ಕೊರೊನಾ ಫ್ರೀ ಆಗಿದ್ದ ಏಕೈಕ ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ ಏರಿಕೆ
ಚಾಮರಾಜನಗರ, ಜೂನ್ 26: ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಪಸರಿಸಿದರೂ ಕೊರೊನಾ ಮುಕ್ತವಾಗಿದ್ದ ಏಕೈಕ ಜಿಲ್ಲೆಯಾಗಿತ್ತು ಗಡಿ ಜಿಲ್ಲೆ ಚಾಮರಾಜನಗರ. ಇದೀಗ ಚಾಮರಾಜನಗರದಲ್ಲೂ ದಿನೇ ದಿನೇ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ.
ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಲಾಕ್ ಡೌನ್ ಸಡಿಲಿಕೆ ನಂತರ ಸಾರಿಗೆ ಸಂಚಾರ ಮುಕ್ತವಾಗುತ್ತಲೇ ಕೊರೊನಾ ವೈರಸ್ ಈ ಗಡಿ ಜಿಲ್ಲೆಗೆ ಕಾಲಿಟ್ಟಿದೆ.
ಇಂದು, ಬೆಂಗಳೂರು ಕೊಳ್ಳೆಗಾಲ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್ ಆರ್ ಟಿಸಿ ಕಂಡಕ್ಟರ್ ಕಂ ಡ್ರೈವರ್ ಗೆ ಸೋಂಕು ದೃಢಪಟ್ಟಿದ್ದು, ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಡಕ್ಟರ್ ವಾಸವಿದ್ದ ಕೊಳ್ಳೆಗಾಲ ಪಟ್ಟಣದ ಮಂಜುನಾಥ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಕೊಳ್ಳೇಗಾಲ ಪಟ್ಟಣದಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಜನರಲ್ಲಿ ಭೀತಿ ಆವರಿಸಿದೆ.

ಗುಂಡ್ಲುಪೇಟೆಯಲ್ಲಿ ಬಾಲಕನಲ್ಲೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಪಟ್ಟಣದ ಕನಕದಾಸ ನಗರದ ಬಾಲಕನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಲುಪೇಟೆ ಒಂದರಲ್ಲೇ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಮೂವರು ಚಾಲಕರು, ಚಾಲಕನ ಪತ್ನಿ, ಇಬ್ಬರು ಬೀಡಿ ಕಟ್ಟುವ ಮಹಿಳೆಯರು, ಓರ್ವ ಕೂಲಿ ಕಾರ್ಮಿಕನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಾಮರಾಜನಗರದಲ್ಲಿ ಪೊಲೀಸ್ ಕಾನ್ಸ್ಟೆಬಲ್, ಭೂಮಾಪಕಿಗೆ ಸೋಂಕು ಬಂದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿದೆ. ಇಲ್ಲಿಗೆ ಭೇಟಿ ನೀಡಿದ್ದ ಸೋಂಕಿತ ಮಹಾರಾಷ್ಟ್ರ ವಿದ್ಯಾರ್ಥಿ ಗುಣಮುಖನಾಗಿ ಡಿಸ್ ಚಾರ್ಜ್ ಆಗಿದ್ದಾನೆ. ಆದರೆ ಜಿಲ್ಲೆಯು ರೆಡ್ ಝೋನ್ ನತ್ತ ಸಾಗುತ್ತಿದೆಯಾ ಎಂಬ ಆತಂಕವೂ ಎದುರಾಗಿದೆ.












Click it and Unblock the Notifications