‘ಅಕ್ಕಿರಾಜ’ ಎಂದೇ ಖ್ಯಾತಿ ಪಡೆದಿದ್ದ ಆನೆ ಸಾವು: ಕಾರಣ ತಿಳಿಯಿರಿ
ಚಾಮರಾಜನಗರ: ಕರ್ನಾಟಕ ಆನೆಗಳ ತಾಣವಾಗಿದ್ದು, ಇಲ್ಲಿ ಸಮೃದ್ಧವಾಗಿ ಆನೆಗಳು ವಾಸ ಮಾಡುತ್ತಿವೆ. ಹೀಗೆ ಇಡೀ ದೇಶಕ್ಕೆ ಆನೆಗಳ ವಿಚಾರದಲ್ಲಿ ಕೂಡ ಕರ್ನಾಟಕ ರಾಜ್ಯ ಹೆಮ್ಮೆ ಗರಿ ತಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಕ್ಕೆ ಆನೆಗಳು ಸಾಯುತ್ತಿರುವುದು ಆತಂಕ ಮೂಡಿಸಿದೆ. ಈಗ ಕೂಡ ಅಷ್ಟೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂತಹದ್ದೇ ಘಟನೆ ನಡೆದಿದೆ.
ಹೌದು, ಅಕ್ಕಿ ರಾಜ ಅಂತಾ ಖ್ಯಾತಿ ಪಡೆದಿದ್ದ, ದಸರಾಗೆ ಪಳಗಿಸುತ್ತಿದ್ದ ಆನೆ ಇಂದು ಹೃದಯ ಸ್ತಂಭನ & ಯಕೃತ್ ಅಂದ್ರೆ ಲಿವರ್ ಹಾನಿಯಿಂದ ಅಸುನೀಗಿದೆ. ಗಡಿನಾಡು ಅಂತಲೇ ಖ್ಯಾತಿ ಪಡೆದಿರುವ, ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ಈ ಘಟನೆ ನಡೆದಿದೆ. ಹಾಗಾದ್ರೆ ಆನೆಗೆ ಏನು ಸಮಸ್ಯೆ ಆಗಿತ್ತು? ಆರೋಗ್ಯದಲ್ಲಿ ಏರುಪೇರು ಆಗಿದ್ದು ಏಕೆ? ಜೀವ ಉಳಿಸಲು ವೈದ್ಯರು ಏನೆಲ್ಲಾ ಪ್ರಯತ್ನ ಮಾಡಿದ್ದರು? ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ತರಬೇತಿ ಪಡೆಯುತ್ತಿದ್ದ ಆನೆಗೆ ಗಂಡಾಂತರ?
ಕಳೆದ ಜೂ. 7 ರಂದು ಈ ಆನೆಯನ್ನು ಕುಂದಕೆರೆ ವಲಯದಲ್ಲಿ ಸೆರೆ ಹಿಡಿದು, ರಾಂಪುರ ಆನೆ ಶಿಬಿರಕ್ಕೆ ರವಾನೆ ಮಾಡಲಾಗಿತ್ತು. ಹಾಗೇ, ಆನೆ ನೋಡಲು ಸುಂದರವಾಗಿದ್ದ ಕಾರಣ ಮತ್ತು ಗಾತ್ರದಲ್ಲಿ ದೊಡ್ಡದಾಗಿದ್ದ ಕಾರಣ ದಸರಾಗೆ ಪಳಗಿಸಲಾಗುತ್ತಿತ್ತು. ಆನೆ ಸೆರೆ ಹಿಡಿದು, ಕ್ರಾಲ್ ನಲ್ಲಿ ಇಡಲಾಗಿತ್ತು. ಆ ಬಳಿಕ ಕಳೆದ ತಿಂಗಳ 21 ರಂದು ಈ ಆನೆಯನ್ನ ಹೊರಗೆ ಕರೆತಂದು ಉಳಿದ ಸಾಕಾನೆಗಳ ಜೊತೆ ತರಬೇತಿ ನೀಡಲಾಗುತ್ತಿತ್ತಂತೆ. ಇನ್ನು ಈ ಕುರಿತು ಅರಣ್ಯ ಇಲಾಖೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಹಾಗಾದರೆ ಆನೆ ಜೀವ ಕಳೆದುಕೊಂಡಿದ್ದು ಹೇಗೆ?
ಗಜರಾಜನ ಅಂತಿಮ ಕ್ಷಣಗಳು
ಅಕ್ಟೋಬರ್ 31 ರ ಮಧ್ಯಾಹ್ನ ಈ ಆನೆ ದಿಢೀರ್ ಕೆಳಕ್ಕೆ ಬಿದ್ದಿತ್ತು. ಆ ನಂತರ ಪಶು ವೈದ್ಯರು ಬಂದು ಪ್ರಥಮ ಚಿಕಿತ್ಸೆ ನೀಡಿದರೂ ಸ್ಪಂದಿಸದೇ ಅಸುನೀಗಿದೆ. ಹಾಗೇ ಇಂದು ಡಾ. ವಾಸಿಂ ಮಿರ್ಜಾ ಮತ್ತು ಡಾ. ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸಾಮಾನ್ಯ ಗಾತ್ರಕ್ಕಿಂತ ಹೃದಯದ ಗಾತ್ರ 3 ಪಟ್ಟು ದೊಡ್ಡದಾಗಿರುವುದು ಹಾಗೂ ಯಕೃತ್ಗೆ ಹಾನಿಯಾಗಿದ್ದು, ಈ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಅಂತಾ ಮಾಹಿತಿ ನೀಡಲಾಗಿದೆ.
ಹೆಚ್ಚಿನ ಪರೀಕ್ಷೆಗಾಗಿ ಆನೆ ದೇಹದ ಕೆಲ ಭಾಗವನ್ನು ಮೈಸೂರಿಗೆ ರವಾನೆ ಮಾಡಲಾಗಿದೆ ಎಂದು ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಮರಣೋತ್ತರ ಪರೀಕ್ಷೆಯ ಬಳಿಕ ಆನೆಯ ಅಂತಿಮ ವಿಧಿ ವಿಧಾನ ನೆರವೇರಿಸಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಒಟ್ಟಾರೆ ಹೇಳುವುದಾದರೆ, ಈ ಆನೆ ಶಿಬಿರದಲ್ಲಿ ಪಳಗಿ, ಮುಂದೆ ಒಂದು ದಿನ ಮೈಸೂರು ದಸರಾದಲ್ಲಿ ಮಿಂಚಬೇಕಿತ್ತು. ಆದರೆ ವಿಧಿ ನಿರ್ಧಾರವೇ ಬೇರೆ ಆಗಿತ್ತು ಅಂತಾ ಕಾಣುತ್ತೆ. ಹೀಗಾಗಿ ಆನೆ ಅಸುನೀಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಈ ಘಟನೆಯಿಂದ ಬೇಸರಗೊಂಡಿದ್ದಾರೆ.












Click it and Unblock the Notifications