ಜಾತ್ರೆಯಲ್ಲಿ ಮಾರಲೆಂದು ಇದನ್ನು ಬೆಳೆದರಾ ಈ ದಂಪತಿ...
ಚಾಮರಾಜನಗರ, ಜನವರಿ 9: ಕೊಳ್ಳೇಗಾಲ ಬಳಿ ನಾಳೆಯಿಂದ ಆರಂಭವಾಗುತ್ತಿರುವ ಚಿಕ್ಕಲ್ಲೂರು ಜಾತ್ರೆಗೆ ಒಂದೆಡೆ ಭಕ್ತರು ಸಡಗರ ಸಂಭ್ರಮದಿಂದ ಅಣಿಯಾಗುತ್ತಿದ್ದರೆ, ಮತ್ತೊಂದೆಡೆ ದಂಪತಿ ಜಾತ್ರೆಯಲ್ಲಿ ಗಾಂಜಾ ಮಾರಾಟ ಮಾಡಿ ಹಣ ಸಂಪಾದಿಸುವ ಸಲುವಾಗಿ ಗಾಂಜಾ ಬೆಳೆದು ಸಿಕ್ಕಿ ಬಿದ್ದಿದ್ದಾರೆ.
ಹನೂರು ತಾಲೂಕಿನ ದೊಮ್ಮನಗರಿಯ ಗ್ರಾಮದ ನಿವಾಸಿಗಳಾದ ರಂಗುನಾಯ್ಕ, ಆತನ ಪತ್ನಿ ಸರಸಿಬಾಯಿ ಗಾಂಜಾ ಬೆಳೆದಿದ್ದಾರೆ. ಪತ್ನಿ ಮಾಲು ಸಹಿತ ಸಿಕ್ಕಿಬಿದ್ದಿದ್ದು, ರಂಗುನಾಯ್ಕ ಪರಾರಿಯಾಗಿದ್ದಾನೆ. ದೊಮ್ಮನಗದ್ದೆಯಲ್ಲಿ ಈ ದಂಪತಿ ಬದನೆ ಕಾಯಿಯೊಂದಿಗೆ ಗಾಂಜಾ ಬೆಳೆದಿದ್ದು, ಚಿಕ್ಕಲ್ಲೂರು ಜಾತ್ರೆಯಲ್ಲಿ ಅದನ್ನು ಮಾರಾಟ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ.

ಚಿಕ್ಕಲ್ಲೂರು ಜಾತ್ರೆಯಲ್ಲಿ ಕೆಲವರು ಮಾಂಸ ಭೋಜನ ನಡೆಸುತ್ತಿದ್ದು, ಅದಕ್ಕೆ ಗಾಂಜಾವನ್ನು ಸೇರಿಸಿ ಅಡುಗೆ ತಯಾರಿಸುವ ರೂಢಿಯಿದೆ ಎನ್ನಲಾಗಿದೆ. ಹೀಗಾಗಿ ಆ ದಿನ ಗಾಂಜಾ ಮಾರಾಟ ಮಾಡುವ ಸಲುವಾಗಿ ಗಾಂಜಾವನ್ನು ಅಕ್ರಮವಾಗಿ ಬೆಳೆದಿಟ್ಟಿದ್ದರು. ಈ ನಡುವೆ ರಂಗುನಾಯ್ಕ ಮತ್ತು ಸರಸಿಬಾಯಿ ದಂಪತಿ ಬದನೆ ಗಿಡಗಳ ನಡುವೆ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪಿ.ಎಸ್.ಐ ಮನೋಜ್ ಕುರ್ಮಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬರೋಬ್ಬರಿ 89 ಕೆಜಿ ಹಸಿ ಗಾಂಜಾ, ಹಾಗೂ ಮನೆಯಲ್ಲಿದ್ದ 12 ಕೆ.ಜಿ. ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ರಂಗುನಾಯ್ಕ ಪರಾರಿಯಾಗಿದ್ದು, ಆತನ ಪತ್ನಿ ಸರಸಿಬಾಯಿಯನ್ನು ಬಂಧಿಸಲಾಗಿದೆ.












Click it and Unblock the Notifications