ಎಲ್ಲರ ಗಮನಸೆಳೆಯುತ್ತಿದೆ ಚಾಮರಾಜನಗರ ಜಿಪಂ ಸಿಇಓ ಹಾಡಿ ವಾಸ್ತವ್ಯ
ಚಾಮರಾಜನಗರ, ನವೆಂಬರ್.05: ಐಎಎಸ್ ಅಧಿಕಾರಿಯೊಬ್ಬರು ಗುಡ್ಡಗಾಡು ಗಿರಿಜನರಾದ ಸೋಲಿಗರು ವಾಸ ಮಾಡುವ ಹಾಡಿಗೆ ತೆರಳಿ ಅವರೊಂದಿಗೆ ವಾಸ್ತವ್ಯ ಹೂಡಿ, ಅವರ ಆತಿಥ್ಯ ಸ್ವೀಕರಿಸಿ ಗಮನಸೆಳೆದಿದ್ದಾರಲ್ಲದೆ, ಪ್ರತ್ಯಕ್ಷವಾಗಿ ಅವರ ಕಷ್ಟ ಸುಖಗಳನ್ನು ನೋಡಿ ಅಭಿವೃದ್ಧಿ ಮಾಡುವ ಭರವಸೆಯನ್ನು ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಜಿಪಂ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ. ಕೆ.ಹರೀಶ್ಕುಮಾರ್ ಅವರೇ ಸೋಲಿಗರ ಹಾಡಿಯಲ್ಲಿ ವಾಸ್ತವ್ಯ ಹೂಡಿ ಗಮನಸೆಳೆದ ಐಎಎಸ್ ಅಧಿಕಾರಿ. ಇವರು ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿರುವ ಆಲಂಬಾಡಿ ಎಂಬ ಕುಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಿ ಗಿರಿಜನರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಹಾಡಿಗಳ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ.
ಕಾಡುಗೊಲ್ಲರ ಹಟ್ಟಿಯಲ್ಲಿ ಶಾಸಕ ಸುಧಾಕರ್ ಗ್ರಾಮ ವಾಸ್ತವ್ಯ!
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಬಳಿ ಇರುವ ಆಲಂಬಾಡಿ ಗ್ರಾಮಕ್ಕೆ ಶನಿವಾರ ರಾತ್ರಿ ವಾಸ್ತವ್ಯಕ್ಕೆ ಬಂದ ಡಾ.ಕೆ.ಹರೀಶ್ಕುಮಾರ್ ಅವರನ್ನು ಗಿರಿಜನರು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಗ್ರಾಮ ಪಂಚಾಯ್ತಿ ವತಿಯಿಂದ ಗಿರಿಜನರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ಗಳನ್ನು ವಿತರಿಸಿದರು. ಬಳಿಕ ಗಿರಿಜನರ ನೋವು ನಲಿವುಗಳನ್ನು ಆಲಿಸಿದರು.
ಜನಪ್ರಿಯತೆಗೆ ಸಾಕ್ಷಿಯಾಗಿದೆ
ಹೆಚ್ಚಿನ ಅಧಿಕಾರಿಗಳು ಕಚೇರಿಗೆ ಅಂಟಿಕೊಂಡಿರುತ್ತಾರೆ. ಅವರಿಗೆ ಕಾಡಿನ ಜನರ ಸಮಸ್ಯೆಗಳ ಅರಿವು ಇರುವುದಿಲ್ಲ. ಹೀಗಾಗಿ ಸಮಸ್ಯೆ ತಿಳಿಯಲೆಂದೇ ಡಾ. ಕೆ.ಹರೀಶ್ಕುಮಾರ್ ಅವರು ಹಾಡಿಗೆ ಹೋಗುತ್ತಿರುವುದು ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಜನ ಸೇವೆಗೆ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಚಾಮರಾಜನಗರದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು ಮುಂದಾಗಿದ್ದಾರೆ.ಇಂತಹ ಮಾದರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾದರೆ ಭವಿಷ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜನರಿಗೆ ಅನುಕೂಲವಾಗುತ್ತಿದೆ
ಈ ಬಗ್ಗೆ ಮಾತನಾಡುವ ಹಾಡಿಯ ವೆಂಕಟಲಕ್ಷ್ಮಮ್ಮ ಅವರು, ಸಮಾಜದ ಕಟ್ಟ ಕಡೆಯ ಸಮುದಾಯವಾಗಿರುವ ಗಿರಿಜನರು ಮತ್ತು ಸೋಲಿಗರಿಗೆ ನೆರವು ನೀಡುವ ಸಲುವಾಗಿ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳು ಜಿಲ್ಲೆಯ ವಿವಿಧ ಪೋಡು ಮತ್ತು ಹಾಡಿಗಳಿಗೆ ತೆರಳಿ ಅಲ್ಲೇ ವಾಸ್ತವ್ಯ ಹೂಡಿ ಸಾಮಾನ್ಯ ಜನರಂತೆ ಬೆರೆತು ಸರ್ಕಾರದ ಅಧೀನ ಅಧಿಕಾರಿಗಳ ಮೂಲಕ ಮೂಲಭೂತ ಕೆಲಸ ಕಾರ್ಯ ಮುಂದುವರೆಸಲು ಮುಂದಾಗಿರುವುದು ಜನರಿಗೆ ಅನುಕೂಲವಾಗುತ್ತಿದೆ ಎನ್ನುತ್ತಾರೆ.
ಗ್ರಾಮ ವಾಸ್ತವ್ಯ: ದಲಿತ ದಂಪತಿಗೆ ಸ್ವತಃ ಊಟ ಬಡಿಸಿದ ಶ್ರೀರಾಮುಲು
ಗಿರಿಜನರ ಮೇಲೆ ಅಪಾರ ವಿಶ್ವಾಸ
ಇನ್ನು ಹಾಡಿಯ ಮುಖಂಡ ಮಹದೇವು ಮಾತನಾಡಿ, ಐ.ಎ.ಎಸ್. ಅಧಿಕಾರಿಯಾಗಿರುವ ಹರೀಶ್ಕುಮಾರ್ರವರು ಗಿರಿಜನರ ಮತ್ತು ಸೋಲಿಗ ಸಮುದಾಯದ ಮೇಲೆ ಅಪಾರವಾದ ವಿಶ್ವಾಸವಿಟ್ಟು ಜಿಲ್ಲೆಯ ಹಲವಾರು ಪೋಡು ಮತ್ತು ಹಾಡಿಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಆದ್ರೆ ಅಲ್ಲಿ ಜನರಿಗೆ ಏನು ಭರವಸೆ ಕೊಟ್ರು, ನೆರವು ಏನು ನೀಡಿದ್ದಾರೆ ಅನ್ನೋ ಬಗ್ಗೆ ತಿಳಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಮಸ್ಯೆಗಳು ಅರಿಯಲು ಸಾಧ್ಯ
ಗ್ರಾಮ ವಾಸ್ತವ್ಯದಿಂದ ಮತ್ತು ಜನರ ನಡುವೆ ಬೆರತಾಗ ಮಾತ್ರ ಜನರ ನೋವು ನಲಿವು ಸಮಸ್ಯೆಗಳು ಅರಿಯಲು ಸಾಧ್ಯವಾಗಲಿದೆ. ಸರ್ಕಾರ ಯೋಜನೆಗಳನ್ನು ಜನರಿಗೆ ತಲುಪಿಸಲು ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳ ಪಾತ್ರ ಮಹತ್ವವಾದದ್ದು, ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹರೀಶ್ ಕುಮಾರ್ರವರು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಗಮನಕ್ಕೆ ತರಲು ಮುಂದಾಗುತ್ತಿರುವುದು ಉತ್ತಮವಾಗಿದೆ ಎಂಬುದು ದೊಡ್ಡಯ್ಯನವರು ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಜಿಪಂ ಸಿಇಓ ಅವರ ಹಾಡಿ ವಾಸ್ತವ್ಯ ಇದೀಗ ಎಲ್ಲರ ಗಮನಸೆಳೆದಿದ್ದು, ಅವರ ಕಾರ್ಯಗಳು ಕೇವಲ ಗ್ರಾಮವಾಸ್ತವ್ಯಕ್ಕೆ ಸೀಮಿತವಾಗದೆ ಸಮಸ್ಯೆ ಪರಿಹರಿಸುವತ್ತ ಕಾರ್ಯಪ್ರವೃತ್ತರಾಗಬೇಕಿದೆ.