ಕಾಡಾನೆಗೆ ಸಿಹಿ ಪೊಂಗಲ್ ತಿನ್ನಿಸಿದ ಐಎಎಸ್ ಅಧಿಕಾರಿ
ಚಾಮರಾಜನಗರ, ಜನವರಿ 15: ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯಕ್ಕೆ ಮೂರು ವರ್ಷಗಳ ಬಳಿಕ ಸಲಗವೊಂದು ಬಂದಿದೆ. ಈ ಹಿಂದೆಯೂ ದೇವಾಲಯದ ಸಿಬ್ಬಂದಿ ನೀಡುತ್ತಿದ್ದ ಪ್ರಸಾದದ ಆಸೆಗೆ ಕಾಡಾನೆ ಬರುತ್ತಿತ್ತು.
ಗುರುವಾರ ರಾಜ್ಯ ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ. ಬಿ. ಕಾವೇರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಆಗ ಕಾಡಾನೆ ಬಂದಿದೆ. ಈ ವೇಳೆ ಕಾವೇರಿ ಅವರು ಕಾಡಾನೆಗೆ ದೇವಾಲಯದ ಪ್ರಸಾದ ಸಿಹಿ ಪೊಂಗಲ್ ಮತ್ತು ಬೆಲ್ಲ ತಿನ್ನಿಸಿದರು.
ಆದರೆ, ಕಾವೇರಿ ಅವರು ಆನೆಗೆ ಆಹಾರ ನೀಡಿದ ಬಳಿಕ ಅವರ ವಿರುದ್ಧ ವನ್ಯಜೀವಿ ನಿಯಮಗಳ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ. ಜನರು ನೀಡುವ ಆಹಾರದ ಆಸೆಗೆ ಕಾಡಾನೆಯು ಅಲ್ಲಿಗೆ ಮತ್ತೆ ಮತ್ತೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ಆನೆಯ ಜೊತೆಗೆ ಇತರ ಆನೆಗಳು ಬರುವ ಸಾಧ್ಯತೆ ಇದೆ. ಇದರಿಂದಾಗಿ ಅರಣ್ಯದಂಚಿನ ಗ್ರಾಮಗಳಲ್ಲಿ ಆನೆಗಳು ಬೆಳೆನಾಶ ಮಾಡಬಹುದು. ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ವಾದ ಕೇಳಿ ಬಂದಿದೆ.
Recommended Video
ಐಎಎಸ್ ಅಧಿಕಾರಿ ವಿವೇಕಯುತವಾಗಿ ವರ್ತಿಸಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಆದರೆ, ಈ ಕಾಡಾನೆಗೆ ಈ ಹಿಂದೆಯೂ ದೇವಾಲಯದ ಅರ್ಚಕರು ಆಹಾರ ನೀಡಿ ಕಳಿಸಿದ್ದು, ಈಗ ಅಧಿಕಾರಿಯೊಬ್ಬರು ಆಹಾರ ನೀಡಿದ್ದು ಮಾತ್ರ ಚರ್ಚೆಗೆ ಗ್ರಾಸವಾಗಿದೆ.