು ಭದ್ರಗೊಳಿಸಿ ಬೆಳಕು ಹರಿಸಿ ನೋಡಿದಾಗ ಮನೆಯಲ್ಲಿ ಚಿರತೆ ಇರುವುದು ಅರಿವಿಗೆ ಬಂದಿದೆ.

ಆದರೆ ಮನೆಯೊಳಗೆ ನುಗ್ಗಿದ ಚಿರತೆಯೂ ಭಯಗೊಂಡು ಅಲ್ಮೆರಾ ಹಿಂಭಾಗ ಹೋಗಿ ಅಡಗಿ ಕುಳಿತಿತ್ತು. ತಕ್ಷಣ ಸುತ್ತಮುತ್ತಲಿನವರಿಗೆ ವಿಷಯ ತಿಳಿದು ಚಿರತೆ ಹೊರ ಹೋಗದಂತೆ ಮನೆಯ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬಂಡೀಪುರದ ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಲೋಕೇಶ್, ಪಶುವೈದ್ಯ ಡಾ. ನಾಗರಾಜು ಅವರು ಅರಣ್ಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.












Click it and Unblock the Notifications